ಬಿಜೆಪಿ ಸೇರಿಕೊಂಡ ಮಹಿಳಾ ಅಭ್ಯರ್ಥಿಯನ್ನು 'ಐಟಂ' ಎಂದ ಕಮಲ್ ನಾಥ್: ವ್ಯಾಪಕ ಆಕ್ರೋಶ
ಭೋಪಾಲ್, ಅಕ್ಟೋಬರ್ 19: ಇತ್ತೀಚೆಗೆ ಬಿಜೆಪಿ ಸೇರಿಕೊಂಡ ತಮ್ಮ ಮಾಜಿ ಮಹಿಳಾ ಸಹೋದ್ಯೋಗಿಯನ್ನು 'ಐಟಂ' ಎಂದು ತುಚ್ಛವಾಗಿ ಕರೆಯುವ ಮೂಲಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಕಮಲ್ ನಾಥ್ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ ಕೆಲವು ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ನಲ್ಲಿ ಉಪ ಚುನಾವಣೆ ನಡೆಯಲಿದ್ದು, ದಾಬ್ರಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಮಲ್ ನಾಥ್ ಈ ವಿವಾದಾತ್ಮಕ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ದಾಬ್ರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಇಮಾರ್ತಿ ದೇವಿ ವಿರುದ್ಧ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಲಾಯಿತು. ಆಗ ಕಮಲ್ ನಾಥ್, ತಮ್ಮ ಪಕ್ಷದ ಅಭ್ಯರ್ಥಿಯು ಬಹಳ 'ಸರಳ ವ್ಯಕ್ತಿ', ಎದುರಾಳಿ ಪಕ್ಷದ 'ಐಟಂ' ರೀತಿ ಅಲ್ಲ ಎಂದು ಹೇಳಿದ್ದಾರೆ.
'ನಾನೇಕೆ ಅವರ ಹೆಸರು ಹೇಳಲಿ (ಎದುರಾಳಿ ಪಕ್ಷದ ಅಭ್ಯರ್ಥಿ)? ನನಗಿಂತ ನಿಮಗೇ ಚೆನ್ನಾಗಿ ಆ ವ್ಯಕ್ತಿ ಬಗ್ಗೆ ತಿಳಿದಿದೆ. ಎಂತಹ ಐಟಂ' ಎಂದು ಕಮಲ್ ನಾಥ್ ಹೇಳಿದಾಗ ಗುಂಪುಗೂಡಿದ್ದ ಜನರು ಜೋರಾಗಿ ಇಮಾರ್ತಿ ದೇವಿ ಎಂದು ಬಿಜೆಪಿ ಅಭ್ಯರ್ಥಿ ಹೆಸರನ್ನು ಕೂಗಿದರು. ಮುಂದೆ ಓದಿ...
ಶಿವರಾಜ್ ಸಿಂಗ್ ಖಂಡನೆ
ಕಮಲ್ ನಾಥ್ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ವಿವಿಧ ವರ್ಗಗಳ ಜನರು ಕಿಡಿಕಾರಿದ್ದಾರೆ. 'ಇಮಾರ್ತಿ ದೇವಿ ಒಬ್ಬ ಬಡ ರೈತನ ಮಗಳು. ಹಳ್ಳಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾಕೆ ಸಾರ್ವಜನಿಕ ಸೇವೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಮಹಿಳೆಯೊಬ್ಬರನ್ನು ಐಟಂ ಎಂದು ಕರೆಯುವ ಮೂಲಕ ಕಾಂಗ್ರೆಸ್ ಮತ್ತು ಅದರ ನಾಯಕತ್ವವು ತಮ್ಮ ಊಳಿಗಮಾನ್ಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ' ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದ್ದಾರೆ.
ಬಡವಳಾಗಿ ಹುಟ್ಟಿದ್ದು ನನ್ನ ತಪ್ಪೇ?
'ನಾನು ಬಡ ಕುಟುಂಬದಲ್ಲಿ ಜನಿಸಿದ್ದರೆ ನನ್ನ ತಪ್ಪೇನು? ನಾನು ದಲಿತ ಸಮುದಾಯಕ್ಕೆ ಸೇರಿದ್ದರೆ ನನ್ನ ತಪ್ಪೇನು? ಇಂತಹ ಜನರನ್ನು ಪಕ್ಷದಲ್ಲಿ ಇರಿಸಿಕೊಳ್ಳಬೇಡಿ ಎಂದು ಸ್ವತಃ ತಾಯಿ ಆಗಿರುವ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುತ್ತೇನೆ. ಮಹಿಳೆಯರ ವಿರುದ್ಧ ಇಂತಹ ಮಾತುಗಳನ್ನಾಡಿದರೆ ಮಹಿಳೆಯರು ಮುಂದೆ ಬರುವುದು ಹೇಗೆ?' ಎಂದು ಇಮಾರ್ತಿ ದೇವಿ ಪ್ರಶ್ನಿಸಿದ್ದಾರೆ.
ಕಮಲ್ ನಾಥ್ ವಿರುದ್ಧ ದೂರು
ಬಿಜೆಪಿಯ ನಿಯೋಗವೊಂದು ಭೋಪಾಲ್ನಲ್ಲಿನ ಚುನಾವಣಾ ಆಯೋಗ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಮಹಿಳೆಯರು ಹಾಗೂ ದಲಿತರನ್ನು ಅವಮಾನಿಸಿದ್ದಕ್ಕಾಗಿ ಕಮಲ್ ನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜೀನಾಮೆ ನೀಡಿದ್ದ ಸಿಂಧಿಯಾ ನಿಷ್ಠರು
ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಇಮಾರ್ತಿ ದೇವಿ ಮತ್ತು ಇತರೆ 21 ಶಾಸಕರು ಕಾಂಗ್ರೆಸ್ ಮತ್ತು ವಿಧಾನಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣಾಗಿದ್ದರು. ಶಾಸಕರ ರಾಜೀನಾಮೆಗಳಿಂದ ತೆರವಾದ ಕ್ಷೇತ್ರಗಳಿಗೆ ನವೆಂಬರ್ 10ರಂದು ಚುನಾವಣೆ ನಡೆಯಲಿದೆ.