ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರಾ ಜ್ಯೋತಿರಾದಿತ್ಯ ಸಿಂದಿಯಾ?
Recommended Video
ಭೋಪಾಲ್, ಆಗಸ್ಟ್ 30: "ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ನೀಡದೆ ಇದ್ದರೆ 'ಬೇರೆ ದಾರಿ' ನೋಡಿಕೊಳ್ಳುತ್ತೇನೆ" ಎಂದು ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಪಕ್ಷದ ವರಿಷ್ಠರಿಗೆ ಬೆದರಿಕೆ ಒಡ್ಡಿದ್ದಾರೆ!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಸೋಲುಕಂಡಿದ್ದ ಜ್ಯೋತಿರಾದಿತ್ಯ ಸಿಂದಿಯಾ ತಮಗೆ ಸೂಕ್ತ ಹುದ್ದೆ ಸಿಗುತ್ತಿಲ್ಲ ಎಂಬ ಬಗ್ಗೆ ಹಲವು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಸಿಂದಿಯಾ ಸ್ವಾಗತಿಸಿದ್ದೂ ಪಕ್ಷದ ಮೇಲಿನ ಅಸಮಾಧಾನ ಅಭಿವ್ಯಕ್ತಿಯ ಒಂದು ಭಾಗವೇ ಎಂದರೆ ತಪ್ಪಾಗಲಾರದು!
ಆದರೆ ತಾವು ಪರೋಕ್ಷವಾಗಿ ಅಸಮಾಧಾನವನ್ನು ಹೊರ ಹಾಕುತ್ತಿರುವುದು ಪಕ್ಷದ ವರಿಷ್ಟರ ಮನವನ್ನು ತಟ್ಟುತ್ತಿಲ್ಲ ಎಂಬುದನ್ನು ಅರಿತ ಸಿಂದಿಯಾ, ಇದೀಗ ನೇರವಾಗಿಯೇ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. 'ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಿ, ಇಲ್ಲವೇ ಬೇರೆ ಆಯ್ಕೆಗಳ ಬಗ್ಗೆ ನಾನು ಯೋಚಿಸುತ್ತೇನೆ' ಎಂದು ಸಿಂದಿಯಾ ಹೇಳಿರುವುದಕ್ಕೂ, ಮೊನ್ನೆ ಮೊನ್ನೆ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಕ್ಕೂ ತಾಳೆ ಮಾಡಿ ನೋಡಿದರೆ ಏನೇನೋ ವದಂತಿಗಳು ಏಳುತ್ತಿರುವುದು ಸತ್ಯ!
ನಕುಲ್ ನಾಥ್ 17ನೇ ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದ
ಆದರೆ ಸಿಂದಿಯಾ ಅವರ ಬೆದರಿಕೆಗೆ ಕಾಂಗ್ರೆಸ್ ಬಗ್ಗುತ್ತದಾ? ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಎಂಬ ಇಬ್ಬರು ನಾಯಕರ ನಡುವೆ ಅಡಕತ್ತರಿಯಂತಾಗಿರುವ ಕಾಂಗ್ರೆಸ್ ಹೈಕಮಾಂಡ್ ನ ಮುಂದಿನ ನಡೆ ಏನು ಎಂಬುದು ಈಗಿರುವ ಪ್ರಶ್ನೆ!
ಸಿಂದಿಯಾರನ್ನು ಕಳೆದುಕೊಳ್ಳುವುದು ಸಾಧ್ಯವಿಲ್ಲ!
ಕಾಂಗ್ರೆಸ್ ಪಾಲಿಗೆ ಜ್ಯೋತಿರಾದಿತ್ಯ ಸಿಂದಿಯಾ ಪಕ್ಷದ ನಿಷ್ಠಾವಂತ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು. ಹಲವು ಬಾರಿ ಪಕ್ಷ ಸಂಕಷ್ಟದಲ್ಲಿದ್ದಾಗ ನೆರವಾದವರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಮಾಧವ್ ರಾವ್ ಸಿಂದಿಯಾ ಅವರ ಪುತ್ರ ಎಂಬ ಕಾರಣಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೂ ಜ್ಯೋತಿರಾದಿತ್ಯ ಸಿಂದಿಯಾ ಮೇಲೆ ಹೆಚ್ಚು ಅಕ್ಕರೆ. ಅಲ್ಲದೆ ದೇಶದಲ್ಲಿ ಕಾಂಗ್ರೆಸ್ ಈಗಿರುವ ಪರಿಸ್ಥಿರಿಯಲ್ಲಿ ಪಕ್ಷದ ನಿಷ್ಟಾವಂತ ನಾಯಕರನ್ನು ಕಳೆದುಕೊಳ್ಳುವುದೆಂದರೆ ಭಾರೀ ಪ್ರಮಾದ ಎಂಬುದು ಕಾಂಗ್ರೆಸ್ ಗೆ ಗೊತ್ತು.
ಸಿಂದಿಯಾ ಕೋಪಕ್ಕೆ ಕಾರಣವೇನು?
2018 ರಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ 'ಯುವಕರಿಗೆ ಮಣೆ' ಎಂದಿದ್ದ ಪಕ್ಷದ ಆಗಿನ ಅಧ್ಯಕ್ಷ ರಾಹುಲ್ ಗಾಂಧಿ ಜ್ಯೋತಿರಾದಿತ್ಯ ಸಿಂದಿಯಾ ಅವರ ಹೆಸರನ್ನೇ ಮುಖ್ಯಮಂತ್ರಿ ಹುದ್ದೆಗೆ ಸೂಚಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಿರಿತನಕ್ಕೆ ಮಣೆ ಹಾಕಿದ ರಾಹುಲ್ ಗಾಂಧಿ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಇದರಿಂದ ಸಿಂದಿಯಾ ತೀವ್ರ ಬೇಸರಗೊಂಡರು. ಅವರ ಅಭಿಮಾನಿಗಳೂ ಕಾಂಗ್ರೆಸ್ ವಿರುದ್ಧ ತಿರುಗಿ ನಿಂತರು. ಆದರೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಭಿನ್ನಾಭಿಪ್ರಾಯ ಬೇಡ ಎಂಬ ಹೈಕಮಾಂಡ್ ಒತ್ತಡಕ್ಕೆ ಮಣಿದು ಸಿಂದಿಯಾ ಸುಮ್ಮನಾದರು.
ಕಾಂಗ್ರೆಸ್ ಸೋಲಿಗೆ ನಾನೇ ಹೊಣೆ ಎಂದ ಕಮಲ್ ನಾಥ್ ಮಾತಿನರ್ಥವೇನು?
ಟಿಕೆಟ್ ಹಂಚಿಕೆ ವಿಷಯದಲ್ಲೂ ಸೋತ ಸಿಂದಿಯಾ
ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಛಿಂದ್ವಾರ ಕ್ಷೇತ್ರಕ್ಕೆ ತಮ್ಮ ಮಗ ನಕುಲ್ ನಾಥ್ ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕಮಲ್ ನಾಥ್ ಸಫಲರಾದರು. ಇದು ಸಿಂದಿಯಾ ಅವರಿಗೆ ಇಷ್ಟವಿರಲಿಲ್ಲ. ಆಗಲೂ ಸಿಂದಿಯಾ ಮಾತಿಗೆ ಹೈಕಮಾಂಡ್ ಮಣೆ ಹಾಕಲಿಲ್ಲ. ಸಾಲದೆಂಬಂತೆ ಮಧ್ಯಪ್ರದೇಶದ ಒಟ್ಟು 29 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು ಕ್ಷೇತ್ರ! ಅದೂ ನಕುಲ್ ನಾಥ್ ಸ್ಪರ್ಧಿಸಿದ್ದ ಛಿಂದ್ವಾರ ಕ್ಷೇತ್ರ. ಚುನಾವಣೆಯ ಸಮಯದಲ್ಲಿ ಕಮಲ್ ನಾಥ್ ಅವರು ಕೇವಲ ಮಗನ ಕ್ಷೇತ್ರಕ್ಕೆ ಮಾತ್ರ ಪ್ರಚಾರಕ್ಕೆ ತೆರಳಿ ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲೂ ನಿರ್ಲಕ್ಷ್ಯಿಸಿದ್ದೇ ಕಾಂಗ್ರೆಸ್ ನ ಹೀನಾಯ ಸೋಲಿಗೆ ಕಾರಣ ಎಂದು ಜ್ಯೋತಿರಾದಿತ್ಯ ಸಿಂದಿಯಾ ನೇರವಾಗಿ ಸೋಲಿನ ಹೊಣೆಯನ್ನು ಕಮಲ್ ನಾಥ್ ಹೆಗಲಿಗೆ ಕಟ್ಟಿದರೆ, ರಾಹುಲ್ ಗಾಂಧಿ ಸಹ ಪರೋಕ್ಷವಾಗಿ ಕಮಲ್ ನಾಥ್ ಅವರನ್ನು ಹಳಿದಿದ್ದರು.
ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಂದಿಯಾ ಅವರನ್ನು ಒಂದು ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದ, ನಂತರ ಬಿಜೆಪಿ ಸೇರಿದ್ದ ಕೃಷ್ಣಪಾಲ್ ಯಾದವ್ ಅವರು ಅಚ್ಚರಿಯ ರೀತಿಯಲ್ಲಿ ಸೋಲಿಸಿದ್ದರು.
ಲೋಕಸಬೆ ಚುನಾವಣೆಯಲ್ಲಿ ಸೋತ ಮೇಲೆ ಕೇಳುವವರಿಲ್ಲ!
ಲೋಕಸಭೆ ಚುನಾವನೆಯ ನಂತರವಂತೂ ತಮ್ಮನ್ನು ಕೇಳುವವರೇ ಇಲ್ಲ ಎಂಬುದು ಸಿಂದಿಯಾ ಆರೋಪ. ಇಷ್ಟು ದಿನ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಷಯ ಚರ್ಚೆಯಲ್ಲಿತ್ತು. ಈಗ ಆ ಗೊಂದಲ ನೆರವೇರಿ ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಆರಿಸಲಾಗಿದೆ. ಈಗಲಾದರೂ ತಮಗೆ ಸೂಕ್ತ ಸ್ಥಾನ ನೀಡಬೇಕು ಎಂಬುದು ಸಿಂದಿಯಾ ಒತ್ತಾಯ. ಸಿಂದಿಯಾ ಬೆದರಿಕೆಗೆ ಹೆದರಿ ಈಗಾಗಲೇ ಕಮಲ್ ನಾಥ್ ದೆಹಲಿಗೆ ತೆರಳಿದ್ದು, ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಕಮಲ್ ನಾಥ್ ಸಿಂದಿಯಾ ಅವರಿಗೆ ಬಿಟ್ಟುಕೊಡುತ್ತಾರಾ? ಅಥವಾ ಕಾಂಗ್ರೆಸ್ ಸಿಂದಿಯಾ ಅವರನ್ನು ಬಿಟ್ಟುಕೊಡುತ್ತದಾ..? ಕಾಲ ಉತ್ತರಿಸುತ್ತದೆ!