ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಬೆರಳಿಗೆ ಶಸ್ತ್ರಚಿಕಿತ್ಸೆ
ಭೋಪಾಲ್, ಜೂನ್ 22: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸರ್ಕಾರಿ ಸ್ವಾಮ್ಯದ ಹಮಿದಿಯಾ ಆಸ್ಪತ್ರೆಯಲ್ಲಿ ಶನಿವಾರ ಉಂಗುರುದ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು.
ಸಂಜೆ ವೇಳೆಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಕಮಲ್ ನಾಥ್ ಅವರು ಹಮಿದಿಯಾ ಆಸ್ಪತ್ರೆಗೆ ದಾಖಲಾದರು. ವೈದ್ಯರ ತಂಡ ಅವರ ಉಂಗುರದ ಬೆರಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಿತು ಎಂದು ಗಾಂಧಿ ವೈದ್ಯಕೀಯ ಕಾಲೇಜಿನ ಡೀನ್ ಅರುಣ ಕುಮಾರ್ ತಿಳಿಸಿದ್ದಾರೆ.
ಅವರ ಬಲಗೈ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರನ್ನು ಹಲವು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗುತ್ತದೆ. ಬಳಿಕ ಸಂಜೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕಮಲ್ ನಾಥ್ ಅವರ ಬಲಗೈ ಉಂಗುರದ ಬೆರಳು ತೀವ್ರವಾಗಿ ನೋಯುತ್ತಿದ್ದು, ಸೆಳೆತ ಉಂಟಾಗುತ್ತಿತ್ತು. ಅದನ್ನು ಬಗ್ಗಿಸಲು ಅಥವಾ ನೇರಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಶುಕ್ರವಾರ ಸಂಜೆ ಬೆರಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ವಾಗತಿಸಿದ್ದಾರೆ. ನೀವು ಈ ಆಸ್ಪತ್ರೆಯಲ್ಲಿ ಪಡೆದ ಸೌಲಭ್ಯಗಳು ಜನಸಾಮಾನ್ಯರಿಗೂ ದೊರಕುವಂತಾಗಲಿ. ಇದರಿಂದ ಅವರು ಸವಲತ್ತುಗಳಿಗಾಗಿ ಬೇರೆಡೆ ಅಲೆಯುವುದು ತಪ್ಪಲಿ ಎಂದು ಹೇಳಿದ್ದಾರೆ.