ಮಧ್ಯಪ್ರದೇಶದ ಅಸಲಿ ಕಥೆಯೇ ಬೇರೆ: ಇವರೇ, ಕಮಲ್ ನಾಥ್ ಸರಕಾರ ಪತನದ ಹಿಂದಿನ ಅಸಲಿ ವಿಲನ್
ದಶಕಗಳ ನಂತರ ಅಧಿಕಾರಕ್ಕೇರಲು ಶಕ್ತವಾಗಿದ್ದ ಕಾಂಗ್ರೆಸ್ಸಿಗೆ, ದೇಶದ ಪ್ರಮುಖ ಹಿಂದಿ ಬೆಲ್ಟ್ ರಾಜ್ಯವಾದ ಮಧ್ಯಪ್ರದೇಶದಲ್ಲಿ ಸರಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿನ ಒಂದೂವರೆ ವರ್ಷದ ಕಮಲ್ ನಾಥ್ ಸರಕಾರ ಪತನಗೊಂಡಿದೆ.
ಮಧ್ಯಪ್ರದೇಶದ ಪ್ರಭಾವೀ ಮುಖಂಡ, ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಕೂಡಲೇ, ಕಮಲ್ ನಾಥ್ ಸರಕಾರದ ದಿನಗಣನೆ ಆರಂಭವಾಗಿತ್ತು. ಯೋಜನಾಬದ್ದವಾಗಿ ಬಿಜೆಪಿ ಉರುಳಿಸಿದ ರಾಜಕೀಯ ದಾಳ ವರ್ಕೌಟ್ ಆಯಿತು.
ಥೇಟ್ ಕರ್ನಾಟಕದ ಮಾದರಿಯಲ್ಲೇ ಸಾಗಿದ ಅಲ್ಲಿನ ರಾಜಕೀಯ ಮೇಲಾಟದಲ್ಲಿ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ, ವಿಶ್ವಾಸಮತವನ್ನು ಕಮಲ್ ನಾಥ್ ಸಾಬೀತು ಪಡಿಸಬೇಕಾಗಿತ್ತು. ಸಂಖ್ಯಾಬಲದ ಕೊರತೆ ಇದ್ದಿದ್ದರಿಂದ, ಇದರ ಉಸಾಬಾರಿಗೆ ಹೋಗದ ಕಮಲ್ ನಾಥ್, ರಾಜೀನಾಮೆಯನ್ನು ಒಗಾಯಿಸಿಬಿಟ್ಟರು.
ಮೇಲ್ನೋಟಕ್ಕೆ ಕಮಲ್ ನಾಥ್ ಸರಕಾರ ಪತನಕ್ಕೆ ಕಾರಣ ಬಿಜೆಪಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ. ಆದರೆ, ರಾಜಕೀಯ ಪಂಡಿತರ ಪ್ರಕಾರ, ಕಮಲ್ ನಾಥ್ ಸರಕಾರ ಪತನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು.
ಬಿಜೆಪಿ ನೆಕ್ ಟು ನೆಕ್ ಫೈಟ್ ನೀಡಿತ್ತು
ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆ ಮುಗಿದಾಗ, ಕಾಂಗ್ರೆಸ್ಸಿಗೆ ಅಂತಹ ದೊಡ್ಡ ಮೆಜಾರಿಟಿ ಏನೂ ಸಿಕ್ಕಿರಲಿಲ್ಲ. ಬಿಜೆಪಿ ನೆಕ್ ಟು ನೆಕ್ ಫೈಟ್ ನೀಡಿತ್ತು. ಅತಿದೊಡ್ಡ ಪಕ್ಷವಾಗಿರುವುದರಿಂದ ಮತ್ತು ಇತರರ ಬೆಂಬಲದಿಂದ ಕಮಲ್ ನಾಥ್ ಅಧಿಕಾರಕ್ಕೆ ಏರಿದರು. ಕಮಲ್ ನಾಥ್ ಅವರನ್ನು ಸಿಎಂ ಮಾಡಲು ಸೋನಿಯಾ ಕುಟುಂಬ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಯಾಕೆಂದರೆ, ಜ್ಯೋತಿರಾದಿತ್ಯ ಸಿಂಧಿಯಾ ಪ್ರಬಲ ಆಕಾಂಕ್ಷಿಯಾಗಿದ್ದರು.
ರಾಹುಲ್, ಪ್ರಿಯಾಂಕ ಮಾತಿಗೆ ಸಿಎಂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಸಿಂಧಿಯಾ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮಾತಿಗೆ ಬೆಲೆಕೊಟ್ಟು ಸಿಎಂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಸಿಂಧಿಯಾರನ್ನು, ಆನಂತರ ಕಾಂಗ್ರೆಸ್ ನಡೆಸಿಕೊಂಡ ರೀತಿಯೇ ಅವರನ್ನು ಪಕ್ಷ ಬಿಡುವಂತೆ ಮಾಡಲು ಕಾರಣವಾಯಿತು. ಸಿಂಧಿಯಾ ಮತ್ತು ಅಲ್ಲಿನ ಮತ್ತೊಬ್ಬ ಪ್ರಭಾವೀ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ನಡುವೆ ಅಷ್ಟಕಷ್ಟೇ. ಇದೇ ಕಾಂಗ್ರೆಸ್ಸಿಗೆ ಅಲ್ಲಿ ಮುಳುವಾಗಲು ಕಾರಣವಾಯಿತು.
ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಉತ್ತಮ ಬಾಂಧವ್ಯ
ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಉತ್ತಮ ಬಾಂಧವ್ಯ ಇದ್ದಿದ್ದರಿಂದ, ಸಿಂಧಿಯಾರನ್ನು ಸತತವಾಗಿ ಕಡೆಗಣಿಸಲಾಯಿತು. ಪಕ್ಷದ ಹಲವು ಸಭೆಗಳಲ್ಲಿ ಸಿಂಧಿಯಾರನ್ನು ಅವಮಾನಿಸಲಾಯಿತು ಎನ್ನುವ ವಿಷಯವನ್ನು ರಾಜಕೀಯ ವಿಶ್ಲೇಷಕರು ಒತ್ತಿಒತ್ತಿ ಹೇಳುತ್ತಾರೆ.
ದಿಗ್ವಿಜಯ್ ಸಿಂಗ್ - ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ವೈಮನಸ್ಸು
ನೋಡುವಷ್ಟು ನೋಡಿ ಹೈರಾಣವಾಗಿದ್ದ ಸಿಂಧಿಯಾಗೆ ಬಿಜೆಪಿಯ ಆಫರ್ ಪಕ್ಷ ಬಿಡಲು ಪ್ರೇರಣೆ ನೀಡಿತು. ರಾಜ್ಯದ ಪ್ರಮುಖ ನಾಯಕನನ್ನು ಕಡೆಗಣಿಸಿದರೆ ಏನಾಗಬಹುದು ಎನ್ನುವುದನ್ನು ಸಿಂಧಿಯಾ ತೋರಿಸಿಕೊಟ್ಟರು. ದಿಗ್ವಿಜಯ್ ಸಿಂಗ್, ಬೆಂಗಳೂರಿಗೆ ಬಂದು, ಅತೃಪ್ತರನ್ನು ಭೇಟಿಯಾಗಲು ಬರುವ ವೇಳೆ ಪರಿಸ್ಥಿತಿ ಕೈಮೀರಿತ್ತು. ರಾಜಕೀಯ ಪಂಡಿತರ ಪ್ರಕಾರ, ಈ ಎಲ್ಲಾ ಒಂದೂವರೆ ವರ್ಷದ ವಿದ್ಯಮಾನ, ದಿಗ್ವಿಜಯ್ ಸಿಂಗ್ - ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ವೈಮನಸ್ಸೇ ಕಮಲ್ ನಾಥ್ ಸರಕಾರ ಪತನಕ್ಕೆ ಕಾರಣ.