ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಶ್ರುವಾಯು ಪ್ರಯೋಗ
ಭೋಪಾಲ್, ಜನವರಿ 23: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ ಘಟನೆ ಶನಿವಾರ ಮಧ್ಯಪ್ರದೇಶದ ಭೋಪಾಲ್ದಲ್ಲಿ ನಡೆದಿದೆ. ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಮತ್ತು ಜೈವರ್ಧನ್ ಸಿಂಗ್ ಸೇರಿದಂತೆ ಅನೇಕ ನಾಯಕರನ್ನು ಬಂಧಿಸಲಾಗಿದೆ.
ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕಮಲ್ ನಾಥ್ ನೇತೃತ್ವದಲ್ಲಿ ರಾಜಭವನಕ್ಕೆ ಘೆರಾವ್ ಹಾಕಲು ಮೆರವಣಿಗೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.
'ರಾಜ್ಯಪಾಲರ ನಿವಾಸದತ್ತ ಮೆರವಣಿಗೆ ಹೊರಟಿದ್ದ ಪಕ್ಷದ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ಜಲಫಿರಂಗಿ ಸಿಡಿಸಿದರು ಮತ್ತು ಲಾಠಿ ಪ್ರಹಾರ ಮಾಡಿದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆರವಣಿಗೆ ವೇಳೆ ಗದ್ದಲ ನಡೆಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಿ ಶಿಸ್ತು ಮೂಡಿಸಲು ಸಣ್ಣ ಪ್ರಮಾಣದಲ್ಲಿ ಬಲ ಪ್ರಯೋಗಿಸಲಾಯಿತು ಎಂದು ಅವರು ಹೇಳಿದ್ದಾರೆ.
ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಭೋಪಾಲ್ ಉಪ ಪೊಲೀಸ್ ನಿರ್ದೇಶಕ ಇರ್ಷಾದ್ ವಾಲಿ ತಿಳಿಸಿದ್ದಾರೆ.
#WATCH Madhya Pradesh: Police use water cannons to disperse Congress workers who were taking out a march from Jawahar Chowk to Raj Bhavan in Bhopal, in the support of farmers. pic.twitter.com/7Jz6s5tdpv
— ANI (@ANI) January 23, 2021
ಕೃಷಿ ಕಾಯ್ದೆಗಳನ್ನು ರದ್ದಗೊಳಿಸಬೇಕೆಂಬ ಪಕ್ಷದ ಬೇಡಿಕೆಯ ಕಡೆಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗಿತ್ತು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಕಾಯ್ದೆಗಳ ರದ್ದತಿಗೆ ಕೋರಿ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಮಧ್ಯಪ್ರದೇಶ ಕಾಂಗ್ರೆಸ್ ಘಟಕ ತಿಳಿಸಿದೆ.