ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ಭೋಪಾಲ್, ಆಗಸ್ಟ್ 06: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂದಿಯಾ 370 ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಜ್ಯೋತಿರಾದಿತ್ಯ ಸಿಂದಿಯಾ, "ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕುರಿತ ಸರ್ಕಾರದ ನಡೆಯನ್ನು ನಾನು ಬೆಂಬಲಿಸುತ್ತೇನೆ. ಅವು ಸಂಪೂರ್ಣವಾಗಿ ಭಾರತದ ಭಾಗವಾಗುವುದನ್ನೂ ನಾನು ಬೆಂಬಲಿಸುತ್ತೇನೆ. ಎಲ್ಲವೂ ಸಾಂವಿಧಾನಿಕ ಹಾದಿಯಲ್ಲೇ ಹೋಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆಗ ಯಾವ ಪ್ರಶ್ನೆಯೂ ಏಳುತ್ತಿರಲಿಲ್ಲ. ಆದರೂ ಇದು ನನ್ನ ದೇಶದ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರ. ಆದ್ದರಿಂದ ನಾನು ಇದನ್ನು ಬೆಂಬಲಿಸುತ್ತೇನೆ" ಎಂದು ಸಿಂದಿಯಾ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ
ಲೋಕಸಭೆ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ನಾಯಕರ ಬಗ್ಗೆ ಅಸಾಮಾಧಾನ ಹೊಂದಿರುವ ಜ್ಯೋತಿರಾದಿತ್ಯ ಸಿಂದಿಯಾ, ಇದೀಗ ಕೇಂದ್ರ ಸರ್ಕಾರದ ನಡೆಗೆ ಬೆಂಬಲ ಸೂಚಿಸುವ ಮೂಲಕ ಪಕ್ಷ ಮತ್ತಷ್ಟು ಮುಜುಗರ ಅನುಭವಿಸುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಬೆಳಗ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರವನ್ನು ಹರಿದುಹಾಕುವುದರಿಂದ, ಚುನಾಯಿತ ಪ್ರತಿನಿಧಿಗಳನ್ನು ಜೈಲಿಗೆ ತಳ್ಳಿ ಸಂವಿಧಾನವನ್ನು ಉಲ್ಲಂಘಿಸುವುದರಿಂದ ನಮ್ಮ ರಾಷ್ಟ್ರದ ಸಮಗ್ರತೆ ಹೆಚ್ಚುವುದಿಲ್ಲ. ನಮ್ಮ ದೇಶ ನಿರ್ಮಾಣವಾಗಿರುವುದು ಜನರಿಂದ, ತುಂಡು ಭೂಮಿಯಿಂದಲ್ಲ. ಶಾಸಕಾಂಗ ಅಧಿಕಾರವನ್ನು ಹೀಗೆ ದುರುಪಯೋಗ ಪಡಿಸಿಕೊಳ್ಳುವುದು ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಬಹುದೊಡ್ಡ ಅಪಾಯವೆನ್ನಿಸಲಿದೆ" ಎಂದಿದ್ದರು.
ಕೇಂದ್ರದ ನಡೆಯ ಬಗ್ಗೆ ಸೋಮವಾರ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ದ್ವಿವೇದಿ, "ಈ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಇದು ನನ್ನ ವೈಯಕ್ತಿಕ ನಿರ್ಧಾರವಷ್ಟೇ. ಪಕ್ಷದ ನಿರ್ಧಾರ ಬೇರೆ ಇದ್ದಿರಬಹುದು. ನನ್ನ ಪ್ರಕಾರ ಇತಿಹಾಸದಲ್ಲಿ ಮಾಡಿದ ತಪ್ಪನ್ನು ಈ ಮೂಲಕ ಸರಿಪಡಿಸಲಾಗಿದೆ" ಎಂದಿದ್ದರು.
ಕೇಂದ್ರದ ನಡೆಗೆ ಸ್ನೇಹಿತರಿಂದಲೇ ವಿರೋಧ, ವಿರೋಧಿಗಳಿಂದ ಅಚ್ಚರಿಯ ಬೆಂಬಲ!
ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಬಿಎಸ್ಪಿ ನಾಯಕಿ ಮಾಯಾವತಿ, ಎಎಪಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಬಿಜೆಪಿಯ ಬದ್ಧ ವೈರಿಗಳೇ ಸರ್ಕಾರದ ಈ ನಡೆಯನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.