ಮಗಳ ಮದುವೆಗಿಟ್ಟಿದ್ದ ಹಣವನ್ನೇ ಆಮ್ಲಜನಕ ಖರೀದಿಗೆ ಕೊಟ್ಟ ರೈತ
ಭೋಪಾಲ್, ಏಪ್ರಿಲ್ 28: ಕೊರೊನಾ ರೋಗಿಗಳ ಅವಸ್ಥೆ ಹಾಗೂ ವೈದ್ಯಕೀಯ ಆಮ್ಲಜನಕಕ್ಕೆ ಉಂಟಾಗಿರುವ ಹಾಹಾಕಾರ ಕಂಡು ರೈತರೊಬ್ಬರು ತಮ್ಮ ಮಗಳ ಮದುವೆಗೆ ಇಟ್ಟಿದ್ದ 2 ಲಕ್ಷ ರೂಪಾಯಿಯನ್ನು ವೈದ್ಯಕೀಯ ಆಮ್ಲಜನಕ ಖರೀದಿಗೆಂದು ಸರ್ಕಾರಕ್ಕೆ ನೀಡಿದ್ದಾರೆ.
ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ರೈತ ಕೊರೊನಾ ರೋಗಿಗಳ ಸಂಕಷ್ಟಕ್ಕೆ ಈ ರೀತಿ ಮಿಡಿದಿದ್ದಾರೆ. ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ರೈತ ಚಂಪಲಾಲ್ ಗುರ್ಜಾರ್ ಹಣ ಕೂಡಿಟ್ಟಿದ್ದರು. ಆದರೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದ್ದು, ಆಮ್ಲಜನಕಕ್ಕೆ ತೀವ್ರ ಕೊರತೆ ಎದುರಾಗಿದ್ದನ್ನು ಕಂಡ ಅವರು, ಇದಕ್ಕೆ ತನ್ನ ಕೈಲಾದ ಸಹಾಯ ಮಾಡಬೇಕು ಎಂದು ನಿರ್ಧರಿಸಿದರು.
ಹೀಗಾಗಿ ಮಗಳ ಮದುವೆಗೆ ಇಟ್ಟಿದ್ದ ಹಣದಲ್ಲಿ ಎರಡು ಲಕ್ಷವನ್ನು ಆಮ್ಲಜನಕ ಕೊಂಡುಕೊಳ್ಳಲು ಸ್ಥಳೀಯ ಆಡಳಿತಕ್ಕೆ ನೀಡಿದ್ದಾರೆ. ಇಲ್ಲಿನ ಜಿಲ್ಲಾಸ್ಪತ್ರೆಗೆ ಒಂದು ಹಾಗೂ ಜೀರಣ್ ತೆಹಸಿಲ್ನಲ್ಲಿನ ಆಸ್ಪತ್ರೆಗೆ ಒಂದು ವೈದ್ಯಕೀಯ ಆಮ್ಲಜನಕ ಸಿಲಿಂಡರ್ ತೆಗೆದುಕೊಳ್ಳಲು ಹಣ ನೀಡಿದ್ದಾರೆ.
ರೈತರಾಗಿರುವ ಗುರ್ಜಾರ್ ಅವರ ಮಗಳ ಮದುವೆ ಈ ಭಾನುವಾರ ನಡೆಯಲಿತ್ತು. ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಬೇಕು ಎಂದು ಕನಸು ಕಂಡಿದ್ದರು. ಆದರೆ ಈ ಕೊರೊನಾ ಬಿಕ್ಕಟ್ಟು ಗುರ್ಜಾರ್ ಅವರ ಮನಸ್ಸನ್ನೂ ಬದಲಿಸಿತು. "ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ಈ ಉತ್ತಮ ಕಾರ್ಯ ಮಾಡಿರುವ ಆತ್ಮಸಂತೃಪ್ತಿ ಇದೆ. ನಾನು ನೀಡಿರುವ ಎರಡು ಲಕ್ಷದಲ್ಲಿ ಎರಡು ಆಮ್ಲಜನಕ ಸಿಲಿಂಡರ್ಗಳನ್ನು ಕೊಂಡುಕೊಳ್ಳಬಹುದಾಗಿದೆ" ಎಂದಿದ್ದಾರೆ.
ಅಂತ್ಯಸಂಸ್ಕಾರದಲ್ಲೂ ಬ್ಲಾಕ್ ಮಾರ್ಕೆಟ್, ಪ್ಯಾಕೇಜ್; ಬೆಂಗಳೂರಿನಲ್ಲಿ ಇದೆಂಥ ದುಃಸ್ಥಿತಿ?
ನನ್ನ ತಂದೆಯ ಈ ನಿರ್ಧಾರ ಸಂತೋಷ ತಂದಿದೆ. ಸದ್ಯಕ್ಕೆ ವೈದ್ಯಕೀಯ ಆಮ್ಲಜನಕಕ್ಕೆ ಅತೀವ ಕೊರತೆಯಿದೆ. ಈ ಬಿಕ್ಕಟ್ಟಿಗೆ ಅಳಿಲು ಸೇವೆ ನಮ್ಮದು ಎಂದು ಮಗಳು ಸಂತಸ ವ್ಯಕ್ತಪಡಿಸಿದ್ದಾರೆ. ರೈತನ ಈ ಕಾರ್ಯಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾನುವಾರದವರೆಗೂ ಮಧ್ಯ ಪ್ರದೇಶದಲ್ಲಿ 4,99,304 ಪ್ರಕರಣಗಳು ದಾಖಲಾಗಿವೆ.