ಪ್ರಜ್ಞಾ ವಿರುದ್ಧದ ಕೊಲೆ ಕೇಸ್ ರೀಓಪನ್, ಕಮಲ್ ನಾಥ್ ಸಜ್ಜು
ಭೋಪಾಲ್, ಮೇ 21: ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿರುದ್ಧ ಹಳೆ ಕೇಸ್ ರೀ ಓಪನ್ ಮಾಡಲು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮುಂದಾಗಿರುವ ಸುದ್ದಿ ಬಂದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ ಅವರ ಕೊಲೆ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಅವರು ಪ್ರಮುಖ ಆರೋಪಿಯಾಗಿದ್ದರು. ಆದರೆ, 2017ರಲ್ಲಿ ಎನ್ಐಎ ಕೋರ್ಟಿನಿಂದ ಖುಲಾಸೆಗೊಂಡಿದ್ದರು.
ಜೋಶಿ ಅವರು ಠಾಕೂರ್ ಅವರ ಆಪ್ತರಾಗಿದ್ದರು. ಡಿಸೆಂಬರ್ 29, 2007ರಲ್ಲಿ ದೇವಾಸ್ ಇಂಡಸ್ಟ್ರಿಯಲ್ ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಂಡುಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಠಾಕೂರ್ ಸೇರಿದಂತೆ ಏಳು ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ, ಫೆಬ್ರವರಿ 01, 2017ರಲ್ಲಿ ಎನ್ಐಎ ಕೋರ್ಟೀನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಲಾಗಿತ್ತು.
ಲೋಕಸಭಾ ಚುನಾವಣೆ 2019ರಲ್ಲಿ ಭೋಪಾಲ್ ಅಭ್ಯರ್ಥಿಯಾಗಿರುವ ಪ್ರಜ್ಞಾ ಠಾಕೂರ್ ಅವರು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿಗೆ ತನ್ನ ಶಾಪ ಕಾರಣ ಎಂದು ಹೇಳಿಕೆ ನೀಡಿದ್ದರು. ಮಹಾತ್ಮ ಗಾಂಧಿ ಕೊಂದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಬಿಜೆಪಿ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಕ್ಷಮೆಯಾಚಿಸಿದ ಠಾಕೂರ್ ಅವರು ಚುನಾವಣೆ ಫಲಿತಾಂಶ ತನಕ ಮೌನವಾಗಿರುವುದಾಗಿ ಹೇಳಿದ್ದಾರೆ.