ಜಾಮೀನು ಬೇಕಿದ್ರೆ ಲೈಂಗಿಕ ಕಿರುಕುಳ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೋ ಎಂದ ಹೈಕೋರ್ಟ್
ಭೋಪಾಲ್, ಆಗಸ್ಟ್ 03: ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಸೇರಿದ್ದ ವ್ಯಕ್ತಿಗೆ ಮಧ್ಯಪ್ರದೇಶ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಕಳೆದ ಜೂನ್ ತಿಂಗಳಲ್ಲಿ ಉಜ್ಜೈನಿ ಜಿಲ್ಲೆಯ ಬತ್ಪಚಲನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಿರುದ್ಧ ಕೇಸು ದಾಖಲಾಗಿ ಬಂಧಿಸಲಾಗಿತ್ತು. ಪಕ್ಕದ ಮನೆಯ ಮಹಿಳೆ ಮನೆಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದ. ಇದಕ್ಕೆ ಸಂಬಂಧಪಟ್ಟಂತೆ ಮಹಿಳೆ ದೂರು ಕೊಟ್ಟು ಬಂಧನವಾಗಿತ್ತು.
ರಕ್ಷಾ ಬಂಧನ; ಸ್ಪೀಡ್ ಪೋಸ್ಟ್, ಆನ್ಲೈನ್ ಮೂಲಕವೂ ರಾಖಿ ಕಳುಹಿಸಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡುವಾಗಿ ಕೋರ್ಟ್ ವಿಶೇಷವಾದ ಆದೇಶ ಹೊರಡಿಸಿದೆ. 'ನಿನ್ನ ಮೇಲೆ ಲೈಂಗಿಕ ಕಿರುಕುಳ ನೀಡಿರುವ ದೂರು ನೀಡಿರುವ ಮಹಿಳೆಯ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡು ಜೀವನಪೂರ್ತಿ ಸೋದರನಂತೆ ರಕ್ಷಣೆಯಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟು ಬರುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ರಕ್ಷಾಬಂಧನ ಸಮಯದಲ್ಲಿಯೇ ಆತನಿಗೆ ಜಾಮೀನು ನೀಡಲಾಗಿದೆ.
ನ್ಯಾಯಾಲಯಕ್ಕೆ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ನೊಂದಿಗೆ 7 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.ಮದುವೆಯಾಗಿ ಹೆಂಡತಿ ಇದ್ದರೂ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು, 'ಜಾಮೀನು ಪಡೆದು ಪತ್ನಿಯೊಂದಿಗೆ ದೂರು ಕೊಟ್ಟ ಮಹಿಳೆಯ ಮನೆಗೆ ರಾಖಿ ಮತ್ತು ಸಿಹಿತಿಂಡಿ ಬಾಕ್ಸ್ನೊಂದಿಗೆ ಹೋಗಬೇಕು. ಆಕೆಯಿಂದ ರಾಖಿ ಕಟ್ಟಿಸಿಕೊಂಡು ಇನ್ನು ಮುಂದೆ ಆಕೆಯನ್ನು ರಕ್ಷಣೆ ಮಾಡುತ್ತೇನೆ ಎಂದು ಮಾತು ಕೊಡಬೇಕು' ಎಂದು ನ್ಯಾಯಮೂರ್ತಿ ರೋಹಿತ್ ಆರ್ಯ ಹೇಳಿದ್ದಾರೆ.
ರಾಖಿ ಕಟ್ಟಿದ ವೇಳೆ ಸೋದರರು ಸೋದರಿಯರಿಗೆ ಉಡುಗೊರೆ ಅಥವಾ ಹಣ ನೀಡುವ ಸಂಪ್ರದಾಯವಿದೆ ಹಾಗಾಗಿ ಆಕೆಗೆ 11 ಸಾವಿರ ರೂಪಾಯಿ ಕೊಟ್ಟು ಆಶೀರ್ವಾದ ಕೇಳುವಂತೆ ನ್ಯಾಯಮೂರ್ತಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಜಾಮೀನು ಪಡೆದಿರುವವನು ಮನೆಗೆ ಹೋಗಿ ರಾಖಿ ಕಟ್ಟಿದ್ದು, ಹಣ ಕೊಟ್ಟಿರುವ ಫೋಟೋ ಮತ್ತು ರಷೀದಿಯನ್ನು ಇಟ್ಟುಕೊಳ್ಳಬೇಕು, ಅದನ್ನು ವಕೀಲರ ಮೂಲಕ ಹೈಕೋರ್ಟ್ಗೆ ಸಲ್ಲಿಸಬೇಕು.