'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ
ಭೋಪಾಲ್, ಏಪ್ರಿಲ್ 19: 2008ರ ಮಾಲೇಗಾಂವ್ ಸ್ಫೋಟದ ಆರೋಪಿ, ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
2008ರ ನವೆಂಬರ್ 26ರಂದು ನಡೆದ ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹೋರಾಟ ನಡೆಸುವ ಮೂಲಕ ಭಾರತೀಯರ ಪಾಲಿಗೆ ಹೀರೋ ಎನಿಸಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ತಮ್ಮ ಶಾಪದಿಂದಲೇ ಸತ್ತಿದ್ದು ಎನ್ನುವ ಮೂಲಕ ಸಾಧ್ವಿ ಭಾರಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಾಧ್ವಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೆ, ಅಲ್ಲಿದ್ದ ಬಿಜೆಪಿ ಮುಖಂಡರು ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುವ ಬದಲು ಚಪ್ಪಾಳೆ ತಟ್ಟಿದ್ದಾರೆ.
2008ರ ಸೆಪ್ಟೆಂಬರ್ 29ರಂದು ನಡೆದ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಸತ್ತು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಿಂದೂ ಭಯೋತ್ಪಾದನಾ ಸಂಘಟನೆ ಈ ದಾಳಿ ನಡೆಸಿದೆ ಎಂದು ಆರೋಪಿಸಿದ್ದ ಮಹಾರಾಷ್ಟ್ರ ಎಟಿಎಸ್, ಸಾಧ್ವಿ ಮತ್ತು ಇತರರನ್ನು ಬಂಧಿಸಿತ್ತು. 2016ರ ಮೇ ತಿಂಗಳಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಾಧ್ವಿಗೆ ಕ್ಲೀನ್ ಚಿಟ್ ನೀಡಿತ್ತು.
ಬಂಧನದ ವೇಳೆ ತಮಗಾದ ಹಿಂಸೆ ನೆನೆದು ಕುಸಿದುಹೋದ ಸಾಧ್ವಿ ಪ್ರಗ್ಯಾ ಸಿಂಗ್
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ (ಎಡಿಎಸ್) ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ ಅವರು 2008ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು. ಅವರೊಂದಿಗೆ ಇನ್ನಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಮೃತಪಟ್ಟಿದ್ದರು. ಉಗ್ರರ ವಿರುದ್ಧದ ಹೋರಾಟದಲ್ಲಿ ಜೀವಕಳೆದುಕೊಂಡ ಅವರ ಪ್ರಾಣತ್ಯಾಗಕ್ಕೆ ಇಡೀ ದೇಶ ಮಮ್ಮಲ ಮರಗಿತ್ತು. ಆದರೆ, ಇದೇ ಹೇಮಂತ್ ಕರ್ಕರೆ ಅವರ ತನಿಖೆಯ ಕಾರಣದಿಂದಲೇ ಸಾಧ್ವಿ ಪ್ರಗ್ಯಾ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು.
ಕೆಟ್ಟದಾಗಿ ನಡೆಸಿಕೊಂಡಿದ್ದರು
'ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಹೇಮಂತ್ ಕರ್ಕರೆ ನನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದ್ದರು. ಪ್ರಕರಣದ ತನಿಖೆ ವೇಳೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ನಿಮ್ಮ ಇಡೀ ವಂಶ ನಾಶವಾಗುತ್ತದೆ ಎಂದು ನಾನು ಅವರಿಗೆ ಹೇಳಿದ್ದೆ. ಅವರ ಕರ್ಮದ ಫಲವಾಗಿಯೇ ಸತ್ತುಹೋದರು' ಎಂದು ಸಾಧ್ವಿ ಹೇಳಿಕೆ ನೀಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಪತ್ನಿ
'ಹೇಮಂತ್ ಕರ್ಕರೆ ದೇಶದ್ರೋಹಿ'
'ಹೇಮಂತ್ ಕರ್ಕರೆ ಅವರನ್ನು ಕರೆಯಿಸಿದ್ದ ತನಿಖಾ ತಂಡ, ಆಕೆಯ ವಿರುದ್ಧ ಪುರಾವೆ ಇಲ್ಲದಿದ್ದರೆ ಬಿಟ್ಟುಬಿಡಿ ಎಂದು ಸೂಚಿಸಿತ್ತು. ಆದರೆ, ಅವರು ಆಕೆಯ ವಿರುದ್ಧ ಸಾಕ್ಷ್ಯ ಪತ್ತೆಹಚ್ಚಲು ಏನು ಬೇಕಾದರೂ ಮಾಡುತ್ತೇನೆ. ಆಕೆಯನ್ನು ಬಿಟ್ಟುಬಿಡುವುದಿಲ್ಲ ಎಂದಿದ್ದರು. ಇದು ಅವರ ದ್ವೇಷ. ಅವರು ದೇಶದ್ರೋಹಿ. ಅವರು ಧರ್ಮ ವಿರೋಧಿ. ನೀವು ಅದನ್ನು ನಂಬುವುದಿಲ್ಲ. ಆದರೆ, ನಿನ್ನ ಸರ್ವನಾಶವಾಗುತ್ತದೆ ಎಂದಿದ್ದೆ. ಕೇವಲ ಎರಡು ತಿಂಗಳಿನಲ್ಲಿಯೇ ಉಗ್ರರು ಅವರನ್ನು ಕೊಂದು ಹಾಕಿದರು' ಎಂದಿದ್ದಾರೆ.
ಲೋಕಸಭೆ ಚುನಾವಣೆ: ಪ್ರಜ್ಞಾ ಸಿಂಗ್ ಸ್ಪರ್ಧೆ ರದ್ದತಿ ಅಸಾಧ್ಯ?
ಕಾಂಗ್ರೆಸ್ನಿಂದ ಕಿರುಕುಳ
'ಕಾಂಗ್ರೆಸ್ ಹಿಂದೂಗಳನ್ನು ಭಯೋತ್ಪಾದನೆಯೊಂದಿಗೆ ಬೆಸೆಯುತ್ತಿದೆ. ಅವರನ್ನು ಭಯೋತ್ಪಾದಕರು ಎಂದು ಕರೆಯುತ್ತಿದೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದೆ. ನನ್ನನ್ನು ಅತಿಯಾಗಿ ಹಿಂಸಿಸಲಾಯಿತು. ಭವಿಷ್ಯದಲ್ಲಿ ಇತರೆ ಮಹಿಳೆಯರಿಗೂ ಇದನ್ನೇ ಪುನರಾವರ್ತಿಸುವುದಿಲ್ಲ ಎಂದು ಹೇಗೆ ನಾನು ನಂಬುವುದು?' ಎಂದು ಪ್ರಶ್ನಿಸಿದ್ದಾರೆ.
|
ಸಾಧ್ವಿ ವಿರುದ್ಧ ದೂರು
ಭೋಪಾಲದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಮುಂಬೈನ ಮಾಜಿ ಎಟಿಎಸ್ ಅಧಿಕಾರಿ ಹುತಾತ್ಮ ಹೇಮಂತ್ ಕರ್ಕರೆ ಅವರ ಕುರಿತಾದ ಹೇಳಿಕೆಗೆ ದೂರು ದಾಖಲಾಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಖಂಡನೆ
ಸೇನೆ ಮತ್ತು ಹುತಾತ್ಮರ ಕುರಿತಂತೆ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡಬಾರದು ಎಂದು ಚುನಾವಣಾ ಆಯೋಗದ ಸ್ಪಷ್ಟವಾಗಿ ಹೇಳಿದೆ. ಹೇಮಂತ್ ಕರ್ಕರೆ ಅವರೊಬ್ಬ ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಅಧಿಕಾರಿಯಾಗಿದ್ದರು. ಅವರು ಮುಂಬೈನ ಉಗ್ರರ ದಾಳಿಯಲ್ಲಿ ಜನರಿಗಾಗಿ ಪ್ರಾಣವನ್ನು ಅರ್ಪಿಸಿದರು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಸಾಧ್ವಿ ಹೇಳಿಕೆಯನ್ನು ಖಂಡಿಸಿದ್ದಾರೆ.