ಹಿಡಿದ ಹಠ, ಬಿಡದ ಪಟ್ಟು: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಜ್ಯೋತಿರಾದಿತ್ಯ ಸಿಂಧಿಯಾ ಬಿಸಿತುಪ್ಪ
ಭೋಪಾಲ್, ಜುಲೈ 8: 2005-2018ರ ತಮ್ಮ ಮೂರು ಅವಧಿಯಲ್ಲಿ ನಿರಾಯಾಸವಾಗಿ ಆಡಳಿತ ನಡೆಸಿಕೊಂಡು ಹೋಗಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ, ನಾಲ್ಕನೇ ಬಾರಿಗೆ ಸುಲಭವಾಗಿ ಅಧಿಕಾರ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.
ಬಿಜೆಪಿಗೆ ಸೇರ್ಪಡೆಗೊಂಡಿರುವ ರಾಜ್ದ ಮತ್ತೋರ್ವ ಪ್ರಭಾವೀ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲದಿಂದ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿರುವುದು. ಈ ಕಾರಣಕ್ಕಾಗಿ, ಶಿವರಾಜ್ ಸಿಂಗ್ ಸರಕಾರದ ಮೇಲೆ ತನ್ನ ಬಿಗಿಹಿಡಿತವನ್ನು ಸಿಂಧಿಯಾ ಮುಂದುವರಿಸಿದ್ದಾರೆ.
ಕಳೆದ ವಾರ ಸಂಪುಟ ವಿಸ್ತರಣೆಯ ವೇಳೆಯೂ ತಮ್ಮ ಶಕ್ತಿಪ್ರದರ್ಶನ ಮಾಡಿದ್ದ ಸಿಂಧಿಯಾ, ಈಗ, ಖಾತೆ ಹಂಚಿಕೆಯ ವಿಚಾರದಲ್ಲೋ ಒತ್ತಡವನ್ನು ಹೇರುತ್ತಿದ್ದಾರೆಂದು ವರದಿಯಾಗಿದೆ. ಈ ಕಾರಣಕ್ಕಾಗಿ, ಸಂಪುಟ ವಿಸ್ತರಣೆಯಾದರೂ, ಖಾತೆ ಇನ್ನೂ ಹಂಚಿಕೆಯಾಗಿಲ್ಲ.
'ಟೈಗರ್ ಅಭಿ ಜಿಂದಾ ಹೈ' ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಂಧಿಯಾ
ಮಧ್ಯ ಪ್ರದೇಶದಲ್ಲೂ ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರು ಎನ್ನುವ ಬಣ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿ, ಮೂಲ ಬಿಜೆಪಿಗರು, ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವುದು ಒಂದು ಕಡೆಯಾದರೆ, ಸಿಂಧಿಯಾ ತನ್ನ ಆಪ್ತರ ಪರವಾಗಿ ಲಾಬಿ ನಡೆಸ, ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ ಕೂಡಾ.
ಶಿವರಾಜ್ ಸಿಂಗ್ ಸರಕಾರದ ಸಂಪುಟ ವಿಸ್ತರಣೆ
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೂರು ತಿಂಗಳ ನಂತರ, ಜುಲೈ ಎರಡರಂದು ಶಿವರಾಜ್ ಸಿಂಗ್ ಸರಕಾರದ ಸಂಪುಟ ವಿಸ್ತರಣೆಯಾಗಿದೆ. 28 ಮಂದಿ ನೂತನ ಸಚಿವರು ���ೇರ್ಪಡೆಯಾಗಿದ್ದರು. ಇದರಲ್ಲಿ ಸಿಂಧಿಯಾ ಬೆಂಬಲಿಗರ ಸಂಖ್ಯೆ ಹನ್ನೆರಡು. ಈಗಾಗಲೇ, ಶಿವರಾಜ್ ಸಿಂಗ್ ಸರಕಾರದಲ್ಲಿ ಸಿಂಧಿಯಾ ಕಡೆಯ ಇಬ್ಬರು ಸಚಿವರಿದ್ದಾರೆ.
ಕಮಲ್ ನಾಥ್ ಸರಕಾರ ಪತನಗೊಳ್ಳಲು ಕಾರಣರಾದ ಸ್ಥಾನ
ಕಮಲ್ ನಾಥ್ ಸರಕಾರ ಪತನಗೊಳ್ಳಲು ಕಾರಣರಾದ ಎಲ್ಲಾ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಲಭ್ಯವಾಗಿದೆ. ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರಿಗೆ ಮನ್ನಣೆ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಪರೋಕ್ಷವಾಗಿ ಶಿವರಾಜ್ ಸಿಂಗ್ ಅಸಮಾಧಾನವನ್ನು ಹೊರಹಾಕಿದ್ದರು. ಬಿಜೆಪಿಯ ಶಾಸಕ ಅಜಯ್ ವಿಷ್ಣೋಯಿ, ಸಿಎಂಗೆ ಪತ್ರ ಬರೆದು ಬೇಸರ ಹೊರಹಾಕಿದ್ದರು.
ಸಂಪುಟ ವಿಸ್ತರಣೆಯಲ್ಲಿ ತನ್ನ ತಾಕತ್ ತೋರಿಸಿದ ನಂತರ ಜ್ಯೋತಿರಾದಿತ್ಯ ಸಿಂಧಿಯಾ
ಸಂಪುಟ ವಿಸ್ತರಣೆಯಲ್ಲಿ ತನ್ನ ತಾಕತ್ ಪ್ರದರ್ಶಿಸಿದ ನಂತರ ಜ್ಯೋತಿರಾದಿತ್ಯ ಸಿಂಧಿಯಾ, ಖಾತೆ ಹಂಚಿಕೆಯಲ್ಲಿ ತನ್ನ ಆಪ್ತರಿಗೆ ಪ್ರಮುಖ ಖಾತೆಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿಯೇ, ಸಂಪುಟ ವಿಸ್ತರಣೆಯಾಗಿ ಒಂದು ವಾರ ಆಗುತ್ತಾ ಬಂದರೂ ಖಾತೆ ಹಂಚಿಕೆ ಇನ್ನೂ ಆಗಲಿಲ್ಲ.
ಅಸಮಾಧಾನದ ಹೊಗೆ ಎದ್ದೇಳದಂತೆ, ಪರಿಸ್ಥಿತಿ ನಿಭಾಯಿಸಬೇಕಿದೆ
ಇನ್ನು, ಕಳೆದ ಬಿಜೆಪಿ ಸರಕಾರದಲ್ಲಿ ಪ್ರಭಾವೀ ಖಾತೆಯನ್ನು ಹೊಂದಿದ್ದ ಮುಖಂಡರು ಕೂಡಾ, ಪ್ರಮುಖ ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿಯೇ, ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದೇಳದಂತೆ, ಪರಿಸ್ಥಿತಿ ನಿಭಾಯಿಸ ಬೇಕಾಗಿರುವುದರಿಂದ, ಕೇಂದ್ರದ ವರಿಷ್ಠರು ಮತ್ತು ಸಿಎಂ ಚೌಹಾಣ್, ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.