ಚುನಾವಣೆ ಭವಿಷ್ಯ ನುಡಿದಿದ್ದ ಪ್ರಾಧ್ಯಾಪಕನಿಗೆ ಅಮಾನತು ಶಿಕ್ಷೆ
ಭೋಪಾಲ್, ಮೇ 14 : ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜ್ಯೋತಿಷಿಗಳಾಗಲಿ, ವೇದ-ಜ್ಯೋತಿರ್ವಿಜ್ಞಾನ ಕಲಿಸುವ ಪ್ರೊಫೆಸರುಗಳಾಗಲಿ ಯಾವುದೇ ರೀತಿಯ ಮಾತುಗಳನ್ನಾಗಲಿ, ಭವಿಷ್ಯವನ್ನಾಗಲಿ ನುಡಿಯುವಂತಿಲ್ಲ. ನುಡಿದರೆ ಕೇಸು ಅಥವಾ ಅಮಾನತು ಗ್ಯಾರಂಟಿ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ತಾವೇ ತಾವಾಗಿ ಮಾತ್ರವಲ್ಲ, ಮಾಧ್ಯಮದವರಾಗಲಿ ಅಥವಾ ವಿದ್ಯಾರ್ಥಿಗಳಾಗಲಿ ಕೇಳಿದ ಪ್ರಶ್ನೆಗೂ ಕೂಡ 'ಹೀಗೇ ಆಗುತ್ತದೆ' ಎನ್ನುವಂಥ ಉತ್ತರಗಳನ್ನು ನೀಡುವಂತಿಲ್ಲ. ನಿಖರವಾಗಿ ಹೀಗೇ ಆಗುತ್ತದೆ ಅನ್ನುವುದು ಅತ್ಲಾಗಿರಲಿ, ಸಾಧ್ಯತೆಗಳ ಬಗ್ಗೆಯೂ ಚಕಾರವೆತ್ತುವಂತಿಲ್ಲ.
ಫಲಿತಾಂಶದ ಬಗ್ಗೆ ಆತಂಕ, ಮತ್ತೆ ಜ್ಯೋತಿಷಿಗಳ ಮೊರೆ ಹೋದ ಕುಮಾರಸ್ವಾಮಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸುತ್ತದೆ ಎಂದು ವಿದ್ಯಾರ್ಥಿಯ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟಿದ್ದ, ಉಜ್ಜೈನ್ ನಲ್ಲಿರುವ ವಿಕ್ರಮ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರ ವಿರುದ್ಧ ಶಿಸ್ತಿನ ಕ್ರಮವಾಗಿ ಅಮಾನತು ಮಾಡಿ ಕಾಂಗ್ರೆಸ್ ಅಧಿಕಾರವಿರುವ ಸರಕಾರ ಆದೇಶ ಹೊರಡಿಸಿದೆ.
ಸಂಸ್ಕೃತ-ವೇದ-ಜ್ಯೋತಿರ್ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ 55 ವರ್ಷದ ಮುಸಲಗಾಂವಕರ್ ಅವರೇ ಅಮಾನತಿಗೊಳಗಾಗಿರುವ ಪ್ರಾಧ್ಯಾಪಕರು. ಜ್ಯೋತಿಷ್ಯವೆಂಬುದು ಏನನ್ನೂ ನಿಖರವಾಗಿ ಹೇಳುವುದಿಲ್ಲ, ಬದಲಾಗಿ ಸಾಧ್ಯತೆಗಳ ಬಗ್ಗೆ ತಿಳಿಸುವ ವಿಜ್ಞಾನ ಮಾತ್ರ ಎಂದು ಅವರು ಸಮರ್ಥಿಸಿಕೊಂಡಿದ್ದರೂ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಮಧ್ಯ ಪ್ರದೇಶ ವಿಶ್ವವಿದ್ಯಾಲಯ ಕಾಯ್ದೆ 1973ರ ಅಡಿಯಲ್ಲಿ ರಾಜೇಶ್ವರ ಶಾಸ್ತ್ರೀ ಮುಸಲಗಾಂವಕರ್ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಉನ್ನತ ಶಿಕ್ಷಣ ಇಲಾಖೆ ಶಿಫಾರಸು ಮಾಡಿತ್ತು. ಅದರಂತೆ ಅವರನ್ನು ಕಮಲ ನಾಥ್ ಸರಕಾರ ಅಮಾನತಿನಲ್ಲಿ ಇಟ್ಟಿದೆ.
ಮಮತಾ ಬ್ಯಾನರ್ಜಿಗೆ ಗಂಡಾಂತರದ ಕಾಲ: ಜ್ಯೋತಿಷಿ ಅಮ್ಮಣ್ಣಾಯ ವಿಶ್ಲೇಷಣೆ
ಬಿಜೆಪಿ ಮುನ್ನೂರರ ಆಸುಪಾಸಿನಲ್ಲಿ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಎನ್ಡಿಎ ಮುನ್ನೂರರ ಗಡಿಯನ್ನು ದಾಟುವ ಸಾಧ್ಯತೆಯಿದೆ ಎಂದು ರಾಜೇಶ್ವರ ಶಾಸ್ತ್ರೀ ಮುಸಲಗಾಂವಕರ್ ಅವರು ಫೇಸ್ ಬುಕ್ಕಿನಲ್ಲಿ ತಮ್ಮ ಅನಿಕೆಯನ್ನು ಪ್ರಕಟಿಸಿದ್ದರು. ಇದೇ ಅವರಿಗೆ ಮುಳುವಾಗಿದೆ.
ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ನಾನು ತಟಸ್ಥನಾಗಿದ್ದೇನೆ. ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗಲಿ ಅಥವಾ ಮತ್ತೊಂದಕ್ಕೆ ನಷ್ಟವಾಗಲಿ ಎನ್ನುವ ದೃಷ್ಟಿಯಿಂದ ನಾನು ಹೇಳಿಕೆ ನೀಡಿರಲಿಲ್ಲ. ವಿದ್ಯಾರ್ಥಿಯೊಬ್ಬ ಕೇಳಿದ್ದ ಪ್ರಶ್ನೆಗೆ ಸಾಧ್ಯತೆಯ ಬಗ್ಗೆ ಉತ್ತರಿಸಿದ್ದೆ ಅಷ್ಟೆ ಎಂದು ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಅಲ್ಲದೆ, ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರವನ್ನು ಆತನಿಗೆ ಮಾತ್ರ ಕಳಿಸಿದ್ದೆ. ಆದರೆ, ಆತ ನನ್ನ ಅರಿವಿಗೆ ಬಾರದಂತೆ ಫೇಸ್ ಬುಕ್ಕಿನಲ್ಲಿ ಅದನ್ನು ಪ್ರಕಟಿಸಿದ್ದ. ಇದನ್ನು ಕೆಲವರು ನನ್ನ ಗಮನಕ್ಕೆ ತರುತ್ತಿದ್ದಂತೆ ನಾನು ಆ ಪೋಸ್ಟ್ ಡಿಲೀಟ್ ಮಾಡಿದ್ದೆ ಮತ್ತು ಕ್ಷಮೆಯನ್ನೂ ಯಾಚಿಸಿದ್ದೆ ಎಂದು ಶಾಸ್ತ್ರಿಯವರು ವಿವರಣೆ ನೀಡಿದ್ದಾರೆ.
ಜ್ಯೋತಿಷ್ಯ: ಮೋದಿ ಅವರಿಗಿರುವ ಮಹಾಸಿಂಹಾಸನಾಧೀಶ್ವರ ಯೋಗದ ಫಲ ಏನು?
ಉನ್ನತ ಶಿಕ್ಷಣ ಇಲಾಖೆ, ತನ್ನ ವಿವರಣೆಯನ್ನು ಪ್ರಸ್ತುತಪಡಿಸಲು ಅವಕಾಶ ನೀಡಿಲ್ಲ. ಏಕಮುಖವಾಗಿ ಶಿಸ್ತಿನ ಕ್ರಮವನ್ನು ಜರುಗಿಸಿದೆ. ತಮ್ಮ ಅಮಾನತು ಶಿಕ್ಷೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲು ಏರುವುದಾಗಿ ರಾಜೇಶ್ವರ ಶಾಸ್ತ್ರೀ ಮುಸಲಗಾಂವಕರ್ ಅವರು ತಿಳಿಸಿದ್ದಾರೆ.
ಆದರೆ, ಸರಕಾರಿ ಉದ್ಯೋಗಿಯಾಗಿರುವ ಅವರು ನೀಡಿದ ಹೇಳಿಕೆ ಒಂದು ರಾಜಕೀಯ ಪಕ್ಷದ ಪರವಾಗಿದೆ. ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಉಜ್ಜೈನ್ ನ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದ ಮತ್ತು ಮಧ್ಯ ಪ್ರದೇಶ ಸಿವಿಲ್ ಸರ್ವೀಸ್ (ನಡಾವಳಿ) ನಿಯಮ ಪ್ರಕಾರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದ.