ಮಧ್ಯಪ್ರದೇಶ: ಸೌದೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು 20 ಲಕ್ಷ ಬೆಲೆ ಬಾಳುವ ವಜ್ರ!
ಪನ್ನಾ, ಜುಲೈ 29: ಇತ್ತೀಚೆಗೆ ಸಾಲ ತೀರಿಸಲು ಮನೆ ಮಾರಲು ಹೊರಟಿದ್ದ ಕೇರಳದ ವ್ಯಕ್ತಿಯೊಬ್ಬರಿಗೆ 1 ಕೋಟಿ ರುಪಾಯಿ ಲಾಟರಿ ಹೊಡೆದಿತ್ತು. ಅದೃಷ್ಟ ಎನ್ನುವುದು ಯಾವಾಗ, ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂದೇ ತಿಳಿಯುವುದಿಲ್ಲ. ಅದೃಷ್ಟ ಒಮ್ಮೆ ಕೈಹಿಡಿದರೆ ಭಿಕ್ಷುಕ ಕೂಡ ರಾತ್ರೋ ರಾತ್ರಿ ಕೋಟ್ಯಧಿಪತಿಯಾಗಬಲ್ಲ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಮಧ್ಯಪ್ರದೇಶದಲ್ಲಿ ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆ ಲಕ್ಷಾಧಿಪತಿಯಾಗಿ ಹಿಂದಿರುಗಿದ್ದಾಳೆ!.
ಹೌದು, ಪನ್ನಾ ಜಿಲ್ಲೆಯ ಪುರುಷೋತ್ತಮಪುರ ನಿವಾಸಿ ಗೆಂಡಾ ಬಾಯಿ ಎಂಬ ಮಹಿಳೆಗೆ ಕಾಡಿಗೆ ಸೌದೆ ತರಲು ಹೋಗಿದ್ದ ವೇಳೆ ವಜ್ರವೊಂದು ಸಿಕ್ಕಿದೆ. ಗೆಂಡಾ ಬಾಯಿಗೆ ಸಿಕ್ಕಿರುವ ವಜ್ರ 4.39 ಕ್ಯಾರೆಟ್ದಾಗಿದೆ. ಈ ವಜ್ರ ಸುಮಾರು 20 ಲಕ್ಷ ರೂಪಾಯಿಗೆ ಹರಾಜಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೆ ಮಾರಲು ಹೊರಟವನಿಗೆ ಹೊಡೆಯಿತು 1 ಕೋಟಿ ರೂ. ಲಾಟರಿ
ಅಧಿಕಾರಿಯೊಬ್ಬರ ಪ್ರಕಾರ, "ಗೆಂಡಾ ಬಾಯಿ ಪನ್ನಾ ವಜ್ರದ ಕಚೇರಿಗೆ ತೆರಳಿ ತಮಗೆ ಸಿಕ್ಕಿರುವ ವಜ್ರವನ್ನು ಪರೀಕ್ಷೆ ಮಾಡಿಸಿದ್ದಾರೆ. ಅದು 4.39 ಕ್ಯಾರೆಟ್ ವಜ್ರವಾಗಿದೆ ಎಂದು ಪರೀಕ್ಷೆಯ ನಂತರವೇ ಆಕೆಗೆ ತಿಳಿದುಬಂದಿದೆ. ಕಚ್ಚಾ ವಜ್ರವನ್ನು ಈಗ ಹರಾಜು ಮಾಡಲಾಗುವುದು ಮತ್ತು ಸರ್ಕಾರದ ರಾಯಧನ ಮತ್ತು ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಆದಾಯವನ್ನು ಮಹಿಳೆಗೆ ನೀಡಲಾಗುವುದು" ಎಂದು ಹೇಳಿದ್ದಾರೆ.
ಗಾಜಿನ ಚೂರು ಎಂದುಕೊಂಡಿದ್ದರು
ವಜ್ರವನ್ನು ಪಡೆದಾಗ ತುಂಬಾ ಸಂತೋಷಪಟ್ಟ ಗೆಂಡಾ ಬಾಯಿ ಮೂರು-ನಾಲ್ಕು ದಿನಗಳ ಹಿಂದೆ ಸೌದೆ ತರಲು ಪುಖ್ರಿ ಕಾಡಿಗೆ ಹೋಗಿದ್ದೆ. ಕಾಡಿಗೆ ಹೋಗುವ ದಾರಿಯಲ್ಲಿ ಹೊಳೆವ ವಸ್ತುವೊಂದು ಕಣ್ಣಿಗೆ ಬಿದ್ದಿತು, ಅದನ್ನು ನಾನು ಎತ್ತಿಕೊಂಡು ಮನೆಗೆ ತಂದಿದ್ದೆ. ನಾವು ವಜ್ರವನ್ನು ನೋಡಿರಲಿಲ್ಲ, ಆದ್ದರಿಂದ ನಾವು ಅದನ್ನು ಗಾಜಿನ ತುಂಡು ಎಂದು ಭಾವಿಸಿ ಮನೆಯಲ್ಲಿ ಇರಿಸಿದ್ದೆವು ಎಂದಿದ್ದಾರೆ.
ನನ್ನ ಪತಿ ಪರ್ಮಲಾಲ್ ಪನ್ನಾಗೆ ಹೋಗಿ ಸಾಹೇಬರಿಗೆ ತೋರಿಸೋಣ ಎಂದಿದ್ದಕ್ಕೆ ನಾವಿಬ್ಬರೂ ಪನ್ನಾಗೆ ಬಂದಿದ್ದೇವೆ ಎಂದು ಹೇಳಿದರು. ಇಲ್ಲಿ ವಜ್ರ ಕಚೇರಿಯಲ್ಲಿ ತೋರಿಸಿದಾಗ ಅದು ಗಾಜಿನ ತುಂಡಲ್ಲ ವಜ್ರ ಎಂದು ತಿಳಿದು ಬಂದಿದೆ. ಇದನ್ನು ತಿಳಿದ ಗೆಂಡಾ ಬಾಯಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
ಅದೃಷ್ಟದ ವ್ಯಕ್ತಿ: ಹಾಲು ಕೊಳ್ಳುವ ವಿಚಾರದಲ್ಲಿ ಬದಲಾದ ವ್ಯಕ್ತಿಯ ಹಣೆಬರಹ
ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತೇನೆ ಎಂದ ಗೆಂಡಾ ಬಾಯಿ
ತನಗೆ ಆರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಗೆಂಡಾ ಬಾಯಿ ಹೇಳಿದ್ದಾರೆ. ಹಿರಿಯ ಮಗಳಿಗೆ 20 ವರ್ಷ, ಮದುವೆ ಆಗಬೇಕಿದೆ. ಹಣದ ಕೊರತೆಯಿಂದ ನಮಗೆ ಮದುವೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ಈಗ ಇಬ್ಬರೂ ಹೆಣ್ಣುಮಕ್ಕಳಿಗೂ ಮದುವೆ ಮಾಡಬಹುದು ಎಂದು ಹೇಳಿದ್ದಾರೆ.
ತಾನು ಹಿಂದೆಂದೂ ವಜ್ರವನ್ನು ನೋಡಿರಲಿಲ್ಲ, ಮೊದಲ ಬಾರಿಗೆ ಅದನ್ನು ಸ್ಪರ್ಶಿಸುವ ಮೂಲಕ ವಜ್ರವನ್ನು ನೋಡಿದ್ದೇನೆ ಎಂದು ಗೆಂಡಾಬಾಯಿ ಪತಿ ಪರ್ಮಾಲಾಲ್ ಹೇಳಿದರು.
ಗೆಂಡಾ ಬಾಯಿ ಪತಿ ಪರ್ಮಲಾಲ್ ಕೂಲಿ ಕೆಲಸ ಮಾಡುತ್ತಾರೆ. ಇಷ್ಟು ದೊಡ್ಡ ಕುಟುಂಬ ಅವರ ಸಂಪಾದನೆಯಲ್ಲೇ ಬದುಕಬೇಕಾಗುತ್ತಿತ್ತು. ಗೆಂಡಾ ಬಾಯಿ ತಾನು ಒಲೆ ಹಚ್ಚಲು ಸೌದೆ ತರಲು ಕಾಡಿಗೆ ಹೋಗಿದ್ದೆ ತನ್ನ ಕಷ್ಟವನ್ನು ನೋಡಿ ದೇವರೆ ತನ್ನ ಮೇಲೆ ಕರುಣೆ ತೋರಿದ್ದಾನೆ ಎಂದು ಅವರು ಹೇಳಿದ್ದಾರೆ.
ಮುಂಬರುವ ಹರಾಜಿನಲ್ಲಿ ವಜ್ರ ಮಾರಾಟ
ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕೆ ಇಡಲಾಗುವುದು ಎಂದು ಡೈಮಂಡ್ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ. ಅದರ ಮಾರಾಟದಿಂದ ಸಿಗುವ ಮೊತ್ತದಿಂದ ಸರ್ಕಾರದ ರಾಯಧನವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ಗೆಂಡಾ ಬಾಯಿ ಅವರಿಗೆ ನೀಡಲಾಗುತ್ತದೆ.
ಈ ವಜ್ರವು ಉತ್ತಮ ಗುಣಮಟ್ಟದ್ದಾಗಿದ್ದು, ಹರಾಜಿನಲ್ಲಿ ಈ ವಜ್ರಕ್ಕೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿದೆ ಎನ್ನುತ್ತಾರೆ ತಜ್ಞರು. ಇದರ ಅಂದಾಜು ಬೆಲೆ 20 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ರೈತನೊಬ್ಬನಿಗೆ ಸಿಕ್ಕಿತ್ತು 50 ಲಕ್ಷ ಮೌಲ್ಯದ ವಜ್ರ
ಜನವರಿ ವೇಳೆಯಲ್ಲಿ ಪ್ರತಾಪ್ ಸಿಂಗ್ ಯಾದವ್ ಎಂಬ ರೈತ ಜಿಲ್ಲೆಯ ಪನ್ನಾ ಪ್ರದೇಶದ ಗಣಿಯಲ್ಲಿ ವಜ್ರವೊಂದನ್ನು ಕಂಡುಕೊಂಡಿದ್ದರು.
ಅದು 11.88 ಕ್ಯಾರೆಟ್ನ ವಜ್ರವಾಗಿತ್ತು. ವಜ್ರದ ಮಾರಾಟದಿಂದ 50 ಲಕ್ಷ ರುಪಾಯಿ ಹಣ ಪಡೆದುಕೊಂಡಿದ್ದರು. ವಜ್ರದ ಮೂಲಕ ಒಲಿದ ಅದೃಷ್ಟದಿಂದ ಪ್ರತಾಪ್ ಸಿಂಗ್ ಯಾದವ್ ಬದುಕೇ ಬದಲಾಗಿದೆ.
"ನಾನು ಸಣ್ಣ ಕೃಷಿ ಭೂಮಿ ಹೊಂದಿರುವ ಬಡ ವ್ಯಕ್ತಿ. ನಾನು ಕೂಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ಮೂರು ತಿಂಗಳಿನಿಂದ ಈ ಗಣಿಯಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇನೆ ಮತ್ತು ಈ ವಜ್ರವನ್ನು ಪಡೆದು ವಜ್ರ ಕಚೇರಿಗೆ ಠೇವಣಿ ಇರಿಸಿದ್ದೇನೆ" ಎಂದು ಪ್ರತಾಪ್ ಸಿಂಗ್ ಯಾದವ್ ಹೇಳಿದ್ದರು.
Recommended Video