ವೈರಲ್ ವಿಡಿಯೋ; ಆಂಬ್ಯುಲೆನ್ಸ್ ಇಲ್ಲದೇ ಮಗಳ ಶವ ಹೊತ್ತು ನಡೆದ ತಂದೆ
ಭೋಪಾಲ್, ಜೂನ್ 10: ಆಸ್ಪತ್ರೆಯಲ್ಲಿ ಮೃತಪಟ್ಟ 4 ವರ್ಷದ ಮಗಳ ಶವ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ನೀಡಲು ನಿರಾಕರಿಸಿದರು. ಆದ್ದರಿಂದ ತಂದೆ ಮಗಳ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಟ್ವಿಟರ್ನಲ್ಲಿ ಹೆಗಲ ಮೇಲೆ ಶವ ಹೊತ್ತು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಒಂದು ಆಂಬುಲೆನ್ಸ್ ಕೂಡ ವ್ಯವಸ್ಥೆ ಮಾಡದ ಸರ್ಕಾರ, ಅಧಿಕಾರಿಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಎರಡು ಘಟನೆಗಳು ನಡೆದಿದ್ದು, ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಓರ್ವ ಗರ್ಭಿಣಿ ಮೃತಪಟ್ಟಿದ್ದಾರೆ.
ಹಣ ಕೊಟ್ಟರೆ ಹೆಣ ಎಂದ ಆಸ್ಪತ್ರೆ; ಮಗನ ಶವ ಪಡೆಯಲು ಹಣಕ್ಕಾಗಿ ಭಿಕ್ಷೆ ಬೇಡಿದ ಪೋಷಕರು
ಅನಾರೋಗ್ಯದ ಕಾರಣ ಸೋಮವಾರ ಲಕ್ಷ್ಮಣ್ ಅಹಿರ್ವಾರ್ ತಮ್ಮ ಮಗಳನ್ನು ಬಕ್ಸ್ವಾಹ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ಬಾಲಕಿ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ದಮೋಹ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
ಸ್ಮಶಾನ ಜಾಗವಿಲ್ಲದೇ ರಸ್ತೆಯಲ್ಲೇ ಶವ ಇಟ್ಟುಕೊಂಡು ಕೂತ ದಲಿತರು
ಬಾಲಕಿ ಮೃತದೇಹ ಮನೆಗೆ ತೆಗೆದುಕೊಂಡು ಹೋಗಲು ಆಸ್ಪತ್ರೆ ಸಿಬ್ಬಂದಿಗೆ ಆಂಬ್ಯುಲೆನ್ಸ್ಗಾಗಿ ಮನವಿ ಮಾಡಲಾಗಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಮೃತದೇಹ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಿಲ್ಲ ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ.
|
ಬಸ್ನಲ್ಲಿ ಶವ ಸಾಗಿಸಿದ ಕುಟುಂಬ
"ಮೃತದೇಹ ಸಾಗಿಸಲು ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣ ಇರಲಿಲ್ಲ, ನಾವು ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಕ್ಸ್ವಾಹಾ ಕಡೆಗೆ ಬಸ್ ಹತ್ತಿದೆವು" ಎಂದು ಬಾಲಕಿಯ ತಂದೆ ಲಕ್ಷ್ಮಣ್ ಅಹಿರ್ವಾರ್ ಹೇಳಿದ್ದಾರೆ
ಬಸ್ನಲ್ಲಿ ಬಕ್ಸ್ವಾಹಾ ತಲುಪಿದ ನಂತರ, ಲಕ್ಷ್ಮಣ್ ಅಹಿರ್ವಾರ್ ತಮ್ಮ ಮಗಳ ಶವವನ್ನು ಪೌಡಿ ಗ್ರಾಮಕ್ಕೆ ಕೊಂಡೊಯ್ಯಲು ವಾಹನ ವ್ಯವಸ್ಥೆ ಮಾಡುವಂತೆ ನಗರ ಪಂಚಾಯತ್ಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯೂ ಅಧಿಕಾರಿಗಳು ನಿಲಕ್ಷ್ಯ ತೋರಿದ್ದು, ವಾಹನ ವ್ಯವಸ್ಥೆ ಮಾಡಲ್ಲ ಎಂದಿದ್ದಾರೆ.
ಆರೋಪ ನಿರಾಕರಣೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಾಮೋಹ್ ಸಿವಿಲ್ ಸರ್ಜನ್ ಡಾ. ಮಮತಾ ತಿಮೋರಿ ಬಾಲಕಿ ಕುಟುಂಬ ಮಾಡಿರುವ ಆರೋಪ ನಿರಾಕರಿಸಿದ್ದಾರೆ. ನಮ್ಮ ಬಳಿಗೆ ವಾಹನವನ್ನು ಕೇಳಲು ಯಾರೂ ಬಂದಿಲ್ಲ ಎಂದು ಹೇಳಿದ್ದಾರೆ.
"ಯಾರೂ ನನ್ನ ಬಳಿಗೆ ಬಂದಿಲ್ಲ, ನಮ್ಮ ಬಳಿ ಶವ ಸಾಗಿಸುವ ವಾಹನವಿದೆ. ನಾವು ಅದನ್ನು ರೆಡ್ಕ್ರಾಸ್ ಅಥವಾ ಯಾವುದೇ ಇತರ ಎನ್ಜಿಒನಿಂದ ವ್ಯವಸ್ಥೆ ಮಾಡಬಹುದು" ಎಂದು ತಿಮೋರಿ ಹೇಳಿದರು.
|
ಕೈಗಾಡಿಯಲ್ಲಿ ಮೃತದೇಗ ಸಾಗಿಸಿದ ಕುಟುಂಬ
ಅಧಿಕಾರಿಗಳ ನಿರ್ದಾಕ್ಷಿಣ್ಯ ವರ್ತನೆಯನ್ನು ಪ್ರತಿಬಿಂಬಿಸುವ ಮತ್ತೊಂದು ಪ್ರಕರಣ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸೂಕ್ತ ವಾಹನ ವ್ಯವಸ್ಥೆ ಇಲ್ಲದ ಕಾರಣ, ವ್ಯಕ್ತಿಯೊಬ್ಬರು ಗಧಕೋಟಾ ಸಮುದಾಯ ಆರೋಗ್ಯ ಕೇಂದ್ರದಿಂದ ಕೈಗಾಡಿಯಲ್ಲಿ ತನ್ನ ಸಹೋದರನ ಮೃತ ದೇಹವನ್ನು ಸಾಗಿಸಿದ್ದಾರೆ.
"ನಾನು ಶವ ಸಾಗಿಸುವ ವಾಹನವನ್ನು ಕೇಳಿದೆ, ಆದರೆ ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆ ಮಾಡಲಿಲ್ಲ, ಖಾಸಗಿ ವಾಹನದ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮೃತದೇಹವನ್ನು ಕೈಗಾಡಿಯಲ್ಲಿ ಸಾಗಿಸಿದ್ದೇವೆ" ಎಂದು ಭಗವಾನ್ ದಾಸ್ ಹೇಳಿಕೊಂಡಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಲಾಕ್ ಮೆಡಿಕಲ್ ಆಫೀಸರ್ ಡಾ ಸುಯಶ್ ಸಿಂಘೈ, "ರೋಗಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಕರ್ತವ್ಯದಲ್ಲಿದ್ದ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಲು ಕುಟುಂಬಕ್ಕೆ ಸಲಹೆ ನೀಡಿದ್ದರು, ಆದರೆ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿ ಮೃತದೇಹ ತೆಗೆದುಕೊಂಡು ಹೋದರು," ಎಂದು ಹೇಳಿದ್ದಾರೆ.
|
ಗರ್ಭಿಣಿ ಸಾವಿಗೆ ಕಾರಣವಾದ ಆಂಬುಲೆನ್ಸ್
ಭಗವಾನ್ಪುರ ಖಾರ್ಗೋನೆ ಜಿಲ್ಲೆಯಲ್ಲಿ ಗರ್ಭಿಣಿಯೊಬ್ಬರು ಆಸ್ಪತ್ರೆ ತಲುಪಲು ಸಾಧ್ಯವಾಗದೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಿಂದ ಸರ್ಕಾರಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.