ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಅಂತರ ಕಾಯ್ದುಕೊಂಡ ಬಿಜೆಪಿ
ಭೋಪಾಲ್, ಏಪ್ರಿಲ್ 19: ಮುಂಬೈ ಉಗ್ರರ ದಾಳಿ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಸತ್ತಿದ್ದು ತನ್ನ ಶಾಪದಿಂದ ಎಂದು ವಿವಾದ ಸೃಷ್ಟಿಸಿರುವ ಭೋಪಾಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಾಧ್ವಿ ಹೇಳಿಕೆ ವ್ಯಾಪಕ ವಿರೋಧಕ್ಕೆ ಗುರಿಯಾಗಿದೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಬಲಿಯಾದ ಹುತಾತ್ಮ ಅಧಿಕಾರಿ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವ ಆರೋಪಿ ಮಹಿಳೆಗೆ ಬಿಜೆಪಿಗೆ ಹೇಗೆ ಟಿಕೆಟ್ ನೀಡಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಧ್ವಿ, ಮತ್ತೊಂದು ವಿವಾದ ಸೃಷ್ಟಿಸಿರುವುದು ಬಿಜೆಪಿಗೆ ಮುಜುಗರ ಉಂಟುಮಾಡಿದೆ.
'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ
ಮುಂಬೈ ಉಗ್ರರ ದಾಳಿಯ ವೇಳೆ ಮೃತಪಟ್ಟ ಹೇಮಂತ್ ಕರ್ಕರೆ ಅವರನ್ನು ಬಿಜೆಪಿಯು ಹುತಾತ್ಮ ಎಂದೇ ಪರಿಗಣಿಸುತ್ತದೆ ಎಂದು ಅದು ತನ್ನ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿದೆ.
ಇದು ಸಾಧ್ವಿ ಅವರ ವೈಯಕ್ತಿಕ ಹೇಳಿಕೆ ಎಂದಿರುವ ಬಿಜೆಪಿ, ತಾವು ಅನುಭವಿಸಿದ ದೈಹಿಕ ಮತ್ತು ಮಾನಸಿಕ ಕಿರುಕುಳದ ಕಾರಣದಿಂದ ಈ ರೀತಿ ಹೇಳಿರಬಹುದು ಎಂದು ಹೇಳಿದೆ.
BJP releases statement over the remarks made against late Hemant Karkare by BJP LS candidate for Bhopal, Pragya Thakur; says, "BJP considers him a martyr. This is Sadhvi Pragya's personal statement which she might have given because of the mental & physical torture she had faced" pic.twitter.com/CNr5n5EbDl
— ANI (@ANI) 19 April 2019
'ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಹೇಮಂತ್ ಕರ್ಕರೆ ನನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದ್ದರು. ಪ್ರಕರಣದ ತನಿಖೆ ವೇಳೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ನಿಮ್ಮ ಇಡೀ ವಂಶ ನಾಶವಾಗುತ್ತದೆ ಎಂದು ನಾನು ಅವರಿಗೆ ಹೇಳಿದ್ದೆ. ಅವರ ಕರ್ಮದ ಫಲವಾಗಿಯೇ ಸತ್ತುಹೋದರು' ಎಂದು ಸಾಧ್ವಿ ಹೇಳಿಕೆ ನೀಡಿದ್ದರು.
ಬಂಧನದ ವೇಳೆ ತಮಗಾದ ಹಿಂಸೆ ನೆನೆದು ಕುಸಿದುಹೋದ ಸಾಧ್ವಿ ಪ್ರಗ್ಯಾ ಸಿಂಗ್
'ಹೇಮಂತ್ ಕರ್ಕರೆ ಅವರನ್ನು ಕರೆಯಿಸಿದ್ದ ತನಿಖಾ ತಂಡ, ಆಕೆಯ ವಿರುದ್ಧ ಪುರಾವೆ ಇಲ್ಲದಿದ್ದರೆ ಬಿಟ್ಟುಬಿಡಿ ಎಂದು ಸೂಚಿಸಿತ್ತು. ಆದರೆ, ಅವರು ಆಕೆಯ ವಿರುದ್ಧ ಸಾಕ್ಷ್ಯ ಪತ್ತೆಹಚ್ಚಲು ಏನು ಬೇಕಾದರೂ ಮಾಡುತ್ತೇನೆ. ಆಕೆಯನ್ನು ಬಿಟ್ಟುಬಿಡುವುದಿಲ್ಲ ಎಂದಿದ್ದರು. ಇದು ಅವರ ದ್ವೇಷ. ಅವರು ದೇಶದ್ರೋಹಿ. ಅವರು ಧರ್ಮ ವಿರೋಧಿ. ನೀವು ಅದನ್ನು ನಂಬುವುದಿಲ್ಲ. ಆದರೆ, ನಿನ್ನ ಸರ್ವನಾಶವಾಗುತ್ತದೆ ಎಂದಿದ್ದೆ. ಕೇವಲ ಎರಡು ತಿಂಗಳಿನಲ್ಲಿಯೇ ಉಗ್ರರು ಅವರನ್ನು ಕೊಂದು ಹಾಕಿದರು' ಎಂದು ಹೇಳಿದ್ದರು.