'ಭಾರತ ಹಿಂದೂಗಳಿಗೆ ಸೇರಿದ್ದು' ನೂಪುರ್ ಶರ್ಮಾ ಬೆಂಬಲಕ್ಕೆ ಸಾಧ್ವಿ ಪ್ರಜ್ಞಾ
ಭೋಪಾಲ್ ಜೂನ್ 10: 'ಭಾರತ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಇಲ್ಲಿ ಉಳಿಯುತ್ತದೆ. ಇದನ್ನು ನಾವು ಪೂರೈಸುತ್ತೇವೆ' ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಪಕ್ಷದಿಂದ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, 'ಸತ್ಯ ಹೇಳುವುದು ಬಂಡಾಯವಾದರೆ, ಬಂಡುಕೋರರು ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಿ ಎನ್ನುತ್ತಾರೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. ಟ್ವೀಟ್ ನಂತರ ಭೋಪಾಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಧ್ವಿ ಪ್ರಜ್ಞಾ, "ಈ ನಂಬಿಕೆಯಿಲ್ಲದವರು ಯಾವಾಗಲೂ ಇದನ್ನೇ ಮಾಡಿದ್ದಾರೆ. ಅವರಿಗೆ ಕಮ್ಯುನಿಸ್ಟ್ ಇತಿಹಾಸವಿದೆ. ಕಮಲೇಶ್ ತಿವಾರಿ ಏನೋ ಹೇಳಿದರಂತೆ, ಅವರನ್ನು ಕೊಂದರು. ಬೇರೆಯವರು (ನೂಪುರ್ ಶರ್ಮಾ) ಏನೋ ಹೇಳಿದರು. ಈಗ ಅವರಿಗೆ ಬೆದರಿಕೆ ಹಾಕಲಾಗಿದೆ. ಭಾರತ ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಇಲ್ಲಿ ಉಳಿಯುತ್ತದೆ'' ಎಂದು ಸಾಧ್ವಿ ಹೇಳಿದ್ದಾರೆ.
ಪ್ರಚೋದನಕಾರಿ ಹೇಳಿಕೆ: ಓವೈಸಿ, ಯತಿ ನರಸಿಂಹಾನಂದ ವಿರುದ್ಧ ಎಫ್ಐಆರ್
ಸಾಧ್ವಿ ಪ್ರಜ್ಞಾ ಠಾಕೂರ್ ಟ್ವೀಟ್
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಸಾಧ್ವಿ ಪ್ರಜ್ಞಾ, ಸತ್ಯ ಹೇಳುವುದು ಬಂಡಾಯವಾದರೆ ನಾವೂ ಬಂಡಾಯವೆಂಬುದನ್ನು ಅರ್ಥಮಾಡಿಕೊಳ್ಳಿ. 'ಜೈ ಸನಾತನ ಜೈ ಹಿಂದುತ್ವ' ಎಂದ ಹಿಂದೂ ಮಹಾಸಭಾದ ಅಧ್ಯಕ್ಷ ಕಮಲೇಶ್ ತಿವಾರಿ ಅವರನ್ನು ಕೊಲ್ಲಲಾಯಿತು ಎಂದು ಸಾಧ್ವಿ ಪ್ರಜ್ಞಾ ಠಾಕೂರ್ ಟ್ವೀಟ್ ಮಾಡಿದ್ದಾರೆ.
|
ಜ್ಞಾನವಾಪಿ ಬಗ್ಗೆ ಕೆರಳಿದ ಸಾಧ್ವಿ
"ನಾನು ಬಹುಶಃ ಏನೇ ಆದರೂ ಸತ್ಯವನ್ನು ಮಾತನಾಡಲು ಕುಖ್ಯಾತಿ ಪಡೆದಿದ್ದೇನೆ. ಅಲ್ಲಿ (ಜ್ಞಾನವಾಪಿ) ಶಿವಾಲಯವಿತ್ತು, ಇದೆ ಮತ್ತು ಇರುತ್ತದೆ ಎಂಬುದಂತೂ ಸತ್ಯ. ಇದನ್ನು ಕಾರಂಜಿ ಎಂದು ಕರೆಯುವುದು ನಮ್ಮ ಹಿಂದೂ ಸಂಪ್ರದಾಯದ ಮೇಲೆ ಆಕ್ರಮಣವಾಗಿದೆ. ನಮ್ಮ ಹಿಂದೂ ದೇವತೆ ಸನಾತನದ ಮೂಲವಾಗಿದೆ. ಆದ್ದರಿಂದ ನಾವು ವಾಸ್ತವವನ್ನು ಹೇಳುತ್ತೇವೆ. ಇಂದಿನಿಂದಲ್ಲ ಅದಕ್ಕೆ ಸಂಪೂರ್ಣ ಇತಿಹಾಸವಿದೆ. ಇದು ಭಾರತ. ಇದು ಹಿಂದೂಗಳಿಗೆ ಸೇರಿದ್ದು. ಇಲ್ಲಿ ಸನಾತನವು ಜೀವಂತವಾಗಿರುತ್ತದೆ ಮತ್ತು ಸನಾತನವನ್ನು ಜೀವಂತವಾಗಿಡುವುದು ನಮ್ಮ ಜವಾಬ್ದಾರಿಯಾಗಿದೆ. ನೀವು ಎಷ್ಟೇ ನಿಂದನೆ ಮಾಡಿದರೂ ನಾವು ಅದನ್ನು ಪೂರೈಸುತ್ತೇವೆ'' ಎಂದಿದ್ದಾರೆ
ದೇಶದಾದ್ಯಂತ ಪ್ರತಿಭಟನೆ
ಟಿವಿ ಸಂದರ್ಶನವೊಂದರಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಮಸೀದಿಗಳ ಮುಂದೆ ಮುಸ್ಲೀಂ ಸಮುದಾಯದವರು ಪ್ರತಿಭಟನೆಯನ್ನು ಇಂದು ಕೈಗೊಂಡಿದ್ದಾರೆ. ಜಮ್ಮು, ದೆಹಲಿ, ಲಕ್ನೋ, ಬೆಳಗಾವಿ, ಸಹರನ್ಪೂರ್, ಮೊರಾದಾಬಾದ್ ಸ್ಥಳಗಳಲ್ಲಿ ಇಂದು ಪ್ರತಿಭಟನೆ ಕಾವು ಹೆಚ್ಚಾಗಿದೆ. ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಕೃತ್ಯ ಎಸಗಿದವರ ಪತ್ತೆಗೆ ಪೊಲೀಸ್ ತನಿಖೆ
ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಬಿಜೆಪಿಯ ನೂಪೂರ್ ಶರ್ಮಾ ಪ್ರತಿಕೃತಿಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ರೀತಿಯಲ್ಲಿ ನೇತುಹಾಕಿ ಪ್ರತಿಭಟಿಸಲಾಗಿದೆ. ಪ್ರತಿಕೃತಿಗೆ ನೂಪೂರ್ ಶರ್ಮಾರ ಫೋಟೋಗಳನ್ನು ಅಂಟಿಸಲಾಗಿದೆ.ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಗುರುವಾರ ರಾತ್ರಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ನೇತು ಹಾಕಲಾಗಿದೆ. ಇದನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಕೆಳಗಿಳಿಸಿದ್ದಾರೆ. ಜೊತೆಗೆ ಈ ಕೃತ್ಯವನ್ನು ಎಸಗಿರುವವರನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದು, ತನಿಖೆ ಮುಂದುವರಿಸಿದ್ದಾರೆ.