ಕೊವಿಡ್ 19 ನಿಯಮ ಉಲ್ಲಂಘನೆ: ಮಾಜಿ ಸಿಎಂ ವಿರುದ್ಧವೇ ಎಫ್ಐಆರ್
ಭೋಪಾಲ್, ಅ.7: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ 8 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ. ಕೊರೊನಾವೈರಸ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಭೆ ನಡೆಸಿದ ಆರೋಪದ ಮೇಲೆ ಕ್ರಮ ಜರುಗಿಸಲಾಗಿದೆ.
ಕೊವಿಡ್ 19 ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಹಾಗೂ ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಎಫ್ಐಆರ್ ಹಾಕಲಾಗಿದೆ. ದಾಟಿಯಾಜಿಲ್ಲೆಯ ಭಂಡಾರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರದಂದು ಎಫ್ಐಆರ್ ಹಾಕಲಾಗಿದೆ.
ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅರವಿಂದ್ ಮಹೋರ್ ಅವರು ನೀಡಿದ ಲಿಖಿತ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 5ರಂದು ಭಂಡಾರ್ ಪ್ರದೇಶದ ಮಂಡಿ ಎಂಬಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಲಾಗಿತ್ತು. 100 ಜನಕ್ಕೂ ಅಧಿಕ ಮಂದಿ ಸೇರದಂತೆ ನೋಡಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ನಹರ್ ಸಿಂಗ್ ಅವರಿಗೆ ಸೂಚಿಸಲಾಗಿತ್ತು. ಆದರೆ, ನಿಯಮ ಉಲ್ಲಂಘಿಸಲಾಗಿದೆ, ಉಪ ಚುನಾವಣೆ ಕುರಿತಂತೆ ನಡೆದ ಸಭೆಯ ವಿಡಿಯೋ ದೃಶ್ಯಗಳನ್ನು ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
100 ಜನಕ್ಕೆ ಅನುಮತಿ ನೀಡಿದರೆ 2,000 ರಿಂದ 2,500 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದು ದೃಢಪಟ್ಟಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸಿ ಆರ್ ಪಿಸಿ ಸೆಕ್ಷನ್ 144, ಕೊವಿಡ್ 19 ನಿಯಮ ಉಲ್ಲಂಘನೆ ಆರೋಪ ಹೊರೆಸಲಾಗಿದೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳೀಗೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 03ರಂದು ಮತದಾನ ಹಾಗೂ ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ. 24 ಕಾಂಗ್ರೆಸ್ ಶಾಸಕರ ರಾಜೀನಾಮೆ, ಇಬ್ಬರು ಶಾಸಕರ ನಿಧನದಿಂದ ತೆರವಾದ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ.