ಚುನಾವಣೆಯಿಂದ ಸಾಧ್ವಿ ಪ್ರಗ್ಯಾ ಅನರ್ಹತೆ: ನಮಗೆ ಅಧಿಕಾರ ಇಲ್ಲ ಎಂದ ಎನ್ಐಎ ಕೋರ್ಟ್
ಭೋಪಾಲ್, ಏಪ್ರಿಲ್ 24: ಭೋಪಾಲ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಚುನಾವಣೆಯಿಂದ ನಿಷೇಧಿಸಲು ತನ್ನಿಂದ ಸಾಧ್ಯವಿಲ್ಲ ಎಂದು ವಿಶೇಷ ಎನ್ಐಎ ನ್ಯಾಯಾಲಯ ಹೇಳಿದೆ.
ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಆಯೋಗದ ಎರಡೆರಡು ನೋಟಿಸ್
ಲೋಕಸಭೆ ಚುನಾವಣೆಯಲ್ಲಿ ಭೋಪಾಲ್ ಕ್ಷೇತ್ರದಿಂದ ಸಾಧ್ವಿ ಸ್ಪರ್ಧಿಸದಂತೆ ತಡೆಯಲು ಅವರ ಮೇಲೆ ನಿಷೇಧ ಹೇರುವಂತೆ ಅರ್ಜಿ ಸಲ್ಲಿಸಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಸಾಧ್ವಿ ನ್ಯಾಯಾಲಯದ ವಿಚಾರಣೆಗಳಿಗೆ ಗೈರಾಗುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರಗಳಲ್ಲಿ ಸತತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾದಂತೆ ಕಾಣಿಸುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದರು.
ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ವಿರುದ್ಧ ದಾಖಲಾದ ಪ್ರಕರಣಗಳನ್ನು ವಜಾಗೊಳಿಸಿದ ತನ್ನ ಆದೇಶವನ್ನು ಎನ್ಐಎ ಹೈಕೋರ್ಟ್ನಲ್ಲಿ ಪ್ರಶ್ನಿಸಿಲ್ಲ. ಹೀಗಾಗಿ ಅವರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಕಾಣಿಸುತ್ತಿಲ್ಲ ಎಂದು ಕೋರ್ಟ್ ಹೇಳಿತು.
ಪ್ರಸಕ್ತ ನಡೆಯುತ್ತಿರುವ ಚುನಾವಣೆಯಲ್ಲಿ ಯಾವುದೇ ವ್ಯಕ್ತಿ ಸ್ಪರ್ಧಿಸುವುದನ್ನು ನಿಷೇಧಿಸುವ ಕಾನೂನಾತ್ಮಕ ಅಧಿಕಾರ ಈ ನ್ಯಾಯಾಲಯಕ್ಕೆ ಇಲ್ಲ. ಅದನ್ನು ನಿರ್ಧರಿಸುವುದು ಚುನಾವಣಾ ಆಧಿಕಾರಿಗಳ ಕೆಲಸ. ಆರೋಪಿ ನಂಬರ್ 1ಅನ್ನು ಕೂಡ ಈ ನ್ಯಾಯಾಲಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಲಾರದು ಎಂದ ಕೋರ್ಟ್, ಅರ್ಜಿಯನ್ನು ಇತ್ಯರ್ಥಗೊಳಿಸಿತು.