ಎಲ್ಲರೂ ತಿರುಗಿನೋಡುವಂಥ ದಾಖಲೆ ಸೃಷ್ಟಿಸಿದ ಮಧ್ಯ ಪ್ರದೇಶದ ಜನತೆ
ಭೋಪಾಲ್, ಫೆಬ್ರವರಿ 5 : ಇಡೀ ದೇಶದ ಜನರು, ಎಲ್ಲ ರಾಜ್ಯಗಳ ಸರಕಾರಗಳು ತಮ್ಮತ್ತ ತಿರುಗಿ ನೋಡುವಂಥ ಅದ್ಭುತ ದಾಖಲೆಯನ್ನು ಮಧ್ಯ ಪ್ರದೇಶದ ಜನರು ಮಾಡಿದ್ದಾರೆ. ಕೇವಲ 12 ಗಂಟೆಗಳಲ್ಲಿ 6 ಕೋಟಿ 60 ಲಕ್ಷ ಸಸಿಗಳನ್ನು ನೆಟ್ಟು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಪ್ರಕೃತಿ ಪ್ರೇಮಿಗಳಿಗೆ ನಮೋ ನಮಃ.
ಸುಮಾರು 15 ಲಕ್ಷ ಸ್ವಯಂಸೇವಕರು ಅರ್ಧ ದಿನದಲ್ಲಿ, ಮಧ್ಯ ಪ್ರದೇಶದ ಜೀವನಾಡಿಯಾಗಿರುವ ನರ್ಮದಾ ನದಿಯ ದಂಡೆಯ ಮೇಲೆ 6.6 ಕೋಟಿ ಸಸಿಗಳನ್ನು ನೆಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಯಾವುದನ್ನು ಅಸಾಧ್ಯವೆಂದು ನಾವು ಅಂದುಕೊಂಡಿರುತ್ತೇವೆಯೋ ಅದನ್ನೇ ತಮ್ಮ ಮನೋಬಲದ ಮೂಲಕ ಈ ಜನರು ಸಾಧ್ಯವಾಗಿಸಿದ್ದಾರೆ.
ವಿದ್ಯಾರ್ಥಿಗಳೆ, ಸಸಿ ಬೆಳೆಸಿ 10ನೇ ತರಗತಿಯಲ್ಲಿ ಹೆಚ್ಚುವರಿ ಅಂಕ ಗಳಿಸಿ!
ಇದನ್ನು ಸಾಧ್ಯವಾಗಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವಲ್ಲ. ಬದಲಿಗೆ, ಕಳೆದ ಚುನಾವಣೆಯ ನಂತರ ಅಧಿಕಾರವನ್ನು ಕಳೆದುಕೊಂಡ ಜನಪ್ರಿಯ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು. "ಮಧ್ಯ ಪ್ರದೇಶದ ಜನರು ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಟ್ಟು ಪ್ರಕೃತಿ ಉಳಿವಿಗೆ ಸಹಾಯ ಮಾಡಿದ್ದು ನನಗೆ ತುಂಬಾ ಸಂತೋಷ ತಂದಿದೆ" ಎಂದು ಹರ್ಷಚಿತ್ತರಾಗಿ ಹೇಳಿದ್ದಾರೆ.
"ಈ ಅಭೂತಪೂರ್ವ ಕಾರ್ಯದಲ್ಲಿ ತೊಡಗಿದ್ದಕ್ಕಾಗಿ ನಾನು ಜನರಿಗೆ ಆಭಾರಿಯಾಗಿದ್ದೇನೆ. ಪ್ರಕೃತಿ ಉಳಿಕೆಗೆ ನಾವು ಸಾಕಷ್ಟು ಕಾಣಿಕೆ ನೀಡಲಿದ್ದೇವೆ. ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ ಉಳಿಕೆಯ ಅಭಿಯಾನಕ್ಕೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ" ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ನುಡಿದಿದ್ದಾರೆ.
ಹಸಿರು ಬಣ್ಣ ನೋಡಿದಾಗಲೆಲ್ಲ ಗಿಡಮರಗಳೇ ನೆನಪಿಗೆ ಬರುತ್ತವೆ. ಮಾನವರಿಗೆ, ಪ್ರಾಣಿಗಳಿಗೆ ಮತ್ತೆಲ್ಲ ಜೀವಿಗಳಿಗೆ ಆಮ್ಲಜನಕವನ್ನು ಈ ಗಿಡಗಳು ಕೊಡುವುದು ಮಾತ್ರವಲ್ಲ ಅವು ಈ ಭೂಮಿಯ ಮೇಲಿನ ಅತ್ಯುತ್ತಮ ಸಂಗಾತಿಗಳು. ಕೇವಲ ನೀರನ್ನು ಹೊರತುಪಡಿಸಿ ಅವು ಮನುಜರಿಂದ ಅಥವಾ ಮತ್ತಾವುದೇ ಜೀವಿಯಿಂದ ಏನನ್ನೂ ಬೇಡದ ನಿಸ್ವಾರ್ಥಿ ಜೀವಿಗಳು ಎಂದು ಅವರು ಬಣ್ಣಿಸಿದರು.
'ಮರಗಳಿಲ್ಲದೆ ನೀರು ಇರಲ್ಲ, ಫೆ.16ರಂದು ಬೃಹತ್ ಜನಜಾಗೃತಿ
ನಿರಂತರ ಅರಣ್ಯನಾಶದಿಂದ ಭೂಮಿ ಬೋಳಾಗುತ್ತಿದೆ, ಬರಿದಾಗುತ್ತಿದೆ, ಪರಿಸರ ಏರುಪೇರಾಗುತ್ತಿದೆ. ಗಿಡಮರಗಳಿಲ್ಲದ ಭೂಮಿಯನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕು ಎಂದು ಅವರು ತಮ್ಮ ಪ್ರಕೃತಿ ಪ್ರೇಮವನ್ನು ಮೆರೆದರು.