'ಮಸೂದ್ ಅಜರ್ ಗೆ ಸಾಧ್ವಿ ಶಾಪ ನೀಡಿದ್ದರೆ ಸರ್ಜಿಕಲ್ ಸ್ಟ್ರೈಕ್ ಬೇಕಿರಲಿಲ್ಲ'
ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 28: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಇ-ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಸಾಧ್ವಿ ಪ್ರಗ್ಯಾ ಸಿಂಗ್ ಶಪಿಸಿದ್ದರೆ ಆಗುತ್ತಿತ್ತು. ಸರ್ಜಿಕಲ್ ಸ್ಟ್ರೈಕ್ಸ್ ಮಾಡುವ ಅಗತ್ಯ ಇರಲಿಲ್ಲ ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ರನ್ನು ಪ್ರತಿಸ್ಪರ್ಧಿ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.
ಭೋಪಾಲ್ ನಲ್ಲಿ ಚುನಾವಣೆ ಭಾಷಣ ಮಾಡಿದ ಅವರು, ಹೇಮಂತ್ ಕರ್ಕರೆಯನ್ನು ಶಪಿಸಿದ್ದಾಗಿ ಪ್ರಗ್ಯಾ ಠಾಕೂರ್ ಹೇಳುತ್ತಾರೆ. ಆತ ದೇಶಕ್ಕಾಗಿ ಅನುಪಮ ತ್ಯಾಗ ಮಾಡಿದ್ದಾರೆ. ಅವರನ್ನು ಹುತಾತ್ಮ ಎಂದು ಪರಿಗಣಿಸಲಾಗುತ್ತದೆ. ಮಸೂದ್ ಅಜರ್ ನನ್ನು ಆಕೆ ಶಪಿಸಿದ್ದರೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಅಗತ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಭಯೋತ್ಪಾದಕ ಎಂದ ಪ್ರಜ್ಞಾಗೆ ಚು.ಆಯೋಗ ನೋಟಿಸ್
ಭಯೋತ್ಪಾದಕರು ನರಕದಲ್ಲಿ ಅಡಗಿಕೊಂಡಿದ್ದರೂ ಬೇಟೆ ಆಡಲಾಗುತ್ತದೆ ಎನ್ನುತ್ತಾರೆ ನರೇಂದ್ರ ಮೋದಿ. ದೇಶದ ಪುಲ್ವಾಮಾ, ಪಠಾಣ್ ಕೋಟ್ ಹಾಗೂ ಉರಿ ದಾಳಿ ನಡೆದಾಗ ಪ್ರಧಾನಿ ಎಲ್ಲಿದ್ದರು? ಅಂಥ ದಾಳಿಗಳಿಂದ ಏಕೆ ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ನಮ್ಮ ಧರ್ಮದಲ್ಲಿ "ಹರ್ ಹರ್ ಮಹಾದೇವ್" ಎನ್ನುತ್ತೇವೆ. ಆದರೆ ನಮ್ಮ ಧಾರ್ಮಿಕ ಭಾವನೆಗಳಿಗೆ ಬಿಜೆಪಿಯಿಂದ ಘಾಸಿ ಆಗಿದೆ. ಹರ್ ಹರ್ ಮೋದಿ ಎನ್ನುವ ಮೂಲಕ ಬೇಸರ ಮಾಡಿದ್ದಾರೆ. ನಾವು ಫೇಕು (ಸುಳ್ಳುಗಾರ) ಅಂತ ಗೂಗಲ್ ನಲ್ಲಿ ಟೈಪ್ ಮಾಡಿದರೆ ಯಾರ ಫೋಟೋ ಬರುತ್ತದೆ ಎಂಬುದು ನಮಗೆಲ್ಲ ಗೊತ್ತು ಎಂದಿದ್ದಾರೆ.
15ಲಕ್ಷ ಬಂತಾ ಎಂದ ದಿಗ್ವಿಜಯ್: ಯುವಕ ಕೊಟ್ಟ ಉತ್ತರಕ್ಕೆ ಸುಸ್ತೋಸುಸ್ತು
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ನಾನು ಭೋಪಾಲ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಇಳಿಯುವುದು ಖಾತ್ರಿ ಆಗುತ್ತಿದ್ದಂತೆ ಮಾಮಾ (ಶಿವರಾಜ್ ಸಿಂಗ್ ಚೌಹಾಣ್) ಹೆದರಿಬಿಟ್ಟರು. ಉಮಾ ಭಾರತಿ ಸ್ಪರ್ಧೆ ಮಾಡಲು ನಿರಾಕರಿಸಿದರು. ಗೌರ್ ತನಗೆ ಆರೋಗ್ಯ ಸರಿಯಿಲ್ಲ ಅಂದರು. ನಾಮಪತ್ರ ಸಲ್ಲಿಸಲು ಒಂದು ದಿನ ಮೊದಲು ಪ್ರಗ್ಯಾ ಸಿಂಗ್ ರನ್ನು ಭೋಪಾಲ್ ನ ಬಿಜೆಪಿ ಅಭ್ಯರ್ಥಿಯಾಗಿ ಮಾಡಲಾಯಿತು ಎಂದು ಹೇಳಿದ್ದಾರೆ.
ಮೇ ಹನ್ನೆರಡನೇ ತಾರೀಕು ಭೋಪಾಲ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಮೇ ಇಪ್ಪತ್ಮೂರನೇ ತಾರೀಕು ಫಲಿತಾಂಶ ಪ್ರಕಟ ಆಗಲಿದೆ.