ಮಧ್ಯಪ್ರದೇಶ ರಾಜಕೀಯಕ್ಕೆ ತಿರುವು; 5 ಅಂಶಗಳು
ಭೋಪಾಲ್, ಮಾರ್ಚ್ 16 : " ಕೊರೊನಾ ಸಹ ಕಮಲನಾಥ್ ಸರ್ಕಾರವನ್ನು ಉಳಿಸುವುದಿಲ್ಲ. ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ" ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌವ್ಹಾಣ್ ಸೋಮವಾರ ಹೇಳಿದ ಮಾತಿದು.
ಹೌದು, ಮಧ್ಯಪ್ರದೇಶದಲ್ಲಿ 22 ಶಾಸಕರ ರಾಜೀನಾಮೆ ಬಳಿಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ
ಸೋಮವಾರ ಮುಖ್ಯಮಂತ್ರಿ ಕಮಲನಾಥ್ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿತ್ತು. ಆದರೆ, ವಿಧಾನಸಭೆ ಅಧಿವೇಶನವನ್ನು ಮಾರ್ಚ್ 26ರ ತನಕ ಮುಂದೂಡಲಾಗಿತ್ತು. ಆದರೆ, ಸಂಜೆ ರಾಜ್ಯಪಾಲರು ಮಂಗಳವಾರ ವಿಶ್ವಾಸಮತ ಪ್ರಕ್ರಿಯೆ ನಡೆಯಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು 10 ದಿನ ಕಾಪಾಡಿದ ಕೊರೊನಾ!
ಮಧ್ಯಪ್ರದೇಶ ವಿಧಾನಸಭೆ ಒಟ್ಟು ಸದಸ್ಯ ಬಲ 230. ಬಹುಮತ ಸಾಬೀತು ಪಡಿಸಲು 115 ಸದಸ್ಯ ಬಲ ಬೇಕು. ಕಾಂಗ್ರೆಸ್ ಶಾಸಕರ ಸಂಖ್ಯೆ 114. ಇವರಲ್ಲಿ 22 ಶಾಸಕರ ರಾಜೀನಾಮೆ ನೀಡಿದ್ದಾರೆ. ಬಿಜೆಪಿ 109 ಸದಸ್ಯ ಬಲ ಹೊಂದಿದೆ.
ಮಧ್ಯಪ್ರದೇಶ ಹೈಡ್ರಾಮ; ಬೆಂಗಳೂರಲ್ಲೇ ಇರುವ ಕಾಂಗ್ರೆಸ್ ಶಾಸಕರು!
ರಾಜ್ಯಪಾಲರ ಸೂಚನೆ ಏನು?
ರಾಜ್ಯಪಾಲ ಲಾಲ್ಜಿ ಥಂಡನ್, "ಮಂಗಳವಾರ ವಿಧಾನಸಭೆಯಲ್ಲಿ ನೀವು ವಿಶ್ವಾಸಮತಯಾಚನೆ ಮಾಡಬೇಕು. ಮಾರ್ಚ್ 17ರಂದು ವಿಶ್ವಾಸಮತಯಾಚನೆ ನಡೆಯದಿದ್ದರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಅರ್ಥ" ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಅಲ್ಪ ಮತಕ್ಕೆ ಕುಸಿದ ಸರ್ಕಾರ
ರಾಜ್ಯದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದರು ಬಳಿಕ ಅವರು ಬಿಜೆಪಿ ಸೇರಿದರು. ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.
ಶಿವರಾಜ್ ಸಿಂಗ್ ಚೌವ್ಹಾಣ್ ಲೇವಡಿ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌವ್ಹಾಣ್, "ಕೊರೊನಾ ಸಹ ಕಮಲನಾಥ್ ಸರ್ಕಾರವನ್ನು ಉಳಿಸುವುದಿಲ್ಲ. ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ಗೆ ಅರ್ಜಿ
"ನಮ್ಮ ಬಳಿ ಸರ್ಕಾರ ರಚನೆ ಮಾಡಲು ಬೇಕಾದ ನಂಬರ್ ಇದೆ" ಎಂದು ರಾಜ್ಯದ ಪ್ರತಿಪಕ್ಷ ಬಿಜೆಪಿ ಹೇಳಿದೆ. ಅಧಿಕಾರ ವಹಿಸಿಕೊಂಡ 12 ಗಂಟೆಗಳಲ್ಲಿ ಬಹುಮತ ಸಾಬೀತು ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು
22 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಎಲ್ಲರೂ ಭಾನುವಾರ ರಮಡ ಹೋಟೆಲ್ಗೆ ವಾಸ್ತವ್ಯ ಬದಲಿಸಿದ್ದಾರೆ. ಈ ಎಲ್ಲಾ ಶಾಸಕರು ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಇದು ಸರ್ಕಾರ ಪತನಗೊಳ್ಳುವುದು ಖಚಿತವಾಗಿದೆ.