ದುಬಾರಿ ವಿದ್ಯುತ್ ಬಿಲ್: ಪ್ರಧಾನಿ ಮೋದಿಗೆ ಪತ್ರ ಬರೆದು ರೈತ ಆತ್ಮಹತ್ಯೆ
ಭೋಪಾಲ್, ಜನವರಿ 1: ಮಧ್ಯಪ್ರದೇಶದ ಛತ್ರಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ರೈತರೊಬ್ಬರು ಭಾರಿ ಮೊತ್ತದ ವಿದ್ಯುತ್ ಬಿಲ್ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿಗೆ ಐದು ಪುಟಗಳ ಪತ್ರ ಬರೆದಿದ್ದು, 88,000 ರೂದಷ್ಟು ದೊಡ್ಡ ಮೊತ್ತದ ವಿದ್ಯುತ್ ಬಿಲ್ ಪಾವತಿಸಲು ತಮ್ಮ ಅಂಗಾಂಗಗಳನ್ನು ಮಾರಾಟ ಮಾಡುವ ಸಲುವಾಗಿ ತಮ್ಮ ದೇಹವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ.
ಸಣ್ಣ ಹಿಟ್ಟಿನ ಗಿರಣಿ ನಡೆಸುತ್ತಿದ್ದ ರೈತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರು ಹೆಣ್ಣುಮಗಳು ಮತ್ತು ಮಗನನ್ನು ಅವರು ಅಗಲಿದ್ದಾರೆ. ವಿದ್ಯುತ್ ಕಂಪೆನಿಯು ಅವರ ಹಿಟ್ಟಿನ ಗಿರಣಿ ಮತ್ತು ಮೋಟಾರ್ ಬೈಕ್ ಎರಡನ್ನೂ ಮುಟ್ಟುಗೋಲು ಹಾಕಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ರೈತರ ಪ್ರತಿಭಟನೆ; ಡೆತ್ ನೋಟ್ ಬರೆದು ಪಂಜಾಬ್ ವಕೀಲ ಆತ್ಮಹತ್ಯೆ
'ವಿದ್ಯುತ್ ವಿತರಣಾ ಕಂಪೆನಿಯ ಕಿರುಕುಳದಿಂದ ನನ್ನ ಅಣ್ಣ ಜೀವ ತೆಗೆದುಕೊಂಡಿದ್ದಾನೆ. ವಿದ್ಯುತ್ ವಿತರಣಾ ಕಂಪೆನಿಯು ಗಿರಣಿ ಮತ್ತು ಮೋಟಾರ್ ಬೈಕ್ ವಶಪಡಿಸಿಕೊಂಡ ಬಳಿಕ ಅತೀವ ಒತ್ತಡ ಹಾಗೂ ಬೇಸರದಲ್ಲಿದ್ದ' ಎಂದು ಸಂತ್ರಸ್ತ ರೈತನ ಸಹೋದರ ತಿಳಿಸಿದ್ದಾರೆ.
'ಈ ವರ್ಷ ಉತ್ತಮ ಬೆಳೆ ಕೂಡ ಬಂದಿಲ್ಲ. ಹೀಗಾಗಿ ಅವನಿಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ತಿಂಗಳಿಗೆ 3,000-4,000 ರೂ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ 88,000 ರೂ ಬಿಲ್ ಬಂದಿದೆ. ಬಿಲ್ ಪಾವತಿಸಲು ಸಮಯ ನೀಡದೆ ಕಂಪೆನಿ ಅಧಿಕಾರಿಗಳು ಲೀಗಲ್ ನೋಟಿಸ್ ನೀಡಿದ್ದಲ್ಲದೆ, ಗಿರಣಿ ಮತ್ತು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಬಿಲ್ ಪಾವತಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೋರಿದ್ದರೂ, ಆತನ ಅಹವಾಲಿಗೆ ಅಧಿಕಾರಿಗಳು ಕಿವಿಗೊಡಲಿಲ್ಲ' ಎಂದು ಆರೋಪಿಸಿದ್ದಾರೆ.
'ದೊಡ್ಡ ರಾಜಕಾರಣಿಗಳು ಮತ್ತು ಉದ್ಯಮಿಗಳು ಹಗರಣ ನಡೆಸಿದರೂ ಸರ್ಕಾರಿ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುವುದಿಲ್ಲ. ಅವರು ಸಾಲ ತೆಗೆದುಕೊಂಡರೆ ಮರುಪಾವತಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಇಲ್ಲವೇ ಅದನ್ನು ಮನ್ನಾ ಮಾಡಲಾಗುತ್ತದೆ. ಆದರೆ ಬಡ ವ್ಯಕ್ತಿ ಸಣ್ಣ ಪ್ರಮಾಣದ ಸಾಲ ತೆಗೆದುಕೊಂಡರೂ, ಸಾಲ ವಾಪಸ್ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೂಡ ಸರ್ಕಾರ ಕೇಳುವುದಿಲ್ಲ. ಅದರ ಬದಲು ಸಾರ್ವಜನಿಕವಾಗಿ ಅವಮಾನಿಸುತ್ತದೆ' ಎಂದು ರೈತ ಪತ್ರದಲ್ಲಿ ಬರೆದಿದ್ದಾರೆ.