ಗೋಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ಗುಣವಾಯ್ತು: ಸಾಧ್ವಿ ಪ್ರಗ್ಯಾ
ಭೋಪಾಲ್, ಏಪ್ರಿಲ್ 23 : ಸಾಲು ಸಾಲು ವಿವಾದಿತ ಹೇಳಿಕೆ ನೀಡುತ್ತಿರುವ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಮತ್ತೊಂದು ಹುಬ್ಬೇರಿಸುವಂಥ ವಿಚಾರವನ್ನು ಹಂಚಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂಡಿಯಾ ಟುಡೇ ಜತೆ ಮಾತನಾಡುತ್ತಾ, ಗೋಮೂತ್ರ ಹಾಗೂ ಇನ್ನಿತರ ಗೋ ಉತ್ಪನ್ನಗಳ ಬಳಕೆಯಿಂದ ನನ್ನ ಸ್ತನ ಕ್ಯಾನ್ಸರ್ ಸಂಪೂರ್ಣ ಗುಣಮುಖವಾದೆ ಎಂದು ಹೇಳಿದ್ದಾರೆ.
ಭೋಪಾಲ್ನಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್
ಗೋವುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಗೋವುಗಳನ್ನು ಅನೇಕ ಕಡೆಗಳಲ್ಲಿ ನೋಡಿಕೊಳ್ಳುವ ರೀತಿಯಿಂದ ಮನಸಿಗೆ ಹಿಂಸೆಯಾಗುತ್ತದೆ. ಗೋದಾನ ಅಮೃತಕ್ಕೆ ಸಮಾನ ಎಂದರು. ಗೋ ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು. ಕ್ಯಾನ್ಸರ್ ಗುಣಪಡಿಸಲು ಗೋಮೂತ್ರ ಸಹಕಾರಿ ಎಂದು ಹೇಳಿದರು.
ಗೋಮೂತ್ರ ಹಾಗೂ ಪಂಚಗವ್ಯ ಜೊತೆಗೆ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿಕೊಂಡು ನನ್ನ ಕ್ಯಾನ್ಸರ್ ಗುಣಪಡಿಸಿಕೊಂಡೆ ಎಂದು ಪುನರುಚ್ಚರಿಸಿದರು. ಗೋಮಾತೆಯನ್ನು ಹಿಂಬದಿಯಿಂದ ಮುಂಬದಿಯ ತನಕ ಸವರಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.
ಎಟಿಎಸ್ ಅಧಿಕಾರಿ ಹೇಮಂತ್ ಕರ್ಕರೆಗೆ ಅವರು, ತಾನು ಶಾಪ ಕೊಟ್ಟ ನಂತರ ಅವರು ಸತ್ತಿದ್ದರು ಎಂದು ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ನಂತರ ಕ್ಷಮಾಪಣೆ ಕೇಳಿದ್ದರು. ಆದರೆ, ನಂತರ ಹಿಂದಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿರುವುದಕ್ಕೆ ಹೆಮ್ಮೆ ಇದೆ. ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ ಎಂದಿದ್ದರು.
'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ
ಈ ಹೇಳಿಕೆ ಕೂಡ ವಿವಾದದ ರೂಪ ಪಡೆದಿದ್ದು ಹಲವರು ಖಂಡಿಸಿದ್ದಾರೆ. ಚುನಾವಣಾ ಆಯೋಗ ಎರಡು ಪ್ರಕರಣಗಳಲ್ಲೂ ನೋಟಿಸ್ ಜಾರಿ ಮಾಡಿತ್ತು. ಸಾಧ್ವಿ ಹುಟ್ಟಿದ್ದು 1988ರಲ್ಲಿ, 1992ರಲ್ಲಿ ಕೇವಲ 4 ವರ್ಷದವರಿದ್ದು, ಹೇಗೆ ಧ್ವಂಸ ಮಾಡಲು ಸಾಧ್ಯ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಲವಾರು ಮಂದಿ ಪ್ರಶ್ನಿಸಿದ್ದರು.