ಹಿಂದೂಗಳು ಅಧಿಕವಿರುವ ಪ್ರದೇಶದಲ್ಲಿ ಬಳೆ ಮಾರಿದ್ದಕ್ಕೆ ವ್ಯಕ್ತಿಗೆ ಥಳಿತ: ಎಂಪಿ ಸಿಎಂ ವಿರುದ್ದ ಕಾಂಗ್ರೆಸ್ ಕಿಡಿ
ಇಂದೋರ್, ಆಗಸ್ಟ್ 23: ಹಿಂದೂ ಜನರು ಅಧಿಕವಾಗಿರುವ ಪ್ರದೇಶದಲ್ಲಿ ಬಳೆ ಮಾರಾಟ ಮಾಡಿದ ಎಂಬ ಕಾರಣಕ್ಕೆ ಮುಸ್ಲಿಂ ಬಳೆಗಾರನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಥಳಿಸಿದ ಅಮಾನುಷ ಘಟನೆ ಇಂದೋರ್ನ ಗೋವಿಂದ್ ನಗರದಲ್ಲಿ ಭಾನುವಾರ ನಡೆದಿದೆ.
ಈ ವಿಡಿಯೋವು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮುಸ್ಲಿಂ ಬಳೆಗಾರನಿಗೆ ಥಳಿಸುವ, ಒದೆಯುವ ದೃಶ್ಯ ಕಂಡು ಬಂದಿದೆ. ಹಾಗೆಯೇ ಈ ಮುಸ್ಲಿಂ ಬಳೆಗಾರ ಇನ್ನು ಮುಂದೆ ಹಿಂದೂಗಳ ಪ್ರದೇಶಕ್ಕೆ ಬರಬಾರದು ಎಂದು ಎಚ್ಚರಿಕೆಯನ್ನು ಕೂಡಾ ಈ ಗುಂಪು ಹೇಳಿದೆ. ಹಾಗೆಯೇ ಆತನ ಚೀಲದಲ್ಲಿದ್ದ ಬಳೆಗಳನ್ನು ಹೊರತೆಗೆಯಲಾಗಿದ್ದು, ಆತ ಜೇಬಿನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಣವನ್ನು ಕೂಡಾ ತೆಗೆದುಕೊಳ್ಳಲಾಗಿದೆ. ಈ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.
ಕಾನ್ಪುರದಲ್ಲಿ ಮಗಳ ಎದುರಲ್ಲೇ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ
ಈ ಬಗ್ಗೆ ಸಂತ್ರಸ್ತನ್ನು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ವ್ಯಕ್ತಿಯೋರ್ವ " ನಮ್ಮ ಸಹೋದರಿಯರು ಹಾಗೂ ಹೆಣ್ಣು ಮಕ್ಕಳು ಅಲ್ಲಿ (ಅಫ್ಘಾನಿಸ್ತಾನ) ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನೀನು ಇಲ್ಲಿ ಬಲೆ ಮಾರಾಟ ಮಾಡುತ್ತೀಯಾ?," ಎಂದು ಪ್ರಶ್ನಿಸಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಹಾಗೆಯೇ ಆ ವ್ಯಕ್ತಿಯು, "ಒಬ್ಬೊಬ್ಬರಾಗಿ ಈ ವ್ಯಕ್ತಿಗೆ ಥಳಿಸೋಣ," ಎಂದು ಕೂಡಾ ಹೇಳಿದ್ದಾನೆ. ಈ ಸಂದರ್ಭದಲ್ಲಿ ಆತಂಕಕ್ಕೆ ಒಳಗಾದ ಮುಸ್ಲಿಂ ಬಳೆಗಾರ ತನ್ನ ಕೈಯನ್ನು ತಲೆಯ ಮೇಲೆ ಹಿಡಿದು ತನ್ನನ್ನು ಬಿಟ್ಟು ಬಿಡುವಂತೆ ಮನವಿ ಮಾಡಿದ್ದಾನೆ. ಜೋರಾಗಿ ಅತ್ತಿದ್ದಾನೆ. ಈ ಗುಂಪು ಮುಸ್ಲಿಂ ಬಳೆಗಾರನಿಗೆ ಥಳಿಸಿದ್ದು ಮಾತ್ರವಲ್ಲದೇ ಆತನ ಹಣವನ್ನು, ವಸ್ತುಗಳನ್ನು ದೋಚಿಕೊಂಡಿದೆ.
ಈ ವಿಚಾರದ ಬಗ್ಗೆ ವಿಡಿಯೋ ಜೊತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಇಮ್ರಾನ್ ಪ್ರತಾಪ್ಗಿರಿ, "ಈ ವೀಡಿಯೋ ಅಫ್ಘಾನಿಸ್ತಾನದ್ದಲ್ಲ, ಇಂದೋರ್ನಲ್ಲಿ ನಡೆದಿದ್ದು. ಮಧ್ಯಪ್ರದೇಶದಲ್ಲಿ ಚೌಹಣ್ ಶಿವರಾಜ್ ಜೀ ಅವರ ಕನಸಿನ ರಾಜ್ಯದಲ್ಲಿ ನಡೆದಿದೆ. ಬಳೆ ಮಾರಾಟಗಾರನ ಸರಕುಗಳನ್ನು ಲೂಟಿ ಮಾಡಲಾಗಿದೆ ಮತ್ತು ಸಾರ್ವಜನಿಕವಾಗಿ ಜನರು ಹಲ್ಲೆ ನಡೆಸಿದ್ದಾರೆ," ಎಂದು ತಿಳಿಸಿದ್ದಾರೆ. ಹಾಗೆಯೇ "ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, "ನೀವು ಭಾರತ ಇದನ್ನು ಮಾಡಬೇಕು ಎಂದು ಬಯಸಿದ್ದೀರಾ. ಈ ಭಯೋತ್ಪಾದಕರ ವಿರುದ್ದ ಯಾವ ಕ್ರಮ ಕೈಗೊಳ್ಳವುದು," ಎಂದು ಪ್ರಶ್ನಿಸಿದ್ದಾರೆ. ಇನ್ನು ಕಾಂಗ್ರೆಸ್ ಮಧ್ಯಪ್ರದೇಶ ಕೂಡಾ ಟ್ವೀಟ್ ಮಾಡಿದೆ. "ಬಿಜೆಪಿ ಸರ್ಕಾರವು ಪರಸ್ಪರ ಸಹೋದರತ್ವಕ್ಕೆ ಧಕ್ಕೆ ತಂದಿದೆ," ಎಂದು ಹೇಳಿದೆ.
ಯುಪಿಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನು
ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರ್ ಪಟ್ಟಣದಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿ "ಜೈ ಶ್ರೀ ರಾಮ್" ಘೋಷಣೆಗಳನ್ನು ಕೂಗಲಾಗಿದೆ, ಕೂಗುವಂತೆ ಒತ್ತಾಯ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಸ್ಥಳೀಯರು ಚಿತ್ರೀಕರಿಸಿದ ಘಟನೆಯ ದುಃಖಕರ ದೃಶ್ಯದ ವಿಡಿಯೋ ಸೆರೆ ಹಿಡಿದಿದ್ದಾರೆ. ದೃಶ್ಯದಲ್ಲಿ ವ್ಯಕ್ತಿಯ ಪುಟ್ಟ ಮಗಳು ಆತನಿಗೆ ಅಂಟಿಕೊಂಡಿರುವುದನ್ನು ಮತ್ತು ದಾಳಿಕೋರರನ್ನು ಆತನನ್ನು ಉಳಿಸುವಂತೆ ಬೇಡಿಕೊಳ್ಳುವುದನ್ನು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ ಈ ವ್ಯಕ್ತಿಯು ದೂರು ನೀಡಿದ್ದಾರೆ.
बीजेपी सरकार आपसी भाईचारे को निगल गई। https://t.co/8zbTMTslL0
— MP Congress (@INCMP) August 22, 2021
"ನಾನು ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಇ-ರಿಕ್ಷಾವನ್ನು ಓಡಿಸುತ್ತಿದ್ದೆ, ಆಗ ಆರೋಪಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಲು ಮತ್ತು ನಿಂದಿಸಲು ಆರಂಭಿಸಿದರು. ಪೋಲಿಸರು ಸ್ಥಳಕ್ಕೆ ಬಂದ ಕಾರಣದಿಮದಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ," ಎಂದು ಇ-ರಿಕ್ಷಾ ಚಾಲಕನಾದ ಹಲ್ಲೆಗೊಳಗಾದ ವ್ಯಕ್ತಿ ದೂರಿನಲ್ಲಿ ಹೇಳಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೂವರು ಆರೋಪಿಗಳು, ಬಂಧನಕ್ಕೆ ಒಳಗಾದ 24 ಗಂಟೆಗಳ ಒಳಗೆ ಜಾಮೀನು ಮೂಲಕ ಬಿಡುಗಡೆಯಾಗಿದ್ದಾರೆ.
(ಒನ್ ಇಂಡಿಯಾ ಸುದ್ದಿ)