ತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜ್ಯೋತಿರಾದಿತ್ಯ ಸಿಂದಿಯಾ
ಭೋಪಾಲ್, ಸೆಪ್ಟೆಂಬರ್ 25: ಮಧ್ಯಪ್ರದೇಶದಲ್ಲಿ ಮಳೆ ಮತ್ತು ನೆರೆಯಿಂದಾಗಿ ಉಂಟಾದ ಹಾನಿಗೆ ಪರಿಹಾರ ನೀಡುವಲ್ಲಿ ವಿಫಲವಾದ ಮಧ್ಯಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮೂಲಕ ಕಮಲ್ ನಾಥ್ ಸರ್ಕಾರದ ಬಗ್ಗೆ ತಮಗಿರುವ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.
ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರಾ ಜ್ಯೋತಿರಾದಿತ್ಯ ಸಿಂದಿಯಾ?
ಮಧ್ಯಪ್ರದೇಶದಲ್ಲಿ ನೆರೆ ಹಾನಿಯ ಕುರಿತು ಸರ್ಕಾರ ಸಮೀಕ್ಷೆ ನಡೆಸಿದ್ದು, ನೆರೆ ಪರಿಹಾರಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ ಎಂದು ಜ್ಯೋತಿರಾದಿತ್ಯ ಸಿಂದಿಯಾ ಅಸಮಾಧಾನ ಸೂಚಿಸಿದ್ದಾರೆ.
ನಾಯಕರು ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಆ ನಂತರ ಪರಿಹಾರವನ್ನು ನೀಡಬೇಕು ಎಂದು ಸಿಂದಿಯಾ ಹೇಳಿದರು.
ಇದರೊಟ್ಟಿಗೆ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನೂ ಟೀಕಿಸಿದ ಅವರು, ರಾಜ್ಯಕ್ಕೆ ಸೂಕ್ತವಾದ ನೆರೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯದ ಬಿಜೆಪಿ ನಾಯಕರೂ ಕೇಂದ್ರದ ನಾಯಕರಿಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ತಿಳಿಸಲು ವಿಫಲರಾಗಿದ್ದಾರೆ ಎಂದು ಸಿಂದಿಯಾ ಹೇಳಿದ್ದಾರೆ.
ಕಮಲ್ ನಾಥ್ ಗೆ ಎಚ್ಚರಿಕೆ ನೀಡಿದ ಜ್ಯೋತಿರಾದಿತ್ಯ ಸಿಂದಿಯಾ
ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜ್ಯೋತಿರಾದಿತ್ಯ ಸಿಂದಿಯಾ ನಂತರ ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದ್ದರು. "ನನ್ನನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ, ಇಲ್ಲವೆಂದರೆ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ" ಎಂದು ಇತ್ತೀಚೆಗಷ್ಟೇ ಬಹಿರಂಗವಾಗಿ ಸಿಮದಿಯಾ ಹೇಳಿಕೆ ನೀಡಿದ್ದರು.