ಚಿಟ್ ಫಂಡ್ ಹಗರಣ : ಮಾಜಿ ಮುಖ್ಯಮಂತ್ರಿ ಮಗ ವಿರುದ್ಧ ಪ್ರಕರಣ
ಭೋಪಾಲ್, ಜೂನ್ 19: ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಪುತ್ರ ಅಭಿಷೇಕ್ ಸಿಂಗ್ ಹಾಗೂ 19 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಸರ್ಗುಜಾ ಜಿಲ್ಲೆಯ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಸಿಂಗ್, ಮಾಜಿ ಸಂಸದರೊಬ್ಬರು, ಕಾಂಗ್ರೆಸ್ ಮುಖಂಡರೊಬ್ಬರು ವಿಚಾರಣೆ ಎದುರಿಸಬೇಕಾಗಿದೆ. ಮಾಜಿ ಬಿಜೆಪಿ ಸಂಸದ ಮಧುಸೂದನ್ ಯಾದವ್, ಕಾಂಗ್ರೆಸ್ ನಾಯಕ ನರೇಶ್ ಡಕಾಲಿಯಾ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಅಭಿಷೇಕ್, ಯಾದವ್ ಹಾಗೂ ಡಕಾಲಿಯಾ ಅವರು ಚಿಟ್ ಫಂಡ್ ಸಂಸ್ಥೆಯ ಸ್ಟಾರ್ ಪ್ರಚಾರಕರಾಗಿದ್ದರು. ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಚಿಟ್ ಫಂಡ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿತ್ತು, 2016ರಲ್ಲಿ ಸಂಪೂರ್ಣ ಬಂದ್ ಆಗಿತ್ತು.
ಈ ಪ್ರಕರಣದಲ್ಲಿ ಅಭಿಷೇಕ್, ಯಾದವ್ ಹಾಗೂ ಡಕಾಲಿಯಾ ಸೇರಿದಂತೆ 17 ನಿರ್ದೇಶಕ ಮತ್ತು ಅನ್ಮೋಲ್ ಇಂಡಿಯಾ ಸಮಿತಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಂಬಿಕಾಪುರ್ ನಗರದ ಕೋಟ್ವಾಲಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ ಎಂದು ಐಜಿಪಿ ಕೆಸಿ ಅಗರವಾಲ್ ಹೇಳಿದ್ದಾರೆ.
ಹೂಡಿಕೆದಾರ ಕಮ್ ಏಜೆಂಟ್ ಆಗಿದ್ದ ಸಾಗರ್ ಗುಪ್ತಾ ಅವರು ದೂರು ನೀಡಿದ್ದಲ್ಲದೆ, ಸ್ಥಳೀಯ ಕೋರ್ಟಿನಲ್ಲಿ ಪಿಟೀಷನ್ ಹಾಕಿದ್ದರು. ಕೋರ್ಟ್ ನಿರ್ದೇಶನದ ಬಳಿಕ ಪೊಲೀಸರು 20 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 420, 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಛತ್ತೀಸ್ ಗಢ ಹೂಡಿಕೆದಾರರ ಹಿತಾಸಕ್ತಿ ಕಾಯ್ದೆ 2015 ಅಡಿಯಲ್ಲೂ ಕೇಸ್ ಜಡಿಯಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಎಫ್ಐಆರ್ ಹಾಕಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಬಿಜೆಪಿ ಸೋಲು ಕಂಡಿದ್ದರೂ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದ ಹುದ್ದೆಯನ್ನು ಅಮಿತ್ ಶಾ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ಇದೊಂದು ರಾಜಕೀಯ ಷಡ್ಯಂತ್ರ, ನಾನು ಯಾವುದೆ ಚಿಟ್ ಫಂಡ್ ಸಂಸ್ಥೆ ಹಗರಣದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.