ಶ್ರೀಲಂಕಾದಲ್ಲಿ ಸೀತಾ ಮಂದಿರ ನಿರ್ಮಿಸುತ್ತೆ ಮಧ್ಯಪ್ರದೇಶ ಸರ್ಕಾರ!
ಭೂಪಾಲ್, ಜನವರಿ.27: ಶ್ರೀಲಂಕಾದಲ್ಲಿ ಸೀತೆಯ ಭವ್ಯ ಮಂದಿರ ನಿರ್ಮಾಣ ಮಾಡುವುದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಸೀತೆ ಬೆಂಕಿಗೆ ಹಾರಿದಳು ಎಂದೇ ನಂಬಲಾದ ಪ್ರದೇಶದಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಸೋಮವಾರ ಮುಖ್ಯಮಂತ್ರಿ ಕಮಲ್ ನಾಥ್ ಸರ್ಕಾರ ತೀರ್ಮಾನಿಸಿದೆ.
ದಶಕಗಳ ಹಿಂದೆಯೇ ಶ್ರೀಲಂಕಾದಲ್ಲಿ ಸೀತಾ ದೇವಸ್ಥಾನ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಯೋಜನೆಯನ್ನು ಸರ್ಕಾರವು ಕೈಗೆತ್ತಿಕೊಂಡಿರಲಿಲ್ಲ.
ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ?
ಇತ್ತೀಚಿಗಷ್ಟೇ ಕಾನೂನು ಮತ್ತು ಧಾರ್ಮಿಕ ವ್ಯವಹಾರಗಳ ಸಚಿವ ಪಿ ಸಿ ಶರ್ಮಾ ಶ್ರೀಲಂಕಾಗೆ ಭೇಟಿ ನೀಡಿ, ಶ್ರೀಲಂಕಾ ಅಧ್ಯಕ್ಷ ಗೋತಬಯಾ ರಾಜಪಕ್ಸೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಸಿಎಂ ಕಮಲ್ ನಾಥ್ ದೇವಸ್ಥಾನ ನಿರ್ಮಾಣದ ಪ್ರಸ್ತಾವನೆಯನ್ನು ಅಂಗೀಕರಿಸಿದ್ದಾರೆ.
ಸೀತಾ ದೇವಸ್ಥಾನ ನಿರ್ಮಾಣಕ್ಕೆ ಸಮಿತಿ ರಚನೆ:
ಇನ್ನು, ಶ್ರೀಲಂಕಾದ ಬುದ್ಧ ವಿಹಾರ ದಿವುಕುಂಪೋಲಾ ಪ್ರದೇಶದಲ್ಲಿ ಸೀತಾ ದೇವಸ್ಥಾನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಅದಕ್ಕಾಗಿ ಶ್ರೀಲಂಕಾ ಮತ್ತು ಮಧ್ಯಪ್ರದೇಶದ ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲೇ ದೇವಸ್ಥಾನ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸರ್ಕಾರವು ಈ ದೇವಸ್ಥಾನ ನಿರ್ಮಾಣಕ್ಕಾಗಿ ಹಣವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಕಮಲ್ ನಾಥ್ ತಿಳಿಸಿದ್ದಾರೆ.
ಸೀತೆಯ ಬಂಗಾರವನ್ನು ಹೂತಿಟ್ಟ ಜಾಗದಲ್ಲೇ ದೇವಸ್ಥಾನ:
ಈ ಹಿಂದೆ ಸೀತೆಯು ದಿವುಕುಂಪೋಲಾ ಪ್ರದೇಶದ ಬುದ್ಧ ವಿಹಾರದ ಬಳಿಯೇ ತನ್ನ ಒಡವೆಗಳನ್ನೆಲ್ಲ ಹೂತಿಟ್ಟಿದ್ದಳು ಎಂದು ಸ್ಥಳೀಯರ ನಂಬಿಕೆಯಾಗಿದೆ. ಅದೇ ಪ್ರದೇಶದಲ್ಲಿ ಇದೀಗ ದೇವಸ್ಥಾನ ನಿರ್ಮಾಣ ಮಾಡಲು ಮಧ್ಯಪ್ರದೇಶ ಸರ್ಕಾರವು ಮುಂದಾಗಿದೆ.