ಮಧ್ಯಪ್ರದೇಶ ಉಪ ಚುನಾವಣೆ; ಸಿಂಧಿಯಾ v/s ಪೈಲೆಟ್!
ಭೋಪಾಲ್, ಸೆಪ್ಟೆಂಬರ್ 18: ಮಧ್ಯಪ್ರದೇಶದ ಉಪ ಚುನಾವಣೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಕರೆತಂದು ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ ಕಮಲನಾಥ್ ಬಯಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾದ ಜ್ಯೋತಿರಾಧಿತ್ಯ ಸಿಂಧಿಯಾ ವಿರುದ್ಧ ಸಚಿನ್ ಪೈಲೆಟ್ ಪ್ರಚಾರ ನಡೆಸಲಿದ್ದಾರೆ. ಇಬ್ಬರು ಯುವ ನಾಯಕರು ಪ್ರಚಾರದಲ್ಲಿ ತೊಡಗಿದರೆ ಉಪ ಚುನಾವಣೆ ಕಣ ಕುತೂಹಕ್ಕೆ ಕಾರಣವಾಗಲಿದೆ.
ಜೈಪುರಕ್ಕೆ ಸಚಿನ್ ಪೈಲೆಟ್ ವಾಪಸ್; ಹೇಳಿದ್ದು ಒಂದೇ ಮಾತು!
ರಾಜಸ್ಥಾನ ಮುಖ್ಯಮಂತ್ರಿ ವಿರುದ್ಧ ಬಂಡಾಯವೆದ್ದ ಸಚಿನ್ ಪೈಲೆಟ್ ಬಿಜೆಪಿ ಸೇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಕಾಂಗ್ರೆಸ್ ನಾಯಕರ ಮನವೊಲಿಕೆ ಬಳಿಕ ಅವರು ಪಕ್ಷದಲ್ಲಿಯೇ ಉಳಿದಿದ್ದಾರೆ.
ಗ್ವಾಲಿಯಾರ್ ರಾಜಮನೆತನ ಜ್ಯೋತಿರಾಧಿತ್ಯ ಸಿಂಧಿಯಾ ಆಸ್ತಿ ವಿವರ
ಗ್ವಾಲಿಯರ್ ಕಣಿವೆ ಪ್ರದೇಶದಲ್ಲಿ ನಡೆಯುವ ಉಪ ಚುನಾವಣೆಗೆ ಸಚಿನ್ ಪೈಲೆಟ್ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು. "ಸಚಿನ್ ಪೈಲೆಟ್ ಅವರಿಗೆ ಆಹ್ವಾನ ನೀಡಲಾಗಿದೆ. ಪಕ್ಷದ ಪರವಾಗಿ ಅವರು ಪ್ರಚಾರ ನಡೆಸಲಿದ್ದಾರೆ" ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಘಟಕದ ಉಪಾಧ್ಯಕ್ಷ ಬಿಪೇಂದ್ರ ಗುಪ್ತಾ ಹೇಳಿದ್ದಾರೆ.
ರಾಜಸ್ಥಾನ ಬಿಕ್ಕಟ್ಟು; ಕೊನೆಗೂ ಮೌನ ಮುರಿದ ಸಚಿನ್ ಪೈಲೆಟ್
28 ವಿಧಾನಸಭಾ ಕ್ಷೇತ್ರಗಳು
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇವುಗಳಲ್ಲಿ 16 ಕ್ಷೇತ್ರಗಳು ಗ್ವಾಲಿಯರ್ ಕಣಿವೆ ಪ್ರದೇಶಗಳಲ್ಲಿವೆ. ಈ ಪ್ರದೇಶಗಳಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಭಾವ ಹೆಚ್ಚಿದೆ. ಇಲ್ಲಿ ಪ್ರಚಾರ ನಡೆಸಲು ಸಚಿನ್ ಪೈಲೆಟ್ ಕರೆಸಲಾಗುತ್ತಿದೆ.
ಮಾಜಿ ಸಿಎಂ ಕಮಲನಾಥ್ ಕರೆ
ಮಾಜಿ ಮುಖ್ಯಮಂತ್ರಿ ಕಮಲನಾಥ್ ಸ್ವತಃ ಕರೆ ಮಾಡಿ ಸಚಿನ್ ಪೈಲೆಟ್ರನ್ನು ಉಪ ಚುನಾವಣೆ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಗ್ವಾಲಿಯರ್ ಕಣಿವೆ ಪ್ರದೇಶದಲ್ಲಿರುವ ಕ್ಷೇತ್ರಗಳು ರಾಜಸ್ಥಾನದ ಗಡಿಗೆ ಹೊಂದಿಕೊಂಡಿವೆ. ಸಚಿನ್ ಪೈಲೆಟ್ ಅವರ ಗುಜ್ಜಾರ್ ಸಮುದಾಯದ ಜನರು ಇಲ್ಲಿ ಹೆಚ್ಚಾಗಿದ್ದಾರೆ.
ಉಪ ಚುನಾವಣೆ ಎದುರಾಗಿದ್ದು ಏಕೆ?
2019ರ ನವೆಂಬರ್ನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಾಗ 22 ಶಾಸಕರು ಅವರ ಜೊತೆ ಹೋಗಿದ್ದರು. ಆ ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ನಡೆಯುತ್ತಿದೆ. ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾದ ಬಳಿಕ 3 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಿದ್ದು, ಆ ಕ್ಷೇತ್ರಗಳಿಗೂ ಉಪ ಚುನಾವಣೆ ಎದುರಾಗಿದೆ. ಉಳಿದ ಮೂರು ಕ್ಷೇತ್ರಗಳು ಶಾಸಕರ ನಿಧನದಿಂದ ತೆರವಾಗಿವೆ.
ರಾಜ್ಯದಲ್ಲಿ ಪ್ರಚಾರಕರಿಲ್ಲ
ಸಚಿನ್ ಪೈಲೆಟ್ ಪ್ರಚಾರಕ್ಕೆ ಕರೆಸುವುದನ್ನು ಬಿಜೆಪಿ ಲೇವಡಿ ಮಾಡಿದೆ. ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಈ ಕುರಿತು ಟೀಕಿಸಿದ್ದು, "ಬಿಜೆಪಿ ಎದುರಿಸುವ ಯಾವ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿಲ್ಲ. ಅದಕ್ಕೆ ಪಕ್ಕದ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.