'ಐಟಂ' ಪದಕ್ಕೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಕಮಲನಾಥ್
ಭೋಪಾಲ್, ಅಕ್ಟೋಬರ್.19: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಅಮಾರ್ತಿ ದೇವಿ ಅವರನ್ನು 'ಐಟಂ' ಎಂದು ಸಂಬೋಧಿಸಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ತಮ್ಮ ಹೇಳಿಕೆಗೆ ಸೋಮವಾರ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು.
"ನಾನು ಏನನ್ನೋ ಹೇಳುವುದಕ್ಕೆ ಬಯಸಿದೆ, ಆದರೆ ಅದರ ಹಿಂದೆ ಯಾರನ್ನೂ ಅವಮಾನಿಸಬೇಕು ಎಂಬ ಉದ್ದೇಶ ಇರಲಿಲ್ಲ. ತಕ್ಷಣಕ್ಕೆ ನನಗೆ ಆ ಪಕ್ಷದ ಅಭ್ಯರ್ಥಿಯ ಹೆಸರು ಜ್ಞಾಪಕಕ್ಕೆ ಬರಲಿಲ್ಲ. ಹೀಗಾಗಿ ಪಟ್ಟಿಯಲ್ಲಿದ್ದ ಐಟಂ ನಂಬರ್,1 ಮತ್ತು ಐಟಂ ನಂಬರ್.2 ಎಂದು ಹೇಳಿದೆ" ಅಂತಾ ಮಾಜಿ ಸಿಎಂ ಕಮಲನಾಥ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸೇರಿಕೊಂಡ ಮಹಿಳಾ ಅಭ್ಯರ್ಥಿಯನ್ನು 'ಐಟಂ' ಎಂದ ಕಮಲ್ ನಾಥ್: ವ್ಯಾಪಕ ಆಕ್ರೋಶ
ದರ್ಮಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಕಮಲನಾಥ್ ಅವರು, ಐಟಂ ಎಂಬ ಪದ ಪ್ರಯೋಗಿಸಿದ್ದರು. ನಮ್ಮ ಪಕ್ಷದ ಅಭ್ಯರ್ಥಿಯು ಬಹಳ 'ಸರಳ ವ್ಯಕ್ತಿ'ಯೇ ಹೊರತು ಎದುರಾಳಿ ಪಕ್ಷದ 'ಐಟಂ' ರೀತಿ ಅಲ್ಲ ಎಂದು ಹೇಳಿದ್ದರು.
ದಬ್ರಾದಲ್ಲಿ ಪ್ರಚಾರದ ವೇಳೆ ಆಗಿದ್ದೇನು?:
ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಕಮಲನಾಥ್ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ವಿರೋಧ ಪಕ್ಷದ ಅಭ್ಯರ್ಥಿ ಅಮಾರ್ತಿ ದೇವಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಅಭ್ಯರ್ಥಿ ಹೆಸರನ್ನೂ ಉಲ್ಲೇಖಿಸಿದೇ ಐಟಂ ಎಂದು ಕರೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಸಲಿಗೆ ಭಾಷಣದ ಸಂದರ್ಭದಲ್ಲಿ ಕಮನಾಥ್, "ನಾನೇಕೆ ಅವರ ಹೆಸರು ಹೇಳಲಿ (ಎದುರಾಳಿ ಪಕ್ಷದ ಅಭ್ಯರ್ಥಿ)? ನನಗಿಂತ ನಿಮಗೇ ಚೆನ್ನಾಗಿ ಆ ವ್ಯಕ್ತಿ ಬಗ್ಗೆ ತಿಳಿದಿದೆ. ಎಂತಹ 'ಐಟಂ' ಎಂದು ಕಮಲ್ ನಾಥ್ ಹೇಳಿದ್ದರು". ಈ ಸಂದರ್ಭದಲ್ಲಿ ನೆರೆದಿದ್ದ ಜನರು ಜೋರಾಗಿ ಇಮಾರ್ತಿ ದೇವಿ ಎಂದು ಬಿಜೆಪಿ ಅಭ್ಯರ್ಥಿ ಹೆಸರನ್ನು ಕೂಗಿದರು.
ಕಮಲನಾಥ್ ಹೇಳಿಕೆ ಖಂಡಿಸಿ ಮೌನ ಪ್ರತಿಭಟನೆ:
ಬಿಜೆಪಿ ಅಭ್ಯರ್ಥಿ ಅಮಾರ್ತಿ ದೇವಿ ಅವರನ್ನು ಐಟಂ ಎಂದು ಸಂಬೋಧಿಸಿದಕ್ಕೆ ಮಾಜಿ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಮಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಕಮಲನಾಥ್ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು.