ಎಂಪಿಯಲ್ಲಿ ರೋಚಕ ಸ್ಪರ್ಧೆಯಲ್ಲಿ ಕಡೆಗೂ ಗೆದ್ದಿದ್ದು ಕಾಂಗ್ರೆಸ್!
ಬೆಂಗಳೂರು, ಡಿಸೆಂಬರ್ 12 : ಐದು ರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ರೋಚಕ ಫಲಿತಾಂಶ ನೀಡಿದ್ದು ಮಧ್ಯ ಪ್ರದೇಶ. ಕಡೆಯ ಘಳಿಗೆಯವರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ಪಕ್ಷ ಮೇಲುಗೈ ಸಾಧಿಸುವಂಥ ಸನ್ನಿವೇಶ ಎದುರಾಗಿತ್ತು. ಕಡೆಗೂ ಕಾಂಗ್ರೆಸ್ ಅಲ್ಪ ಮೇಲುಗೈ ಸಾಧಿಸಿದೆ.
230 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತ ಸಾಬೀತುಪಡಿಸಲು ಯಾವುದೇ ಪಕ್ಷಕ್ಕೆ ಬೇಕಾಗಿದ್ದು 116 ಸ್ಥಾನಗಳು. ಬಿಜೆಪಿಗೆ ಭರ್ಜರಿ ಎದುರೇಟು ನೀಡಿರುವ ಕಾಂಗ್ರೆಸ್ 114 ಸ್ಥಾನ ಗಳಿಸಲು ಯಶಸ್ವಿಯಾಗಿದೆ. ಬಹುಮತಕ್ಕೆ ಕೇವಲ ಎರಡೇ ಸ್ಥಾನ ಕಡಿಮೆ. ಈ ಎರಡು ಸ್ಥಾನಗಳ ಬೆಂಬಲ ಪಡೆಯಲು ಅದಕ್ಕೆ ಕಷ್ಟವಾಗಲಿಕ್ಕಿಲ್ಲ.
ಕಳೆದ 15 ವರ್ಷಗಳಿಂದ ಆಡಳಿತದ ರುಚಿ ಅನುಭವಿಸಿದ ಭಾರತೀಯ ಜನತಾ ಪಕ್ಷಕ್ಕೆ ಈಬಾರಿ ಮತದಾರರು ಕಹಿ ಉಣಬಡಿಸಿದ್ದಾರೆ. ಬಿಜೆಪಿ ಉತ್ತಮ ಹೋರಾಟ ತೋರಿದರೂ ಕೇವಲ 109 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಪ್ರಮುಖವಾದ ಅನ್ಯ ಪಕ್ಷವೇ ಇಲ್ಲದ್ದರಿಂದ, ಕಡಿಮೆ ಸ್ಥಾನ ಗಳಿಸಿದ್ದರೂ ಇತರರ ಬೆಂಬಲ ಪಡೆದು ಆಡಳಿತ ನಡೆಸುವ ಅವಕಾಶ ಬಿಜೆಪಿಗೆ ಇಲ್ಲವೇ ಇಲ್ಲ.
ಬಹುಕಾಲ ನೆನಪಿನಲ್ಲುಳಿಯುವ ಮಧ್ಯ ಪ್ರದೇಶ ಜಿದ್ದಾಜಿದ್ದಿ ಫೈಟ್!
ಇವೆರಡು ಪ್ರಮುಖ ಪಕ್ಷಗಳನ್ನು ಬಿಟ್ಟರೆ ಸ್ಪರ್ಧೆಯಲ್ಲಿ ಇದ್ದದ್ದು ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಮತ್ತಿತರ ಸಣ್ಣಪುಟ್ಟ ಪಕ್ಷಗಳು. ಇವುಗಳಲ್ಲಿ ಸಮಾಜವಾದಿ ಪಕ್ಷಕ್ಕೆ 1 ಸ್ಥಾನ ದಕ್ಕಿದ್ದರೆ, ಕಳೆದ ಬಾರಿ ನಾಲ್ಕು ಸ್ಥಾನ ಗೆದ್ದು, ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಬೀಗಿದ್ದ ಬಹುಜನ ಸಮಾಜ ಪಕ್ಷ ಕೇವಲ 2 ಸ್ಥಾನ ಗೆದ್ದು ಭಾರೀ ಮುಖಭಂಗ ಅನುಭವಿಸಿದೆ. ಉಳಿದ ನಾಲ್ಕು ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿವೆ. ಈಗ ಈ ಸ್ವತಂತ್ರ ಅಭ್ಯರ್ಥಿಗಳೇ ಕಾಂಗ್ರೆಸ್ಸಿಗೆ ಆಸರೆ.
ಯಾವ್ಯಾವ ಪಕ್ಷ ಕಾಂಗ್ರೆಸ್ಸಿಗೆ ಬೆಂಬಲ ನೀಡಿವೆ
ಈಗಾಗಲೆ ಸಮಾಜವಾದಿ ಪಕ್ಷ ಒಂದೇ ಸ್ಥಾನ ಗೆದ್ದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿದೆ. ಬಹುಜನ ಸಮಾಜವಾದಿ ಪಕ್ಷದಿಂದ ಬೆಂಬಲ ನೀಡುವ ಯಾವುದೇ ಸುಳಿವು ಇನ್ನೂ ಬಂದಿಲ್ಲ. ಈ ಸಂದರ್ಭದ ಭರ್ತಿ ಲಾಭ ಪಡೆಯಲು ಬಿಎಸ್ಪಿಯ ನಾಯಕಿ ಮಾಯಾವತಿ ಯತ್ನಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿಯೂ ಅವರಿಗೆ ಮುಖಭಂಗವಾದರೂ ಅಚ್ಚರಿಯಿಲ್ಲ. ಏಕೆಂದರೆ, ಕಾಂಗ್ರೆಸ್ಸಿನಿಂದ ಮುನಿಸಿಕೊಂಡು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ನಾಲ್ಕು ಅಭ್ಯರ್ಥಿಗಳು ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆ ನಾಲ್ವರಿಗೂ ಬಂಪರ್.
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್ : ಕಾಂಗ್ರೆಸ್
ಫಲಿತಾಂಶ ಪ್ರಕಟಣೆ ತಡ ಮಾಡಿದ್ದು ಏಕೆ?
ಅಚ್ಚರಿಯ ಸಂಗತಿಯೆಂದರೆ, ಮತಎಣಿಕೆ ಪ್ರಾರಂಭವಾಗಿ 24 ಗಂಟೆಗಳ ನಂತರ ಮಧ್ಯ ಪ್ರದೇಶದ ಫಲಿತಾಂಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಅಲ್ಲಿಯವರೆಗೆ, ಕಾಂಗ್ರೆಸ್ ಮತ್ತು ಬಿಜೆಪಿ ಸ್ಥಳೀಯ ನಾಯಕರು ನಿದ್ದೆ ಮಾಡಿಲ್ಲ. ಎರಡೂ ಪಕ್ಷಗಳ ನಡುವೆ ಭಾರೀ ತುರುಸಿನ ಸ್ಪರ್ಧೆ ಇದ್ದಿದ್ದರಿಂದ ಯಾರ ಪರವಾಗಿಯೂ ಗೆಲುವು ವಾಲುವ ಸಾಧ್ಯತೆ ಇತ್ತು. ಚುನಾವಣಾ ಆಯೋಗ ಮತ್ತು ಕೆಲ ಐಎಎಸ್ ಅಧಿಕಾರಿಗಳು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹತ್ತಿರದವರಾದ್ದರಿಂದ ಫಲಿತಾಂಶ ತಡಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಧ್ಯ ಪ್ರದೇಶ ಅತಂತ್ರ? ಯಾರ ಕೈಗೂ ಸಿಗದ ಪ್ರಳಯಾಂತಕಿ ಮಾಯಾವತಿ
ಕಮಲ್ ನಾಥ್ ರಿಂದ ರಾಜ್ಯಪಾಲರಿಗೆ ಪತ್ರ
ಕಾಂಗ್ರೆಸ್ 114 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ತಮಗೇ ಸರಕಾರ ರಚಿಸಲು ಅವಕಾಶ ನೀಡಬೇಕೆಂದು, ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಅವರು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಗೆ ಮಂಗಳವಾರ ರಾತ್ರಿಯೇ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮ್ಮ ಬಳಿ ಎಲ್ಲ ಸ್ವತಂತ್ರ ಅಭ್ಯರ್ಥಿಗಳ ಬೆಂಬಲವಿದೆ. ತಮ್ಮ ಭೇಟಿಗೆ ಅನುಮತಿ ನೀಡಬೇಕೆಂದು ಕೋರಿ ಕಮಲ್ ನಾಥ್ ಅವರು ಪತ್ರ ಬರೆದಿದ್ದಾರೆ. ಇನ್ನೂ ರಾಜ್ಯಪಾಲರಿಂದ ಆಹ್ವಾನ ಬರಬೇಕಿದೆ.
ಮಧ್ಯಪ್ರದೇಶದ ಮುಂದಿನ ಸಿಎಂ ಯಾರು? ಕಮಲ್ ನಾಥ್ ಏನಂತಾರೆ?
ಕಮಲ್ ನಾಥ್ ಮತ್ತು ಸಿಂಧಿಯಾ ನಡುವೆ ಸ್ಪರ್ಧೆ
ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ 72 ವರ್ಷದ ಹಿರಿಯ ನಾಯಕ ಕಮಲ್ ನಾಥ್ ಅವರು ಪ್ರಮಾಣ ವಚನ ಸ್ವೀಕರಿಸುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಕಮಲ್ ನಾಥ್ ಮತ್ತು ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಆದರೆ, ಕಮಲ್ ನಾಥ್ ಅವರು ರಾಹುಲ್ ಗಾಂಧಿಗೆ ತೀರ ಹತ್ತಿರದವರಾದ್ದರಿಂದ ಮತ್ತು ಸಿಂಧಿಯಾ ಅವರಿಗೆ ಇನ್ನೂ ಅನುಭವ ಬೇಕಾಗಿರುವುದರಿಂದ ಕಮಲ್ ನಾಥ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದು ಖಚಿತವಾಗಿದೆ.