ರಾಹುಲ್ ಗಾಂಧಿಗೆ ತಿರುಗೇಟು; ಇಂದಿರಾ ವಿರುದ್ಧ ಮೋದಿ ಟೀಕಾಸ್ತ್ರ
ಭೋಪಾಲ್ (ಮಧ್ಯಪ್ರದೇಶ), ನವೆಂಬರ್ 25: ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಪ್ರಸಿದ್ಧ ಘೋಷಣೆ 'ಗರೀಬಿ ಹಠಾವೋ' ಎಂಬುದು ಸುಳ್ಳು ಭರವಸೆ ಮತ್ತು ಬ್ಯಾಂಕ್ ಗಳ ರಾಷ್ಟ್ರೀಕರಣ ಎಂಬುದು ಬಡವರ ಹೆಸರಲ್ಲಿ ಮಾಡಿದ 'ವಂಚನೆ' ಎಂದು ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿ ಶನಿವಾರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಆರೋಪ ಮಾಡಿದರು.
ಈ ದೇಶದಲ್ಲಿ ಅಧಿಕಾರ ನಡೆಸಲು ಕಾಂಗ್ರೆಸ್ ಗೆ ಸಿಕ್ಕ ಸಮಯದ ಅರ್ಧದಷ್ಟು ನನಗೆ ಸಿಕ್ಕರೂ ಈ ದೇಶದಲ್ಲಿ ಬದಲಾವಣೆಯನ್ನು ತರ್ತೀನಿ ಎಂದಿದ್ದು, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಉತ್ತರ ನೀಡಿದ್ದಾರೆ.
ನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿ
ನೆಹರೂ-ಗಾಂಧಿ ಕುಟುಂಬದ ನಾಲ್ಕು ತಲೆಮಾರು ಈ ದೇಶವನ್ನು ಆಳಿದೆ. ಆದರೆ ಜನರನ್ನು ಮೋಸ ಮಾಡುವ ಯಾವೊಂದು ಅವಕಾಶವನ್ನೂ ಬಿಟ್ಟಿಲ್ಲ ಎಂದಿದ್ದಾರೆ. "ರಾಹುಲ್ ಗಾಂಧಿ ಅವರ ಅಜ್ಜಿ ಶ್ರೀಮತಿ ಇಂದಿರಾಗಾಂಧಿ ಅವರು ನಲವತ್ತು ವರ್ಷಗಳ ಹಿಂದೆ ಬಡತನ ನಿರ್ಮೂಲನೆ ಘೋಷಣೆ ಮಾಡಿರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಿ, ಬಡತನ ನಿರ್ಮೂಲನವಾಯಿತಾ? ಇದು ಸುಳ್ಳು ಭರವಸೆ ಅಲ್ಲವಾ? ಆ ಭರವಸೆಗಳನ್ನು ನೀಡಿದವರು ಸುಳ್ಳುಗಾರರು ಅಲ್ಲವಾ? ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.
ತಮ್ಮ ಸರಕಾರವು ಬಡವರಿಗೆ ಬಾಗಿಲು ತೆರೆಯಲಿದೆ ಎಂದು ಹೇಳಿ, ಇಂದಿರಾಗಾಂಧಿ ಅವರು ರಾತ್ರೋರಾತ್ರಿ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದರು. ಹಾಗೆ ರಾಷ್ಟ್ರೀಕರಣ ಮಾಡಿದರೂ ದೇಶ ಅರ್ಧದಷ್ಟು ಜನ 2014ರ ತನಕ ಬ್ಯಾಂಕ್ ನ ಬಾಗಿಲು ಕೂಡ ನೋಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
50 ಸಂಚಿಕೆ ಪೂರೈಸಿದ 'ಮನ್ ಕೀ ಬಾತ್'; ರೇಡಿಯೋ ಕಾರ್ಯಕ್ರಮದ ಗುಟ್ಟು ತೆರೆದಿಟ್ಟ ಮೋದಿ
ರಾಷ್ಟ್ರೀಕರಣ ಎಂಬುದು ಬಡವರ ಹೆಸರಲ್ಲಿ ಮಾಡಿದ ದೋಖಾ ಅಲ್ಲವಾ? ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಬಂದ ಮೇಲೆ ಬಡವರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶ ಸಿಕ್ಕಿತು ಎಂದ ಅವರು, ಇದು ನಿಜ. ಐದಾರು ದಶಕಗಳಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಲು ನಮಗೆ ಸಮಯ ಬೇಕು. ಕಾಂಗ್ರೆಸ್ ಗೆ ಅಧಿಕಾರ ನಡೆಸಲು ಸಿಕ್ಕ ಅರ್ಧದಷ್ಟು ಸಮಯ ಸಿಕ್ಕರೂ ದೊಡ್ಡ ಬದಲಾವಣೆ ತರುತ್ತೇವೆ ಎಂದಿದ್ದಾರೆ.
1971ರ ಸಾರ್ವಜನಿಕ ಚುನಾವಣೆ ವೇಳೆ ಗರೀಬಿ ಹಠಾವೋ, ದೇಶ್ ಬಚಾವೋ (ಬಡತನ ತೊಲಗಿಸಿ, ದೇಶ ಉಳಿಸಿ) ಎಂಬ ಘೋಷಣೆ ಮಾಡಿದ್ದರು. ಅದಕ್ಕೂ ಮುನ್ನ 1969ರಲ್ಲಿ ಹದಿನಾಲ್ಕು ವಾಣಿಜ್ಯ ಬ್ಯಾಂಕ್ ಗಳನ್ನು ಸರಕಾರ ರಾಷ್ಟ್ರೀಕರಣಗೊಳಿಸಿತ್ತು.