ನಿಲ್ಲುತ್ತಿಲ್ಲ ಮಳೆ; ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಕಪ್ಪೆಗಳಿಗೆ ಡಿವೋರ್ಸ್!
ಭೋಪಾಲ್, ಸೆಪ್ಟೆಂಬರ್ 13: ಮಳೆಯಿಲ್ಲದೇ ಬರ ಬಂದಾಗ, ಚೆನ್ನಾಗಿ ಮಳೆಯಾಗಲಿ ಎಂದು ಕೆಲವು ಕಡೆ ಕಪ್ಪೆಗಳಿಗೆ ಮದುವೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಕಪ್ಪೆಗಳಿಗೆ ಡಿವೋರ್ಸ್ ನೀಡಲಾಗಿದೆ.
ಕಪ್ಪೆಗಳಿಗೆ ಮದುವೆ ಮಾಡಿಸಿದರೆ ವರುಣದೇವ ಮಳೆ ಕರುಣಿಸುತ್ತಾನೆ ಎಂದು ಎರಡು ಕಪ್ಪೆಗಳನ್ನು ತಂದು ಅವುಗಳನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡುವ ನಂಬಿಕೆ ಕೆಲವೆಡೆ ಇದೆ. ಕೆಲವೊಮ್ಮೆ ಮದುವೆ ಮಾಡಿಸಿದ ನಂತರ ಪ್ರಾಸಂಗಿಕ ಎಂಬಂತೆ ಮಳೆಯೂ ಆಗಿಬಿಡುತ್ತದೆ. ಅದೇ ನಂಬಿಕೆಯಿಂದ ಭೋಪಾಲ್ ನಲ್ಲೂ ಎರಡು ತಿಂಗಳ ಹಿಂದೆ ಕಪ್ಪೆಗಳನ್ನು ತಂದು ಮದುವೆ ಮಾಡಿಸಲಾಗಿತ್ತು.
ಮುಂಗಾರು ಮಳೆ ಬರಲು ನೂರೆಂಟು ಕಸರತ್ತು!
ಮಳೆಯಿಲ್ಲದೇ ನರಳುತ್ತಿದ್ದ ಮಧ್ಯಪ್ರದೇಶದ ಭೋಪಾಲ್ ನಲ್ಲಿನ ಇಂದ್ರಪುರಿಯಲ್ಲಿ ಚೆನ್ನಾಗಿ ಮಳೆಯಾಗಲೆಂದು ಜುಲೈ 19ರಂದು ಈ ಕಪ್ಪೆಗಳನ್ನು ಎಲ್ಲೆಲ್ಲಿಂದಲೋ ತಂದು ಮದುವೆ ಮಾಡಿಸಿದ್ದರು. ನೀರಿಲ್ಲದೇ ನರಳುತ್ತಿದ್ದ ಜನ ಕಪ್ಪೆ ಮದುವೆಯಿಂದಲಾದರೂ ಮಳೆಯಾಗುತ್ತದಾ ಎಂದು ಆಕಾಶ ನೋಡುತ್ತಾ ಕಾಯುತ್ತಿದ್ದರು.
ಆದರೆ ಅದೇನು ಮಾಯವೋ ಏನೋ, ಅಂದುಕೊಂಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚೇ ಮಳೆಯಾಗಿಹೋಯಿತು. ಮಳೆಯಾಗುವುದಿರಲಿ, ಪ್ರವಾಹವೂ ಬಂದುಬಿಟ್ಟಿತು. ಮಧ್ಯಪ್ರದೇಶದಲ್ಲಿ ಹದಿಮೂರು ವರ್ಷದ ನಂತರ ಈ ರೀತಿ ದಾಖಲೆ ಮಳೆ ಸುರಿಯಿತು. ಇದೇ ಬುಧವಾರ ಸೆಪ್ಟೆಂಬರ್ 11ಕ್ಕೆ ಮಳೆಯಿಂದ ಮಧ್ಯಪ್ರದೇಶದ ಎಷ್ಟೋ ಪ್ರದೇಶಗಳು ಜಲಾವೃತವೂ ಆಗಿಬಿಟ್ಟವು. ನಿನ್ನೆ ಹವಾಮಾನ ಇಲಾಖೆ ಇನ್ನೂ ಹೆಚ್ಚು ಮಳೆಯಾಗುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು.
ಹೀಗೆಲ್ಲಾ ಆಗಲು ಕಾರಣವೇನು ಎಂದು ಯೋಚಿಸುತ್ತಿದ್ದ ಕೆಲವರಿಗೆ ಈ ಕಪ್ಪೆಗಳ ಮದುವೆ ಮಾಡಿಸಿದ್ದು ನೆನಪಿಗೆ ಬಂದುಬಿಟ್ಟಿದೆ. ಮದುವೆ ಮಾಡಿದ್ದಕ್ಕೆ ಇಷ್ಟೆಲ್ಲಾ ಆಗಿದೆ, ಈಗ ಆ ಕಪ್ಪೆಗಳಿಗೆ ವಿಚ್ಛೇದನ ನೀಡಿದರೆ ಮಳೆ ನಿಲ್ಲಬಹುದು ಎಂದು ಕಪ್ಪೆಗಳಿಗೆ ಡಿವೋರ್ಸ್ ನೀಡುವ ಆಲೋಚನೆ ಹೊಳೆದಿದೆ.
ಮಳೆಗಾಗಿ ಉಡುಪಿಯಲ್ಲಿ ನಡೆಯಿತು ಮಂಡೂಕ ಕಲ್ಯಾಣೋತ್ಸವ
ಓಂ ಶಿವ ಸೇವಾ ಶಕ್ತಿ ಸಂಘದ ಸದಸ್ಯರು ಮಳೆಗೆ ಪರಿಹಾರವಾಗಿ ಕಪ್ಪೆಗಳಿಗೆ ವಿಚ್ಛೇದನ ನೀಡಿಸಿದ್ದಾರೆ. ಕಪ್ಪೆಗಳ ಬೊಂಬೆಗಳನ್ನು ಮಾಡಿ, ಮದುವೆ ಮಾಡಿಸಿದ್ದ ಕಪ್ಪೆಗಳ ಹೆಸರಿನಲ್ಲಿ, ಅವುಗಳಿಗೆ ಮಂತ್ರಪಠಣದ ಮೂಲಕ ವಿಚ್ಛೇದನ ನೀಡಿಸಿದ್ದಾರೆ. ಈ ಮೂಲಕ ಪ್ರಪಂಚದಲ್ಲಿ ವಿಚ್ಛೇದನ ಪಡೆದ ಮೊದಲ ಕಪ್ಪೆ ಜೋಡಿಗಳು ಎನಿಸಿಕೊಂಡಿವೆ.