ಕಮಲ್ ನಾಥ್ ಗೆ ಎಚ್ಚರಿಕೆ ನೀಡಿದ ಜ್ಯೋತಿರಾದಿತ್ಯ ಸಿಂದಿಯಾ
ಭೊಪಾಲ್, ಸೆಪ್ಟೆಂಬರ್ 05: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಅವರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಎಚ್ಚರಿಕೆ ನೀಡಿದ್ದು, ಪಕ್ಷದ ಒಳಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಬೇಕಾದ್ದು ಮುಖ್ಯಮಂತ್ರಿಯ ಜವಾಬ್ದಾರಿ ಎಂದಿದ್ದಾರೆ.
ಮಧ್ಯಪ್ರದೇಶ ಅರಣ್ಯ ಸಚಿವ ಉಮಂಗ್ ಸಿಂಘರ್ ಅವರು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರ ಇದೀಗ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಕಮಲ್ ನಾಥ್ ಸರ್ಕಾರದ ಮೇಲೆ ಸವಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರಾ ಜ್ಯೋತಿರಾದಿತ್ಯ ಸಿಂದಿಯಾ?
ಈ ಬೆಳವಣಿಗೆಯ ನಂತರ ಕಮಲ್ ನಾಥ್ ಮೇಲೆ ಜ್ಯೋತಿರಾದಿತ್ಯ ಸಿಂದಿಯಾ ಹರಿಹಾಯ್ದಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ತಹಬಂದಿಗೆ ತರುವಲ್ಲಿ ಕಮಲ್ ನಾಥ್ ಗಮನ ಹರಿಸುತ್ತಿಲ್ಲ, ಮುಖ್ಯಮಂತ್ರಿಯಾಗಿ ಇಂಥ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು ಅವರ ಕರ್ತವ್ಯ ಎಂದಿದ್ದಾರೆ.
"ಯಾವುದೇ ಸಮಸ್ಯೆ ಎದುರಾದಾಗ ಪರ-ವಿರೋಧಗಳ ಬಗ್ಗೆ ಚರ್ಚೆ ನಡೆಸಿ ಅದನ್ನು ಬಗೆಹರಿಸುವುದು ಕಮಲ್ ನಾಥ್ ಕರ್ತವ್ಯ. ಸರ್ಕಾರದಲ್ಲಿ ಯಾವಾಗಲೂ ಎರಡು ದಾರಿಗಳು ಇರಬಾರದು" ಎಂದು ಸಿಂದಿಯಾ ಕಿವಿಮಾತು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜ್ಯೋತಿರಾದಿತ್ಯ ಸಿಂದಿಯಾ ನಂತರ ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದ್ದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಆಘಾತ ನೀಡುವಂಥ ಹೇಳಿಕೆ ನೀಡಿದ್ದ ಸಿಂದಿಯಾ, "ನನ್ನನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಇಲ್ಲವೆಂದರೆ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ" ಎಂದಿದ್ದರು.