ಕಾಂಗ್ರೆಸ್ ಸರ್ಕಾರವನ್ನು 10 ದಿನ ಕಾಪಾಡಿದ ಕೊರೊನಾ!
ಭೋಪಾಲ್, ಮಾರ್ಚ್ 16 : ಭಾರತ ಸೇರಿದಂತೆ ಪ್ರಪಂಚದ ವಿವಿಧ ದೇಶಗಳನ್ನು ಕಾಡುತ್ತಿರುವ ಕೊರೊನಾ ಕಾಂಗ್ರೆಸ್ ಸರ್ಕಾರವೊಂದನ್ನು ಉಳಿಸಿದೆ. ಹೌದು, ಮಧ್ಯಪ್ರದೇಶ ವಿಧಾನಸಭೆಯ ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನು ಹತ್ತು ದಿನಗಳ ಕಾಲ ಮುಂದೂಡಲಾಗಿದೆ.
22 ಶಾಸಕರ ರಾಜೀನಾಮೆ ಬಳಿಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಸೋಮವಾರ ಮುಖ್ಯಮಂತ್ರಿ ಕಮಲನಾಥ್ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿತ್ತು. ಆದರೆ, ವಿಧಾನಸಭೆ ಅಧಿವೇಶನ ಮುಂದೂಡಲಾಗಿದೆ.
ರಾಜ್ಯಪಾಲ ಲಾಲ್ಜಿ ಥಂಡನ್ ಮಧ್ಯಪ್ರದೇಶದ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 26ಕ್ಕೆ ಮುಂದೂಡಿದರು. ಕೊರೊನಾ ಭೀತಿ ಹಿನ್ನಲೆಯ ವಿಧಾನಸಭೆ ಅಧಿವೇಶವನ್ನು 10 ದಿನಗಳ ಕಾಲ ಮುಂದೂಡಿದ್ದು, ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸೋಮವಾರ ಭೋಪಾಲ್ನಲ್ಲಿ ವಿಧಾನಸಭೆ ಅಧಿವೇಶನ ಆರಂಭವಾದರೂ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿಯೇ ಇದ್ದರು. 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, 114 ಸದಸ್ಯ ಬಲವನ್ನು ಹೊಂದಿದ್ದ ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.
ರಾಜ್ಯಪಾಲರ ಭಾಷಣ
ಸೋಮವಾರ ಮಧ್ಯಪ್ರದೇಶ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಲಾಲ್ಜಿ ಥಂಡನ್ ಆಗಮಿಸಿದರು. ವಿಧಾನಸಭೆ ಅಧಿವೇಶನವನ್ನು 10 ದಿನಗಳ ಕಾಲ ಮುಂದೂಡಿದರು. "ಎಲ್ಲರೂ ಸಂವಿಧಾನದ ಪ್ರಕಾರ ಇರುವ ನಿಯಮಗಳನ್ನು ಪಾಲಿಸಬೇಕು. ರಾಜ್ಯದ ಘನತೆ ಕಾಪಾಡಬೇಕು" ಎಂದು ಕರೆ ನೀಡಿದರು. ಇದರಿಂದಾಗಿ ಕಮಲನಾಥ್ ಸರ್ಕಾರ ಹತ್ತು ದಿನಗಳ ಕಾಲ ಉಳಿಯಿತು.
ಕಮಲನಾಥ್ ಹಾಜರಿದ್ದರು
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್, ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ವಿಧಾನಸಭೆಯಲ್ಲಿ ಹಾಜರಿದ್ದರು. ಸೋಮವಾರ ವಿಶ್ವಾಸಮತವನ್ನು ಸಾಬೀತು ಮಾಡಬೇಕು ಎಂದು ರಾಜ್ಯಪಾಲರು ಶನಿವಾರ ಕಮಲನಾಥ್ಗೆ ಸೂಚನೆ ಕೊಟ್ಟಿದ್ದರು.
ವಿಶ್ವಾಸಮತ ಕೇಳಬೇಕು
ಮಧ್ಯಪ್ರದೇಶ ವಿಧಾನಸಭೆ ಒಟ್ಟು ಸದಸ್ಯ ಬಲ 230. 22 ಶಾಸಕರ ರಾಜೀನಾಮೆ ಬಳಿಕ ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು 115 ಸದಸ್ಯ ಬಲ ಬೇಕು. ಕಾಂಗ್ರೆಸ್ ಶಾಸಕರ ಸಂಖ್ಯೆ 114 (22 ಶಾಸಕರ ರಾಜೀನಾಮೆ). ಬಿಜೆಪಿ 109 ಸದಸ್ಯ ಬಲವನ್ನು ಹೊಂದಿದೆ.
ಬೆಂಗಳೂರಿನಲ್ಲಿಯೇ ಇರುವ ಶಾಸಕರು
ಮಧ್ಯಪ್ರದೇಶದ 22 ಕಾಂಗ್ರೆಸ್ ಶಾಸಕರು ಬೆಂಗಳೂರಿನ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿದ್ದರು. ಭಾನುವಾರ ಎಲ್ಲರೂ ರಮಡ ಹೋಟೆಲ್ಗೆ ವಾಸ್ತವ್ಯ ಬದಲಿಸಿದ್ದಾರೆ. ಇಂದು ವಿಧಾನಸಭೆ ಅಧಿವೇಶನವಿದ್ದರೂ ಶಾಸಕರು ಬೆಂಗಳೂರಿನಲ್ಲಿಯೇ ಇದ್ದಾರೆ.