ಬಿಜೆಪಿಯಲ್ಲಿ ಬಲ ಪ್ರದರ್ಶಿಸಿದ ಮಾಜಿ ಕಾಂಗ್ರೆಸ್ಸಿಗ ಸಿಂಧಿಯಾ
ಭೋಪಾಲ್, ನವೆಂಬರ್ 10: ಮಾಜಿ ಕಾಂಗ್ರೆಸ್ಸಿಗ ಜ್ಯೋತಿರಾದಿತ್ಯ ಸಿಂಧಿಯಾ ಶಕ್ತಿ ಬಿಜೆಪಿಗೆ ಮಧ್ಯಪ್ರದೇಶದಲ್ಲಿ ಮತ್ತಷ್ಟು ಬಲ ತಂದುಕೊಟ್ಟಿದೆ. ತಮ್ಮ ಜತೆಗೆ ಕಾಂಗ್ರೆಸ್ನಲ್ಲಿ ಬಂಡಾಯವೆದ್ದಿದ್ದ ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಹೋಗಿದ್ದ ಸಿಂಧಿಯಾ ಉಪ ಚುನಾವಣೆಯಲ್ಲಿ ಬದ್ನಾವರ್ ಕ್ಷೇತ್ರದಲ್ಲಿ ತಮ್ಮ ಆಪ್ತನ ಮೂಲಕ ಗೆಲುವು ಸಾಧಿಸಿದ್ದಾರೆ.
ಧಾರ್ ಜಿಲ್ಲೆಯ ಬದ್ನಾವರ್ ವಿಧಾನಸಭೆ ಕ್ಷೇತ್ರವು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರತಿಷ್ಠೆಯ ಹೋರಾಟವಾಗಿತ್ತು. ಕಾಂಗ್ರೆಸ್ನಲ್ಲಿ ಬಂಡಾಯವೆದ್ದು, ಮುಖಂಡರಿಗೆ ಸೆಡ್ಡು ಹೊಡೆದಿದ್ದ ಸಿಂಧಿಯಾ, ಬಿಜೆಪಿಯಲ್ಲಿರುವ ತಮ್ಮ ಸಂಬಂಧಿ ವಸುಂಧರಾ ರಾಜೇ ಸಿಂಧಿಯಾ ಮೂಲಕ ಕೇಸರಿ ಪಾಳೆಯಕ್ಕೆ ಜಿಗಿದಿದ್ದರು.
Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ
ಬದ್ನಾವರ್ ಕ್ಷೇತ್ರದಿಂದ ಸಿಂಧಿಯಾ ಚುನಾವಣೆಗೆ ನಿಲ್ಲದೆ ಹೋದರೂ ಮಾರ್ಚ್ ತಿಂಗಳಲ್ಲಿ ತಮ್ಮೊಂದಿಗೆ ಕಾಂಗ್ರೆಸ್ ತೊರೆದು ಬಂದ ನಿಕಟವರ್ತಿ ರಾಜವರ್ಧನ್ ಸಿಂಗ್ ದಟ್ಟಿಗಾನ್ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದರು. ಅವರ ಗೆಲುವಿಗೂ ಟೊಂಕ ಕಟ್ಟಿ ನಿಂತಿದ್ದರು. ಬಿಜೆಪಿ ಸೇರಿದ ಬಳಿಕ ರಾಜವರ್ಧನ್ ಅವರು ಜುಲೈ 14ರಂದು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
2018ರಲ್ಲ ಬದ್ನಾವರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜವರ್ಧನ್, ಬಿಜೆಪಿಯ ಭನ್ವರ್ ಸಿಂಗ್ ಶೆಖಾವತ್ ಅವರನ್ನು ಸೋಲಿಸಿದ್ದರು.
ಸಿಂಧಿಯಾ ಅವರು ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಗಂಭೀರವಾಗಿ ಪರಿಗಣಿಸಿದ್ದರು. ಏಕೆಂದರೆ ತಮ್ಮೊಂದಿಗೆ ಕಾಂಗ್ರೆಸ್ ತೊರೆದು ಬಂದ ಶಾಸಕರನ್ನು ಗೆಲ್ಲಿಸುವ ಜವಾಬ್ದಾರಿ ಜತೆಗೆ, ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಲು ಅವರಿಗೆ ಈ ಚುನಾವಣೆ ಮೆಟ್ಟಿಲಾಗಿತ್ತು. 28 ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಪೈಕಿ 20ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇದರಿಂದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಗಟ್ಟಿಯಾಗಿದೆ. ಇನ್ನೊಂದೆಡೆ ಸಿಂಧಿಯಾ ತಮ್ಮ ವರ್ಚಸ್ಸು ಕಳೆಗುಂದದಂತೆ ನೋಡಿಕೊಂಡಿದ್ದಾರೆ.