ಪ್ರಗ್ಯಾ ಸಿಂಗ್ ರನ್ನು ಸುಟ್ಟುಬಿಡುತ್ತೇನೆ ಎಂದ ಕಾಂಗ್ರೆಸ್ ಶಾಸಕ
ಭೋಪಾಲ್, ನವೆಂಬರ್ 29: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಅವರನ್ನು ಸುಟ್ಟುಬಿಡುತ್ತೇನೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಬೆದರಿಕೆ ಒಡ್ಡಿದ್ದಾರೆ.
ಮಧ್ಯಪ್ರದೇಶದ ಬಿಯೋರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ, "ಪ್ರಗ್ಯಾ ಸಿಂಗ್ ಏನಾದರೂ ಇಲ್ಲಿಗೆ ಬಂದರೆ ನಾವು ಅವರ ಪ್ರತಿಕೃತಿಯನ್ನಲ್ಲ, ಅವರನ್ನೇ ಸುಟ್ಟುಬಿಡುತ್ತೇವೆ" ಎಂದಿದ್ದಾರೆ.
ಕರ್ಕರೆ ಆಯ್ತು, ಈಗ ಗೋಡ್ಸೆ! ಪ್ರಗ್ಯಾ ಮಾತನಾಡಿದ್ದೆಲ್ಲ ವಿವಾದವೇ!
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಗ್ಯಾ ನವೆಂಬರ್ 29 ರಂದು ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದರು. ಈ ಘಟನೆಯ ನಂತರ ಪ್ರಗ್ಯಾ ಅವರು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಹಲವು ವಿವಾದಾತ್ಮಕ ಹೇಳಿಕೆಗಳು ಗಮನ ಸೆಳೆದವು. ಅವುಗಳಲ್ಲಿ ನೆನಪಿಸಿಕೊಳ್ಳುವಂಥ ಕೆಲವು ಇಲ್ಲಿವೆ.
"ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದಿದ್ದೇಕೆ" ಎಂದು ಡಿಎಂಕೆ ಸದಸ್ಯ ಎ ರಾಜ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ, "ಗೋಡ್ಸೆಯೊಬ್ಬ ದೇಶಭಕ್ತರಾಗಿದ್ದು, ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಎಂದರು. ಅಲ್ಲದೇ ಹತ್ಯೆ ವಿಚಾರದಲ್ಲಿ ದೇಶಭಕ್ತನನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದು" ಎಂದಿದ್ದರು. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಗೋಡ್ಸೆಯನ್ನು ದೇಶಭಕ್ತ ಎನ್ನುವ ಮೂಲಕ ಪ್ರಗ್ಯಾ ವಿವಾದ ಸೃಷ್ಟಿಸಿದ್ದರು.