ಮಧ್ಯಪ್ರದೇಶದಲ್ಲಿ ಉದ್ಘಾಟನೆಗೂ ಮೊದಲೇ ಹೊಸ ಸೇತುವೆ ಕುಸಿತ!
ಭೋಪಾಲ್, ಆಗಸ್ಟ್.30: ಮಧ್ಯಪ್ರದೇಶದಲ್ಲಿ ವರುಣನ ಅಬ್ಬರಕ್ಕೆ ಹೊಸದಾಗಿ ನಿರ್ಮಿಸಿದ 150 ಮೀಟರ್ ಉದ್ದದ ಸೇತುವೆಯು ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದಿದೆ. ಭೂಪಾಲ್ ನಿಂದ 350 ಕಿಲೋ ಮೀಟರ್ ದೂರದಲ್ಲಿರುವ ಸಿಯೋನಿ ಜಿಲ್ಲೆಯಲ್ಲಿ ವೈನ್ ಗಂಗಾ ನದಿಗೆ ಕಟ್ಟಿದ ಸೇತುವೆ ಮಳೆಗೆ ಕುಸಿದು ಬಿದ್ದಿದೆ.
ಸೇತುವೆ ನಿರ್ಮಾಣಕ್ಕೆ ನಿಗದಿಗೊಳಿಸಿದ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಯೊಂದೇ ಬಾಕಿ ಉಳಿದಿತ್ತು. ಹೊಸ ಸೇತುವೆ ಉದ್ಘಾಟನೆಗೂ ಮುನ್ನ ಗ್ರಾಮಸ್ಥರು ಈ ಸೇತುವೆಯನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಒಡಿಶಾ: ಭಾರಿ ಮಳೆ, ಪ್ರವಾಹಕ್ಕೆ ಮತ್ತೆ ಐದು ಮಂದಿ ಬಲಿ
ಕಳೆದ 2018 ಸಪ್ಟೆಂಬರ್.01ರಂದು ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ನಿರ್ಮಾಣ ಯೋಜನೆಯಡಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. 3.7 ಕೋಟಿ ರೂಪಾಯಿ ಮೌಲ್ಯದ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಆಗಸ್ಟ್.30, 2020ರ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಆದರೆ, ಈ ದಿನಾಂಕಕ್ಕೂ ಮೊದಲೇ ಸೇತುವೆ ನಿರ್ಮಾಣ ಮುಕ್ತಾಯಗೊಂಡಿದ್ದೂ ಅಲ್ಲದೇ, ಇದೀಗ ಕುಸಿದು ಬಿದ್ದಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಡಿಸಿ ಆದೇಶ:
ಹೊಸ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಾಹುಲ್ ಹರಿದಾಸ್ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಿ ಕಾನೂನು ಪ್ರಕಾರ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ನಿರ್ಮಾಣವಾಗುತ್ತಿರುವ ಹೊಸ ಸೇತುವೆಯು ಶಾಸಕ ರಾಕೇಶ್ ಪಾಲ್ ಸಿಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಯೋನಿ ಜಿಲ್ಲೆಯ ಸುನ್ವಾರ್ ಮತ್ತು ಭೀಮ್ ಘರ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು.
ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ನರ್ಮದಾ ನದಿಯು ಉಕ್ಕಿ ಹರಿಯುತ್ತಿದೆ. ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಪ್ರದೇಶಗಳಲ್ಲಿ ಗ್ರಾಮಸ್ಥರು ಸಿಲುಕಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.