ಕಣ್ಣೆದುರೇ ರೈತ ಸತ್ತರೂ ಭಾಷಣ ಮುಂದುವರಿಸಿದ ಬಿಜೆಪಿ ನಾಯಕರು
ಖಾಂಡ್ವಾ, ಅಕ್ಟೋಬರ್ 19: ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಭಾಷಣ ಮಾಡಬೇಕಿದ್ದ ಸಂದರ್ಭದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಭಾನುವಾರ ಸಾರ್ವಜನಿಕ ಸಭೆ ನಡೆಯುವ ಸಂದರ್ಭದಲ್ಲಿ 80 ವರ್ಷದ ರೈತ ಮೃತಪಟ್ಟಿದ್ದಾರೆ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆ ಸಂಬಂಧ ಈ ಪ್ರಚಾರ ಸಭೆ ಆಯೋಜಿಸಲಾಗಿತ್ತು.
ಬಿಜೆಪಿ ಸೇರಿಕೊಂಡ ಮಹಿಳಾ ಅಭ್ಯರ್ಥಿಯನ್ನು 'ಐಟಂ' ಎಂದ ಕಮಲ್ ನಾಥ್: ವ್ಯಾಪಕ ಆಕ್ರೋಶ
ಬಿಜೆಪಿಯ ಪಂಧಾನ ಕ್ಷೇತ್ರದ ಶಾಸಕ ರಾಮ್ ಡಾಂಗೊರೆ ಭಾಷಣ ಮಾಡುವ ಸಂದರ್ಭದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ರೈತ ಜೀವನ್ ಸಿಂಗ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕರೆತರುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಡಾಂಗೊರೆ ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಕೊರೊನಾ ವೈರಸ್ ಭೀತಿಯ ನಡುವೆಯೂ ಸಭೆಗೆ ಹಾಜರಾಗಿದ್ದರು. ಅವರು ಮೃತಪಟ್ಟಿರುವುದು ತಿಳಿದರೂ ಬಿಜೆಪಿ ನಾಯಕರು ತಮ್ಮ ಪ್ರಚಾರ ನಿಲ್ಲಿಸದೆ ಇರುವುದು ಟೀಕೆಗೆ ಗುರಿಯಾಗಿದೆ. ಮುಂದೆ ಓದಿ...
ಭಾಷಣ ಮುಂದುವರಿಸಿದರು
ರೈತ ಕುಸಿದು ಬೀಳುತ್ತಿದ್ದಂತೆ ಅವರ ಅಕ್ಕ ಪಕ್ಕ ಕುಳಿತಿದ್ದವರೆಲ್ಲರೂ ಗಾಬರಿಯಾಗಿ ಚೆಲ್ಲಾಪಿಲ್ಲಿಯಾಗಿ ಓಡಿದರು. ಮೃತ ರೈತ ಕುಳಿತಿದ್ದ ಕುರ್ಚಿಯ ಹೊರತಾಗಿ ಅಲ್ಲಿನ ಎಲ್ಲ ಕುರ್ಚಿಗಳೂ ಖಾಲಿಯಾದವು. ವ್ಯಕ್ತಿಯೊಬ್ಬರು ಮೃತ ರೈತನ ಮುಖದ ಮೇಲೆ ಟವೆಲ್ ಹೊದಿಸಿದರು. ರೈತ ಮೃತಪಟ್ಟಿರುವುದು ಗೊತ್ತಾದ ಬಳಿಕವೂ ಬಿಜೆಪಿ ನಾಯಕರು ತಮ್ಮ ಭಾಷಣ ಮುಂದುವರಿಸಿದ್ದರು.
ಸಂತಾಪ ಸೂಚಿಸಿದ ಸಿಂಧಿಯಾ
ಸಿಂಧಿಯಾ ಅವರು ವೇದಿಕೆ ಪ್ರವೇಶಿಸಿದಾಗ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ರೈತನ ಸಾವಿನ ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಮೃತ ರೈತರಿಗೆ ಸಂತಾಪ ಸೂಚಿಸಿ ಎಂದು ನಿಮಿಷ ಮೌನ ಆಚರಿಸಿದ ಸಿಂಧಿಯಾ, ತಮ್ಮ ಭಾಷಣ ಆರಂಭಿಸಿದ್ದರು.
|
ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ
ಬಿಜೆಪಿ ಮುಖಂಡರ ವರ್ತನೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. 80 ವರ್ಷದ ವೃದ್ಧನನ್ನು ಚುನಾವಣಾ ಸಭೆಗೆ ಬರಲು ಅವಕಾಶ ನೀಡಿದ್ದು, ಕೊರೊನಾ ವೈರಸ್ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ರೈತ ಕಣ್ಣೆದುರೇ ಮೃತಪಟ್ಟಿದ್ದರೂ ಬಿಜೆಪಿ ನಾಯಕರು ಭಾಷಣ ಮುಂದುವರಿಸಿದ್ದು ನಾಚಿಕೆಗೇಡು. ರೈತನ ಹೆಣ ಬಿದ್ದಿದ್ದರೂ ಬಿಜೆಪಿ ನಾಯಕರು ಚಪ್ಪಾಳೆ ತಟ್ಟುತ್ತಿದ್ದರು ಎಂದು ಕಾಂಗ್ರೆಸ್ ಟೀಕಿಸಿದೆ.
ಸಿಂಧಿಯಾ ತಿರುಗೇಟು
ಸಿಂಧಿಯಾ ಅವರು ಹೃದಯ ಹೀನರಾಗಿರಬೇಕು ಅಥವಾ ಇಷ್ಟು ವರ್ಷ ಅವರು ರೈತರ ಪರ ಇದ್ದವರಂತೆ ನಾಟಕವಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಧಿಯಾ, 'ನಾನು ಸ್ಥಳಕ್ಕೆ ಬರುತ್ತಿದ್ದಂತೆಯೇ ಈ ದುರಂತದ ಬಗ್ಗೆ ತಿಳಿಯಿತು. ನಮ್ಮ ಅನ್ನದಾತನಿಗೆ ಮೊದಲು ಮೌನಾಚರಣೆ ಮೂಲಕ ಗೌರವ ಸಲ್ಲಿಸಿದೆ. ನನಗೆ ರಾಜಕೀಯವು ಸಾರ್ವಜನಿಕ ಸೇವೆಯ ವೇದಿಕೆ. ಕಾಂಗ್ರೆಸ್ನಿಂದ ನನಗೆ ಪ್ರಮಾಣಪತ್ರ ಬೇಕಿಲ್ಲ. ಎಂದಿನಂತೆ ಸೂಕ್ಷ್ಮ ಸಂಗತಿಗಳಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಸಿಂಧಿಯಾ ತಿರುಗೇಟು ನೀಡಿದ್ದಾರೆ.