ಜ್ಯೋತಿರಾದಿತ್ಯ ಸಿಂದಿಯಾಗೆ ಹಂದಿಜ್ವರ ಹಾಗಾಗಿ ಮಾತನಾಡ್ತಿಲ್ಲ: ದಿಗ್ವಿಜಯ್ ಸಿಂಗ್
ಭೋಪಾಲ್, ಮಾರ್ಚ್ 10: ಮಧ್ಯಪ್ರದೇಶದಲ್ಲಿ ಇಷ್ಟೊಂದು ಗಂಭೀರ ಸ್ವರೂಪದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಇಂತಹ ಬೆಳವಣಿಗೆಗೆ ಕಾರಣರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅವರಿಗೆ ಹಂದಿಜ್ವರ ಇರುವ ಕಾರಣ ಮಾತನಾಡುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗೆ ಕಾರಣವಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ, ಅವರಿಗೆ ಹಂದಿಜ್ವರ ಆವರಿಸಿರುವ ಕಾರಣ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ.
ಸೋಮವಾರ ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಕಮಲನಾಥ್ ವಿರುದ್ಧ ಅಸಮಾಧಗೊಂಡಿರುವ ಶಾಸಕರು-ಸಚಿವರು ಸಹ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಇದೀಗ ಒಡೆದ ಮನೆಯಂತಾಗಿದೆ.
ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಿಕ್ಕಟ್ಟಿನ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿರುವ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದಲ್ಲಿ ಮತದಾರರ ಆದೇಶವನ್ನು ಅಗೌರವಿಸಲು ಮುಂದಾಗುವ ನಾಯಕರಿಗೆ ಇಲ್ಲಿನ ಮತದಾರರು ಸೂಕ್ತವಾದ ಕಾಲದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಕಮಲ್ನಾಥ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಬಣಗಳ ನಡುವೆ ಕಳೆದ ಹಲವು ದಿನಗಳಿಂದ ಬಿಕ್ಕಟ್ಟು ನಡೆಯುತ್ತಲೇ ಇದ್ದು, ಕಳೆದ ವಾರ 16 ಶಾಸಕರು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದ್ದರು.
ಇನ್ನೂ ಇವರಿಗೆ ಬೆಂಬಲ ಸೂಚಿಸಿ ಸೋಮವಾರ ತಡರಾತ್ರಿ 22 ಸಚಿವರು ಸಹ ಸಾಮೂಹಿಕ ರಾಜೀನಾಮೆ ನೀಡಿರುವುದು ಇದೀಗ ಕಮಲ್ನಾಥ್ ಸರ್ಕಾರದ ತಲೆನೋವಿಗೆ ಕಾರಣವಾಗಿದೆ.