ಕೊರೊನಾ ವಾರಿಯರ್ಸ್ ಸೋಗಿನಲ್ಲಿ ಬಂದ ತೆರಿಗೆ ವಾರಿಯರ್ಸ್!: ಕೋಟಿಗಟ್ಟಲೆ ಮೌಲ್ಯದ ಸಂಪತ್ತು ವಶ
ಭೋಪಾಲ್, ಆಗಸ್ಟ್ 21: ಮಧ್ಯಪ್ರದೇಶದ ಭೋಪಾಲ್ನಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಕೊರೊನಾ ವೈರಸ್ ವಾರಿಯರ್ಸ್ ಸೋಗಿನಲ್ಲಿ ತೆರಳಿದ ಸುಮಾರು 150 ಮಂದಿ ಆದಾಯ ತೆರಿಗೆ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ.
ಗುರುವಾರ ಇನ್ನೂ ಸೂರ್ಯೋದಯವಾಗುವ ಮುನ್ನವೇ ಬೆಳಿಗ್ಗೆ 5.30ರ ವೇಳೆ ಭೋಪಾಲ್ನ ಸುಮಾರು 20 ಬೇರೆ ಬೇರೆ ಸ್ಥಳಗಳಲ್ಲಿ ಏಕಕಾಲಕ್ಕೆ ಸಂಯೋಜಿತ ದಾಳಿ ನಡೆಸಿದ್ದಾರೆ. ಕೊರೊನಾ ವಾರಿಯರ್ಸ್ ಬಂದಿದ್ದಾರೆ ಎಂದುಕೊಂಡಿದ್ದ ತೆರಿಗೆ ಕಳ್ಳರ ನಿದ್ದೆಯ ಮಂಪರು, ಆರ್ಥಿಕ ವಾರಿಯರ್ಗಳನ್ನು ಕಂಡು ಹಾರಿಹೋಗಿದೆ.
ಐಟಿ ದಾಳಿ: ದೆಹಲಿಯ ಚೀನಿಯರ ಬಳಿ 1000 ಕೋಟಿ ರು ವಶ
ಆದಾಯ ತೆರಿಗೆ ಅಧಿಕಾರಿಗಳು ಮತ್ತು ವಿಶೇಷ ಸಶಸ್ತ್ರ ಪಡೆಗಳ (ಎಸ್ಎಎಫ್) ಪೊಲೀಸರ ಹಲವು ತಂಡಗಳು ಎರಡು ಪ್ರಮುಖ ಉದ್ಯಮ ಸಮೂಹ ಹಾಗೂ ಅವರ ಸಹವರ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮುಂದೆ ಓದಿ.
ಮಧ್ಯಪ್ರದೇಶ ಆರೋಗ್ಯ ಇಲಾಖೆ!
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಎಸ್ಎಎಫ್ ಪೊಲೀಸರು ಈ ದಾಳಿಗೆ ಮುನ್ನ ಪೂರ್ವ ತಯಾರಿ ಮಾಡಿಕೊಂಡಿದ್ದು, ಪ್ರತಿ ಸ್ಥಳಗಳಿಗೂ ತೆರಳುವ ವಾಹನಗಳ ಮೇಲೆ 'ಮಧ್ಯಪ್ರದೇಶ ಸರ್ಕಾರದ ಆರೋಗ್ಯ ಇಲಾಖೆ ಕೋವಿಡ್-19 ನಿಮ್ಮನ್ನು ಸ್ವಾಗತಿಸುತ್ತದೆ' ಎಂಬ ಬರಹವುಳ್ಳ ಸ್ಟಿಕ್ಕರ್ಗಳನ್ನು ಅಂಟಿಸಲಾಗಿತ್ತು.
ದಾಳಿ ನಡೆಸಿದ ತಂಡಗಳ ಮೂಲಗಳ ಮಾಹಿತಿ ಪ್ರಕಾರ, ಕೆಲವು ಸ್ಥಳಗಳಲ್ಲಿ ಇನ್ನೂ ಪರಿಶೀಲನೆ ಮುಂದುವರಿಸಲಾಗಿದೆ. ಅಂದಾಜು 100 ಸ್ಥಿರ ಆಸ್ತಿಗಳ ಮಾಹಿತಿಗಳು ಹಾಗೂ ದಾಖಲೆಯ ಕಡತಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎರಡು ಕ್ರಿಕೆಟ್ ಮೈದಾನಗಳೂ ಇವೆ
ಭೋಪಾಲ್ ಹಾಗೂ ನೆರೆಯ ಸೆಹೋರ್ ಜಿಲ್ಲೆಯಲ್ಲಿ ಈ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಎರಡು ಕ್ರಿಕೆಟ್ ಮೈದಾನಗಳು ಸೇರಿದಂತೆ ನೂರಾರು ಕೋಟಿ ರೂ ಮೌಲ್ಯದ ಸಂಪತ್ತಿನ ಮೌಲ್ಯಮಾಪನ ನಡೆಸಲಾಗಿದೆ. 1 ಕೋಟಿ ರೂ ಮೌಲ್ಯದ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಒಂದು ಲಕ್ಷ ರೂಪಾಯಿಗೂ ಹೆಚ್ಚು ಚಿನ್ನ ಖರೀದಿಸಿದರೆ ನೀವು ಐಟಿ ವ್ಯಾಪ್ತಿಗೆ..!
ಸಚಿವರಿಗೆ ಆಪ್ತರಾದ ಉದ್ಯಮಿ
ದಾಳಿ ಮಾಡಲಾದ ಎರಡು ಪ್ರಮುಖ ಉದ್ಯಮ ಸಮೂಹಗಳ ಪೈಕಿ ಒಂದು ಉದ್ಯಮ ಫೈಥ್ ಗ್ರೂಪ್, ಬಿಜೆಪಿಯ ಪ್ರಭಾವಿ ಮುಖಂಡ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ಸಂಪುಟ ಸಚಿವರೊಬ್ಬರಿಗೆ ಆಪ್ತರಾಗಿರುವ ರಾಘವೇಂದ್ರ ಸಿಂಗ್ ತೋಮರ್ ಅವರಿಗೆ ಸಂಬಂಧಿಸಿದೆ. ಗ್ವಾಲಿಯರ್-ಚಂಬಲ್ ಪ್ರದೇಶದ ಈ ಸಚಿವ, ಕಮಲ್ ನಾಥ್ ನೇತೃತ್ವದ 15 ತಿಂಗಳ ಕಾಂಗ್ರೆಸ್ ಸರ್ಕಾರವು ಮಾರ್ಚ್ನಲ್ಲಿ ಪತನಗೊಳ್ಳಲು ಪ್ರಮುಖ ಪಾತ್ರ ವಹಿಸಿದ್ದರು.
ಬಿಜೆಪಿಗೆ ಸಂಬಂಧ ಸ್ಪಷ್ಟಪಡಿಸಲಿ
ಈ ದಾಳಿಯ ಕುರಿತಾದ ಸುದ್ದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರ ನರೇಂದ್ರ ಸಲುಜಾ, ಇದು ಸಂಪುಟದ ಸಚಿವರೊಬ್ಬರ ಏಳಿಗೆಯನ್ನು ತಡೆಯುವ ಹತ್ತಿಕ್ಕುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಇದೇ ಸಚಿವರು ಕೆಲವು ದಿನಗಳ ಹಿಂದಷ್ಟೇ ರಾಘವೇಂದ್ರ ಸಿಂಗ್ ತೋಮರ್ ತಮ್ಮ ಕಿರಿಯ ಸಹೋದರನಂತೆ ಎಂದು ಹೇಳಿಕೊಂಡಿದ್ದರು. ಈಗ ತೋಮರ್ ಜತೆಗೆ ತಮ್ಮ ಸಚಿವರ ಸಂಬಂಧ ಏನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದಾಯ ತೆರಿಗೆದಾರರಿಗೆ ಶುಭಸುದ್ದಿ: ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ಎರಡು ತಿಂಗಳು ವಿಸ್ತರಣೆ