ಬಿಜೆಪಿ ಮಹಿಳಾ ಅಭ್ಯರ್ಥಿಗೆ 'ಐಟಂ' ಎಂದ ಮಾಜಿ ಸಿಎಂಗೆ ನೋಟಿಸ್
ಭೋಪಾಲ್, ಅಕ್ಟೋಬರ್.21: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕಮಲನಾಥ್ ನೀಡಿದ "ಐಟಂ" ಎಂಬ ಹೇಳಿಕೆ ಸಾಕಷ್ಟು ಸುದ್ದಿ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಅಮಾರ್ತಿ ದೇವಿ ಕುರಿತಾಗಿ ಈ ಪದ ಬಳಸಿದ ಕಾರಣ ತಿಳಿಸುವಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ "ಐಟಂ" ಎಂಬ ಪದ ಬಳಸುವ ಹಿಂದಿನ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಸ್ವತಃ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಈ ಪದ ಬಳಸಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದರು.
ಮಹಿಳಾ ಅಭ್ಯರ್ಥಿ ಕುರಿತಾದ ಕಮಲ್ ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಖಂಡನೆ
ಮಾಜಿ ಸಿಎಂ ಕಮಲನಾಥ್ ಅವರು ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಸ್ಪಷ್ಟನೆ ಕೋರಿ ನೋಟಿಸ್ ಜಾರಿಗೊಳಿಸಿದೆ.
"ಐಟಂ" ಪದದ ಹಿಂದಿನ ಉದ್ದೇಶದ ಬಗ್ಗೆ ಸ್ಪಷ್ಟನೆ
"ನನಗೆ ಮಹಿಳೆಯರ ಬಗ್ಗೆ ಅಪಾರವಾದ ಗೌರವವಿದೆ. ನಾನು ಬೇರೆ ಏನನ್ನೋ ಹೇಳುವುದಕ್ಕೆ ಬಯಸಿದೆನು. ಆದರೆ ಅಚಾತುರ್ಯದಿಂದ ಬೇರೆ ಸಂದೇಶವೇ ರವಾನೆಯಾಗಿದೆ. ನಾನು ಈಗಾಗಲೇ ನನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಐಟಂ ಎಂಬ ಪದ ಬಳಸುವುದರ ಹಿಂದೆ ಯಾರನ್ನೂ ಅವಮಾನಿಸಬೇಕು ಎಂಬ ಉದ್ದೇಶ ಇರಲಿಲ್ಲ. ನಾನು ಹಾಗೆ ಹೇಳಿದ್ದರಿಂದ ಯಾರಿಗಾದರೂ ಅವಮಾನವಾಗಿದ್ದರೆ ಅದಕ್ಕೆ ವಿಷಾದವನ್ನು ವ್ಯಕ್ತಪಡಿಸಿದ್ದೇನೆ. ಇದರ ಹೊರತಾಗಿ ಯಾರಿಗೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ" ಎಂದು ಮಾಜಿ ಸಿಎಂ ಕಮಲನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಗಾಂಧಿ ತಪ್ಪು ಎಂದರೆ ಅದು ಅವರ ಅಭಿಪ್ರಾಯ
ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿಕೆಯನ್ನು ಸ್ವತಃ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರೇ ಖಂಡಿಸಿದ್ದರು. ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಮಲನಾಥ್ ನಮ್ಮ ಪಕ್ಷದವರೇ ನಿಜ. ಆದರೆ ಅವರು ಬಳಸಿದ ಭಾಷೆ ನನಗೆ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ. ಅದು ಯಾರೇ ಆಗಿದ್ದರೂ ನಾನು ಅದನ್ನು ಅನುಮೋದಿಸುವುದಿಲ್ಲ. ಇದು ಬಹಳ ದುರದೃಷ್ಟಕರ' ಎಂದಿದ್ದರು. ಈ ಹೇಳಿಕೆ ಬಗ್ಗೆ ಉಲ್ಲೇಖಿಸಿದ ಕಮಲನಾಥ್ ಅವರು, "ಐಟಂ" ಎಂಬ ಪದ ಬಳಕೆಯು ತಪ್ಪು ಎಂದು ರಾಹುಲ್ ಗಾಂಧಿಯವರು ಹೇಳಿದರೆ ಅದು ಅವರ ಅಭಿಪ್ರಾಯವಾಗುತ್ತದೆ ಎಂದಿದ್ದಾರೆ.
ಮಾಜಿ ಸಿಎಂ ವಿರುದ್ಧ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರತಿಭಟನೆ
ಬಿಜೆಪಿ ಅಭ್ಯರ್ಥಿ ಅಮಾರ್ತಿ ದೇವಿ ಅವರನ್ನು "ಐಟಂ" ಎಂದು ಸಂಬೋಧಿಸಿದಕ್ಕೆ ಮಾಜಿ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಮಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಕಮಲನಾಥ್ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಪಕ್ಷದ ನಾಯಕನ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದರು.
ಮಧ್ಯಪ್ರದೇಶದಲ್ಲಿ ಸದ್ದು ಮಾಡಿದ್ದು ಹೇಗೆ "ಐಟಂ"?
ದರ್ಮಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಕಮಲನಾಥ್ ಅವರು, ಐಟಂ ಎಂಬ ಪದ ಪ್ರಯೋಗಿಸಿದ್ದರು. ನಮ್ಮ ಪಕ್ಷದ ಅಭ್ಯರ್ಥಿಯು ಬಹಳ 'ಸರಳ ವ್ಯಕ್ತಿ'ಯೇ ಹೊರತು ಎದುರಾಳಿ ಪಕ್ಷದ 'ಐಟಂ' ರೀತಿ ಅಲ್ಲ ಎಂದು ಹೇಳಿದ್ದರು. ಭಾಷಣದ ಸಂದರ್ಭದಲ್ಲಿ ಕಮನಾಥ್, "ನಾನೇಕೆ ಅವರ ಹೆಸರು ಹೇಳಲಿ (ಎದುರಾಳಿ ಪಕ್ಷದ ಅಭ್ಯರ್ಥಿ)? ನನಗಿಂತ ನಿಮಗೇ ಚೆನ್ನಾಗಿ ಆ ವ್ಯಕ್ತಿ ಬಗ್ಗೆ ತಿಳಿದಿದೆ. ಎಂತಹ 'ಐಟಂ' ಎಂದು ಕಮಲ್ ನಾಥ್ ಹೇಳಿದ್ದರು". ಈ ಸಂದರ್ಭದಲ್ಲಿ ನೆರೆದಿದ್ದ ಜನರು ಜೋರಾಗಿ ಇಮಾರ್ತಿ ದೇವಿ ಎಂದು ಬಿಜೆಪಿ ಅಭ್ಯರ್ಥಿ ಹೆಸರನ್ನು ಕೂಗಿದರು.