ತನ್ನ ಮೇಲೆ 3 ರೈಲು ಹಾದುಹೋದರೂ ಬದುಕುಳಿದ, 'ಅಪ್ಪ ಬಂದ್ರು' ಎಂದು ಎದ್ದುಕುಳಿತ!
ಭೋಪಾಲ್, ಅಕ್ಟೋಬರ್ 22: ಒಂದಲ್ಲ, ಎರಡಲ್ಲ, ಮೂರು ರೈಲುಗಳು ಆ ರೈಲ್ವೆ ಹಳಿಯ ಮೇಲೆ ಹಾದು ಹೋಗಿತ್ತು. ರೈಲ್ವೆ ಇಲಾಖೆಯ ಸಿಬ್ಬಂದಿಯೊಬ್ಬರು ಹಳಿ ಮೇಲೆ ದೇಹವೊಂದು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂರು ರೈಲುಗಳು ಆಗಲೇ ಹಾದುಹೋಗಿರುವುದರಿಂದ ಹಳಿಯ ಮೇಲೆ ಬಿದ್ದಿರುವ ವ್ಯಕ್ತಿ ಬದುಕಿರಲು ಸಾಧ್ಯವೇ ಇಲ್ಲ. ಆತನ ಛಿದ್ರವಾದ ದೇಹವನ್ನು ತೆಗೆಯಬೇಕಲ್ಲ ಎಂದು ಹಳಿಯ ಬಳಿ ಹೋದ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.
ಮಧ್ಯಪ್ರದೇಶದ ಅಶೋಕನಗರದಲ್ಲಿ ವ್ಯಕ್ತಿಯೊಬ್ಬನ ದೇಹ ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ಮೂರು ರೈಲುಗಳು ಆ ಹಳಿಯ ಮೇಲೆಯೇ ಹಾದು ಹೋಗಿದ್ದವು. ಅಲ್ಲಿಗೆ ಧಾವಿಸಿದ್ದ ಪೊಲೀಸರು ಆ ವ್ಯಕ್ತಿ ಆಗಲೇ ಸತ್ತಿರುತ್ತಾನೆ ಎಂದು ಭಾವಿಸಿದ್ದರು. ಹಳಿಯ ಸಮೀಪ ಹೋಗುತ್ತಿದ್ದಂತೆಯೇ, ಹೆಣದಂತೆ ಬಿದ್ದುಕೊಂಡಿದ್ದ ಆತ ಎದ್ದು ಕುಳಿತಿದ್ದಾನೆ. ಅಷ್ಟಕ್ಕೆ ಸೀಮಿತಗೊಂಡಿದ್ದರೆ ಇದೊಂದು ಪವಾಡಸದೃಶ ಘಟನೆ ಎಂದು ಹೇಳಬಹುದಿತ್ತು. ಆದರೆ ಎದೆನಡುಗಿಸುವ ಘಟನೆ ಹಾಸ್ಯದ ಪ್ರಸಂಗವಾಗಿ ಬದಲಾಯಿತು. ಗಾಬರಿಯಿಂದಲೇ ತೆರಳಿದ್ದ ಪೊಲೀಸರು ನಕ್ಕು ನಕ್ಕು ಸುಸ್ತಾದರು. ಇದಕ್ಕೆ ಕಾರಣವಾಗಿದ್ದು ಹಳಿಯ ಮೇಲೆ 'ಹೆಣ'ವಾಗಿದ್ದ ಆ ಮಹಾನುಭಾವ.
ರೈಲು ಡಿಕ್ಕಿಯಾಗಿ ಆನೆ ಸಾವು: ಭೀಕರ ಘಟನೆಯ ವೈರಲ್ ವಿಡಿಯೋ
ಘಟನೆ ಏನಾಗಿರಬಹುದು ಎಂದು ಗೊಂದಲ ಉಂಟಾಗುತ್ತಿದೆಯೇ ಅಥವಾ ವಿಚಿತ್ರ ಎನಿಸುತ್ತದೆಯೇ? ದೊಡ್ಡ ದುರಂತ ಆಗುವಂಥದ್ದು, ತಮಾಷೆಯ ಪ್ರಹಸನದಂತೆ ಸುಖಾಂತ್ಯವಾಗಿದ್ದಂತೂ ನಿಜ.
ಅಪ್ಪ ಬಂದ್ರು ಎಂದ!
ರೈಲ್ವೆ ಹಳಿಗಳ ಮೇಲೆ ದೇಹವೊಂದು ಬಿದ್ದಿದೆ ಎಂದು ಎಂಜಿನ್ ಪೈಲಟ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಅಲ್ಲಿಗೆ ಆಗಮಿಸುವ ವೇಳೆಗಾಗಲೇ ಆ ದೇಹದ ಮೇಲೆ ಮೂರು ರೈಲುಗಳು ಹಾದು ಹೋಗಿದ್ದವು. ಆ ವ್ಯಕ್ತಿ ಆಗಲೇ ಸತ್ತುಹೋಗಿರುತ್ತಾನೆ ಎಂದು ಪೊಲೀಸರು ಅಂದುಕೊಂಡಿದ್ದರು. ಆ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಒಂದು ಕ್ಷಣ ಬೆಚ್ಚಿಬಿದ್ದರು. ಹಳಿ ಮೇಲೆ ಬಿದ್ದಿದ್ದ ವ್ಯಕ್ತಿ ಎದ್ದು ನಿಂತು, 'ಅಪ್ಪ ಬಂದ್ರು' ಎಂದು ಹೇಳಿದ.
ಕಂಠಪೂರ್ತಿ ಕುಡಿದಿದ್ದ
ಕೊನೆಗೆ ಸಾವರಿಸಿಕೊಂಡ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದರು. ಒಮ್ಮೆ ಎದ್ದು ನಿಂತಿದ್ದವ ಮತ್ತೆ ಹಾಗೆಯೇ ಸ್ಥಿರವಾಗಿ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ. ತೂರಾಡುತ್ತಾ ಬೀಳುತ್ತಿದ್ದವ ಕಂಠಪೂರ್ತಿ ಕುಡಿದಿದ್ದ. ಆತನ ಹೆಸರು ಧರ್ಮೇಂದ್ರ ಎನ್ನುವುದು ಪತ್ತೆಯಾಯಿತು.
150 ರೈಲು, 50 ರೈಲು ನಿಲ್ದಾಣ ಖಾಸಗಿಯಿಂದ ಕಾರ್ಯಾಚರಣೆಗೆ ಯೋಜನೆ
ರೈಲು ಹೋಗಿದ್ದೂ ಗೊತ್ತಾಗಿಲ್ಲ
ಆತ ಎಷ್ಟು ಕುಡಿದಿದ್ದನೆಂದರೆ ರೈಲ್ವೆ ಹಳಿಯ ಮೇಲೆ ಏಕೆ ಮಲಗಿದ್ದೆ ಎಂಬುದೇ ಆತನಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲ, ತನ್ನ ಮೇಲೆ ಮೂರು ರೈಲುಗಳು ಹಾದು ಹೋಗಿವೆ ಎಂಬ ಸಂಗತಿಯೂ ಗೊತ್ತಿರಲಿಲ್ಲ. 'ಅಪ್ಪ ಬಂದ್ರು' ಎಂದು ತಮ್ಮನ್ನು ಕಂಡಕೂಡಲೇ ಏಕೆ ಹೇಳಿದ ಎಂಬುದನ್ನು ಕಂಡುಕೊಳ್ಳಲು ಪೊಲೀಸರಿಗೂ ಸಾಧ್ಯವಾಗಿಲ್ಲ!
ನಿನ್ನ ಮೇಲೆಯೇ ಮೂರು ರೈಲುಗಳು ಹಾದು ಹೋಗಿವೆ ಎಂದು ಪೊಲೀಸರು ಆತನಿಗೆ ಮನವರಿಕೆ ಮಾಡಿದ ಬಳಿಕ ಆತನ ಕುಡಿತದ ಅಮಲೆಲ್ಲವೂ ಜರ್ರನೆ ಇಳಿದುಹೋಗಿದೆ.
ಹಳಿಯ ಮೇಲೆ ನಿದ್ರೆ
ಅಶೋಕ ನಗರ ರೈಲ್ವೆ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ರೈಲ್ವೆ ಹಳಿ ಮೇಲೆ ಆತ ಹಾಯಾಗಿ ನಿದ್ರಿಸಿದ್ದ. ನಿಯಂತ್ರಣಕ್ಕೂ ಮೀರಿ ಕುಡಿದಿದ್ದ ಆತನಿಗೆ ನಶೆಯಲ್ಲಿ ಎಲ್ಲಿ ಹೋಗುತ್ತಿದ್ದೇನೆ, ಏಕೆ ಹೋಗುತ್ತಿದ್ದೇನೆ ಎಂಬ ಜ್ಞಾನವೂ ಇರಲಿಲ್ಲ. ಧರ್ಮೇಂದ್ರನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿ ವರದಿ ಪರಿಶೀಲಿಸಿದ ಬಳಿಕ ಮನೆಗೆ ಬಿಟ್ಟುಬರಲಾಯಿತು.
ಶೀಘ್ರ ಬೆಂಗಳೂರಲ್ಲಿ ಸಬ್ಅರ್ಬನ್ ರೈಲು ಸಂಚಾರ, ಎಲ್ಲಿಗೆ ಹೆಚ್ಚು ಟ್ರಿಪ್