ಶಾಸಕರಲ್ಲ, ಆದರೂ ಸಚಿವರಾಗಿದ್ದು ಹೇಗೆ? ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಭೋಪಾಲ್, ಅಕ್ಟೋಬರ್ 22: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ 14 ಶಾಸಕರಲ್ಲದ ಮುಖಂಡರಿಗೆ ಮಧ್ಯಪ್ರದೇಶ ಹೈಕೋರ್ಟ್ನ ಜಬಲ್ಪುರ ಪೀಠ ನೋಟಿಸ್ಗಳನ್ನು ಜಾರಿ ಮಾಡಿದೆ.
ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 14 ಮುಖಂಡರನ್ನು ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರನ್ನಾಗಿ ನೇಮಿಸಲಾಗಿತ್ತು. ಶಾಸಕರಲ್ಲದವರನ್ನು ಸಚಿವರನ್ನಾಗಿ ಹೇಗೆ ನೇಮಿಸಲಾಗಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಮಹಿಳಾ ಅಭ್ಯರ್ಥಿ ಕುರಿತಾದ ಕಮಲ್ ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಖಂಡನೆ
ಈ ಶಾಸಕೇತರ ನಾಯಕರನ್ನು ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಛಿಂದ್ವಾರ ಮೂಲದ ವಕೀಲರಾದ ಆರಾಧನಾ ಭಾರ್ಗವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಯಾದವ್ ಮತ್ತು ನ್ಯಾಯಮೂರ್ತಿ ಆರ್ಕೆ ದುಬೆ ಅವರು ಸಚಿವರು, ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್ ಮತ್ತು ರಾಜ್ಯಪಾಲರು ಸೇರಿದಂತೆ 17 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಶಾಸಕರಾಗದೆ ಇದ್ದ 14 ಮಂದಿಯನ್ನು ಸಚಿವರನ್ನಾಗಿ ಮಾಡಿರುವುದು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಇತಿಹಾಸದಲ್ಲಿ ಎಂದಿಗೂ ನಡೆದಿರಲಿಲ್ಲ. ಇದು ಸಂವಿಧಾನದ 163 ಮತ್ತು 164ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಕಣ್ಣೆದುರೇ ರೈತ ಸತ್ತರೂ ಭಾಷಣ ಮುಂದುವರಿಸಿದ ಬಿಜೆಪಿ ನಾಯಕರು
ಈ ನಡುವೆ 14 ಸಚಿವರ ಪೈಕಿ ಇಬ್ಬರು, ತುಳಸೀರಾಮ್ ಶೀಲವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ತಮ್ಮ ಸ್ಥಾನಗಳಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿದ್ದರು. ಅವರಲ್ಲಿ 14 ಮಂದಿಯನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಆದರೆ ಅವರು ರಾಜೀನಾಮೆ ನೀಡಿದ್ದರಿಂದ ಶಾಸಕರಾಗಿ ಉಳಿದಿಲ್ಲ. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳಿಗೆ ಉಪ ಚುನಾವಣೆ ನಿಗದಿಯಾಗಿದೆ.