ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ಗೆ ಹೈಕೋರ್ಟ್ ನೋಟಿಸ್
ಭೋಪಾಲ್, ಆಗಸ್ಟ್ 02: ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಸಂಸತ್ ಸ್ಥಾನಕ್ಕೆ ಆಯ್ಕೆಯಾಗಿದ್ದನ್ನು ಪ್ರಶ್ನಿಸಿದ್ದ ಅರ್ಜಿ ಕುರಿತಂತೆ ಮಧ್ಯಪ್ರದೇಶ ಹೈಕೋರ್ಟಿನಿಂದ ಪ್ರಜ್ಞಾ ಸಿಂಗ್ಗೆ ನೋಟಿಸ್ ನೀಡಲಾಗಿದೆ.
"ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ "ಭ್ರಷ್ಟ ಕ್ರಮ" ಅಳವಡಿಸಿಕೊಂಡಿದ್ದಾರೆ ಮತ್ತು ಪ್ರಚಾರದ ವೇಳೆಯಲ್ಲಿ ಕೋಮು ಭಾವನೆ ಕೆರಳಿಸುವಂತ ಹೇಳಿಕೆಗಳನ್ನು ನೀಡಿದ್ದಾರೆ" ಎಂದು ಪತ್ರಕರ್ತ ರಾಕೇಶ್ ದೀಕ್ಷಿತ್ ಅವರು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು. ರಾಜೇಶ್ ಅವರು ಭೋಪಾಲ್ ಕ್ಷೇತ್ರದ ನಿವಾಸಿಯಾಗಿದ್ದು, ಭೋಪಾಲ್ನಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಕರ್ಕರೆಗೆ ಶ್ರದ್ಧಾಂಜಲಿ ಸಲ್ಲಿಸಬಹುದು, ಗೌರವಿಸುವುದ್ದಕ್ಕಾಗುವುದಿಲ್ಲ: ಆರೆಸ್ಸೆಸ್ ನಾಯಕ
ರಾಜೀವ್ ಪರ ವಕೀಲ ಅರವಿಂದ್ ಶ್ರೀವಾತ್ಸವ್ ಮಾತನಾಡಿ, "2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನೋಟಿಸಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನ್ಯಾಯಾಲಯವು ಸೂಚಿಸಿದೆ" ಎಂದು ಹೇಳಿದರು.
ಲೋಕಸಭಾ ಚುನಾವಣೆ ಪ್ರಚಾರದ ವೇಳೆ, "ಠಾಕೂರ್ ಅವರು ಸೆಕ್ಷನ್ 123 (3) (ಧರ್ಮದ ಆಧಾರದಲ್ಲಿ ಮತ ಕೇಳುವುದು) ಅನ್ವಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು" ಎಂದು ಅರ್ಜಿಯಲ್ಲಿ ದೂರಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಇತರೆ ಅಭ್ಯರ್ಥಿಗಳ ವಿರುದ್ಧ ಮಾನಹಾನಿಯಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ಸೆಕ್ಷನ್ 123(4) ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಹೆಮ್ಮೆ, ಹೇಮಂತ್ ಕರ್ಕರೆ ಮತ್ತು ನಾಥೂ ರಾಮ್ ಗೊಡ್ಸೆ ಬಗ್ಗೆ ನೀಡಿದ ಹೇಳಿಕೆಯೂ ವಿವಾದಕ್ಕೀಡಾಗಿತ್ತು. ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.