Breaking: ಮಧ್ಯಪ್ರದೇಶ, ಸಿಡಿಲು ಬಡಿದು 9 ಮಂದಿ ಸಾವು
ಭೋಪಾಲ್, ಆಗಸ್ಟ್ 07: ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ವಿದಿಶಾ, ಸತ್ನಾ ಮತ್ತು ಗುನಾ ಜಿಲ್ಲೆಗಳಲ್ಲಿ ಸಿಡಿಲು ಬಡಿದು 9 ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರವೂ ಕೂಡ ರಾಜ್ಯದ ವಿವಿಧ ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
Breaking; ಕರ್ನಾಟಕದಲ್ಲಿ 3 ದಿನ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ವಿದಿಶಾ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿಮೀ ದೂರದಲ್ಲಿರುವ ಗಂಜ್ಬಸೋಡಾ ತಾಲೂಕಿನ ಅಗಸೋಡ್ ಗ್ರಾಮದಲ್ಲಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಆಶ್ರಯಕ್ಕಾಗಿ ಮರದ ಕೆಳಗೆ ನಿಂತಿದ್ದ ನಾಲ್ವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕುನ್ವರ್ ಸಿಂಗ್ ಮುಕಾತಿ ತಿಳಿಸಿದ್ದಾರೆ.
ಮೃತರೆಲ್ಲರೂ 30 ರಿಂದ 40 ವರ್ಷದೊಳಗಿನವರಾಗಿದ್ದಾರೆ. ಮೃತರನ್ನು ಗಾಲು ಮಾಳವೀಯ, ರಾಮು, ಗುಡ್ಡ ಮತ್ತು ಪ್ರಭು ಲಾಲ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸತ್ನಾದಲ್ಲಿ, ಪೋಡಿ-ಪಟೌರಾ ಮತ್ತು ಜತ್ವಾರಾ ಪ್ರದೇಶಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ಇಬ್ಬರು ಅಪ್ರಾಪ್ತ ಬಾಲಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಂಜನಾ (34), ಚಂದ್ರು (65), ರಾಜ್ಕುಮಾರ್ (65) ಮತ್ತು ರಾಮ್ಕುಮಾರ್ ಯಾದವ್ (43) ಎಂದು ಗುರುತಿಸಲಾಗಿದೆ.
ಗಾಯಗೊಂಡ 12 ಮತ್ತು 16 ವರ್ಷದ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುನಾ ಜಿಲ್ಲೆಯ ಭೋರಾ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಮಹಿಳೆ ಮನು ಅಹಿರ್ವಾರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಇನ್ನು, ಸೋಮವಾರದಿಂದ ಮೂರು ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಒತ್ತಡ ಮಧ್ಯಪ್ರದೇಶದಲ್ಲಿ ಭಾರೀ ಮಳೆಗೆ ಕಾರಣವಾಗುತ್ತಿದೆ ಎಂದು ಐಎಂಡಿ ಭೋಪಾಲ್ ಕಚೇರಿಯ ಹಿರಿಯ ಹವಾಮಾನ ತಜ್ಞ ವೇದ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.