ತಲ್ಲಣ ಮೂಡಿಸಿದ ಪತ್ರ: ಸೋನಿಯಾ ಗಾಂಧಿಗೆ ಹೊಸ ತಲೆನೋವು ಶುರು
Recommended Video
ಮಧ್ಯಪ್ರದೇಶದಲ್ಲಿ ಬಿಜೆಪಿ ಜೊತೆ 'ನೆಕ್ ಟು ನೆಕ್ ಫೈಟ್' ನಂತರ, ಅಧಿಕಾರಕ್ಕೇರಿದ್ದ ಕಾಂಗ್ರೆಸ್ಸಿಗೆ ಒಂದಲ್ಲಾ ಒಂದು ತಲೆನೋವು ಕಮಲ್ ನಾಥ್ ಅಧಿಕಾರ ಸ್ವೀಕರಿಸಿದ ದಿನದಿಂದ ಎದುರಾಗುತ್ತಲೇ ಇದೆ.
ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ರಾಜ್ಯದ ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಕೋಪಿಸಿಗೊಂಡಿರುವ ನಡುವೆ, ರಾಜ್ಯದ ಸಚಿವರೊಬ್ಬರು, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರ, ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.
ಪಕ್ಷದ ಹಿರಿಯ ಮುಖಂಡರೊಬ್ಬರೇ ಸರಕಾರ ಉರುಳಿಸಲು ನೋಡುತ್ತಿದ್ದಾರೆ ಎಂದು ಆ ಪತ್ರದಲ್ಲಿ ಬರೆದಿರುವುದು, ರಾಜ್ಯ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾರಿ ಹೇಳುವಂತಿದೆ.
ತಂದೆಗಾದ ಅವಮಾನ ತನಗೂ: ಕಾಂಗ್ರೆಸ್ ಮೇಲೆ ಜ್ಯೋತಿರಾದಿತ್ಯ ಸಿಂಧಿಯಾ ಭಾರೀ ಸಿಟ್ಟಿಗೆ ಇದಾ ಕಾರಣ?
ಬಿಜೆಪಿ, ತನ್ನ ಸರಕಾರದಲ್ಲಿ ಅನಿಶ್ಚಿತತೆ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಸಿಎಂ ಕಮಲ್ ನಾಥ್ ಹೇಳುತ್ತಿದ್ದರೆ, ಸಚಿವ ಸಂಪುಟದ ಸದಸ್ಯರೊಬ್ಬರು, "ಕಾಂಗ್ರೆಸ್ಸಿನ ಹಿರಿಯ ತಲೆಗಳೇ, ಸರಕಾರಕ್ಕೆ ಕಂಟಕವಾಗುತ್ತಿದ್ದಾರೆ" ಎಂದು ದೂರುತ್ತಿದ್ದಾರೆ. ಸರಕಾರ ಉರುಳಿಸಲು 'ಸಂಚು' ಹಾಕುತ್ತಿರುವ, ಆ ಹಿರಿಯ ಮುಖಂಡ ಯಾರು?
ರಾಜ್ಯದ ಅರಣ್ಯ ಸಚಿವ ಉಮಂಗ್ ಸಿಂಘರ್
ರಾಜ್ಯದ ಅರಣ್ಯ ಸಚಿವ ಉಮಂಗ್ ಸಿಂಘರ್ ಸುದೀರ್ಘ ಪತ್ರವನ್ನು ಸೋನಿಯಾಗೆ ಬರೆದಿದ್ದಾರೆ. ಅದರಲ್ಲಿ ಪಕ್ಷದ ಹಿರಿಯ ಮುಖಂಡ ಮತ್ತು ಮಧ್ಯಪ್ರದೇಶ ಮೂಲದ ದಿಗ್ವಿಜಯ್ ಸಿಂಗ್, ಕಮಲ್ ನಾಥ್ ಸರಕಾರದ ಮೇಲೆ ಸವಾರಿ ಮಾಡಲು ಹೊರಟಿದ್ದಾರೆಂದು ಉದಾಹರಣೆ ಸಮೇತ ವಿವರಿಸಿದ್ದಾರೆ.
ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ದಿಗ್ವಿಜಯ್ ಸಿಂಗ್ ಅನಾವಶ್ಯಕವಾಗಿ ಮೂರು ತೂರಿಸುತ್ತಿದ್ದಾರೆ
"ವರ್ಗಾವಣೆ, ಟೆಂಡರ್ ಮುಂತಾದ ವಿಚಾರಗಳಲ್ಲಿ ದಿಗ್ವಿಜಯ್ ಸಿಂಗ್ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ. ಜೊತೆಗೆ, ಪ್ರತೀದಿನ ಕಮಲ್ ನಾಥ್ ಸರಕಾರಕ್ಕೆ ಪತ್ರ ಬರೆದು, ತಾನು ಶಿಫಾರಸು ಮಾಡಿದ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ಆ ಪತ್ರಗಳನ್ನು ವೈರಲ್ ಮಾಡುವ ಮೂಲಕ, ಪಕ್ಷಕ್ಕೆ ಮುಜುಗರವನ್ನು ತಂದೊಡ್ಡುತ್ತಿದ್ದಾರೆಂದು" ಸಿಂಘರ್, ಸೋನಿಯಾಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಜ್ಯೋತಿರಾದಿತ್ಯ ಸಿಂಧಿಯಾ ಕಣ್ಣು
ಒಂದು ಕಡೆ, ಜ್ಯೋತಿರಾದಿತ್ಯ ಸಿಂಧಿಯಾ, ರಾಜ್ಯಾಧ್ಯಕ್ಷ ಹುದ್ದೆ ಸಿಗದೇ ಇದ್ದಲ್ಲಿ, ತನ್ನ ದಾರಿಯನ್ನು ತಾನು ನೋಡಿಕೊಳ್ಳುತ್ತೇನೆಂದು ಹೇಳಿರುವುದು, ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗುತ್ತಿದೆ. ರಾಹುಲ್ ಗಾಂಧಿ ಆಪ್ತರಾಗಿರುವ ಸಿಂಧಿಯಾ, 'ತಮ್ಮನ್ನು ಕಮಲ್ ನಾಥ್ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿದ್ದಾರೆ' ಎಂದು ಬೇಸರಿಸಿಕೊಂಡಿದ್ದಾರೆ.
ಮಾಧವರಾವ್ ಸಿಂಧಿಯಾಗೆ ಕಾಂಗ್ರೆಸ್ ಅವಮಾನ
ಸುಮಾರು ಮೂರು ದಶಕಗಳ ಹಿಂದೆ, ಮಧ್ಯಪ್ರದೇಶದಲ್ಲಿ ಅರ್ಜುನ್ ಸಿಂಗ್ ಮತ್ತು ಮಾಧವರಾವ್ ಸಿಂಧಿಯಾ ನಡುವೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಪಾರುಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸಿಂಧಿಯಾ ಬದಲು ಅರ್ಜುನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಅದಾದ ನಂತರ, ಅರ್ಜುನ್ ಸಿಂಗ್ ರಾಜೀನಾಮೆ ನೀಡಿದಾಗಲೂ, ಮೋತಿಲಾಲ್ ವೋರಾ ಅವರನ್ನು ಸಿಎಂ ಅನ್ನಾಗಿ ಮಾಡಿ ಮಾಧವರಾವ್ ಸಿಂಧಿಯಾಗೆ ಕಾಂಗ್ರೆಸ್ ಅವಮಾನ ಮಾಡಿತ್ತು. ಈ ಸಿಟ್ಟು, ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಇನ್ನೂ ಕಾಡುತ್ತಿದೆ.
ಸೋನಿಯಾ ಗಾಂಧಿ ಹೇಗೆ ನಿಭಾಯಿಸಲಿದ್ದಾರೆ
ಈಗ, ದಿಗ್ವಿಜಯ್ ಸಿಂಗ್ ವಿರುದ್ದ ಕೇಳಿ ಬರುತ್ತಿರುವ ದೂರು, ಪಕ್ಷಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಮಧ್ಯಪ್ರದೇಶ ಸರಕಾರ ಉರುಳಿಸಲು 'ಸಂಚು' ಹಾಕುತ್ತಿರುವ ತಮ್ಮದೇ ಪಕ್ಷದ ಹಿರಿಯ ಮುಖಂಡರನ್ನು ಸೋನಿಯಾ ಗಾಂಧಿ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದರ ಮೇಲೆ, ಕಮಲ್ ನಾಥ್ ಸರಕಾರದ ಭವಿಷ್ಯ ನಿಂತಿದೆ.