ಜಗ್ಗಿ ವಾಸುದೇವ್ ಒಬ್ಬ ವಂಚಕ ಬಾಬಾ: ವಾಟರ್ ಮ್ಯಾನ್ ರಾಜೇಂದ್ರ ಸಿಂಗ್
ಭೋಪಾಲ್, ಫೆಬ್ರವರಿ 15: ಜಗ್ಗಿ ವಾಸುದೇವ್ ತನ್ನನ್ನು ತಾನು ಸದ್ಗುರು ಎಂದು ಕರೆದುಕೊಳ್ಳಬಹುದು, ಆದರೆ, ಆತನೊಬ್ಬ ವಂಚಕ ಬಾಬಾ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ವಾಸುದೇವ್ ನಡೆಸುವ ಕಾರ್ಯಕ್ರಮ, ಯೋಜನೆಗಳಿಗೆ ಸರ್ಕಾರದಿಂದ ಎಷ್ಟು ಅನುದಾನ ಸಿಕ್ಕಿದೆ, ಅದರಲ್ಲಿ ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ''ವಾಟರ್ ಮ್ಯಾನ್'' ರಾಜೇಂದ್ರ ಸಿಂಗ್ ಆಗ್ರಹಿಸಿದ್ದಾರೆ.
''ಮಿಸ್ಡ್ ಕಾಲ್ ನೀಡಿ ನದಿ ಜೋಡಣೆಯಾಗಲಿದೆ ಎಂಬುದು ಹಸಿ ಸುಳ್ಳು, ಇದು ಎಂದಾದರೂ ಸಾಧ್ಯವೇ, ನದಿಗಳ ಜೋಡಣೆಯಾಗಿದೆಯೇ" ಎಂದು ಪ್ರಶ್ನಿಸಿದ್ದಾರೆ.
ಪತ್ನಿಯನ್ನು ಕೊಂದಿರುವ ಜಗ್ಗಿ ವಾಸುದೇವ್, ವಿನೋಬಾ ಭಾವೆ ಅವರ ಭೂದಾನ ಯೋಜನಡೆಯಡಿಯಲ್ಲಿ ಕೊಯಮತ್ತೂರಿನ ರೈತರ ಭೂಮಿಯನ್ನು ಕಬಳಿಸಿದ್ದಾನೆ. ಇಂಥ ಬಾಬಾಗಳಿಂದ ನದಿ ನೀರು ಜೋಡಣೆಯೂ ಸಾಧ್ಯವಿಲ್ಲ, ನದಿ ಸಮಸ್ಯೆ ಬಗೆಹರಿಸಲು ಪರಿಹಾರವೂ ಸಿಗುವುದಿಲ್ಲ ಎಂದಿದ್ದಾರೆ.
ಇದೇ ರೀತಿ ಮಧ್ಯಪ್ರದೇಶದ ಕಂಪ್ಯೂಟರ್ ಬಾಬಾ ವಿರುದ್ಧ ತಿರುಗಿಬಿದ್ದ ರಾಜೇಂದ್ರ ಸಿಂಗ್, ನದಿಗಳನ್ನು ಆ ಪ್ರದೇಶ ಜನರೇ ರಕ್ಷಿಸಬೇಕು ಹೊರತು ಹೊರಗಿನವರು ಬಂದವರು ಏನು ಮಾಡಲಾಗದು. ಅಧಿಕಾರ, ಹುದ್ದೆಗೆ ಆಸೆಪಡುವವರಿಂದ ಏನು ಸಾಧ್ಯವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ಈಶಾ ಫೌಂಡೇಷನ್ ವಕ್ತಾರರು, ರಾಜೇಂದ್ರ ಸಿಂಗ್ ಅವರ ಆರೋಪ, ವೈಯಕ್ತಿಕ ದಾಳಿಯಿಂದ ಆಘಾತವಾಗಿದೆ. ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಫೌಂಡೇಷನ್ ಯಾವುದೇ ರೀತಿ ಜನದ್ರೋಹಿ ಕೆಲಸ ಮಾಡಿಲ್ಲ ಎಂದಿದ್ದಾರೆ.
ಕಾವೇರಿ ಕಾಲಿಂಗ್ ಗೂ ನದಿ ಜೋಡಣೆಗೂ ಸಂಬಂಧವೇ ಇಲ್ಲ, ಸರ್ಕಾರದಿಂದ ಯಾವುದೇ ಅನುದಾನವನ್ನು ಫೌಂಡೇಷನ್ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.