ಮಧ್ಯಪ್ರದೇಶ: ವಿಶ್ವಾಸಮತಕ್ಕೆ 2ದಿನದ ಮುನ್ನ ಅಮಿತ್ ಶಾಗೆ ಪತ್ರ ಬರೆದ ಕಮಲ್ ನಾಥ್
ಭೋಪಾಲ್, ಮಾರ್ಚ್ 15: ರಾಜ್ಯದ ಪ್ರಭಾವೀ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಗೆ ಸೇರಿದ ನಂತರ, ಪತನದ ಅಂಚಿನಲ್ಲಿರುವ ಕಮಲ್ ನಾಥ್ ಸರಕಾರದ ಭವಿಷ್ಯ ಸೋಮವಾರ (ಮಾ 16) ನಿರ್ಣಯವಾಗಲಿದೆ.
ಮುಖ್ಯಮಂತ್ರಿ ಕಮಲ್ ನಾಥ್ ಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಲಾಲಾಜೀ ಥಂಡನ್ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿಶ್ವಾಸ ಮತ ಸಾಬೀತು ಮಾಡುವ ಪ್ರಕ್ರಿಯೆಯನ್ನು ಮುಂದೂಡಬಾರದು, ಸ್ಥಗಿತಗೊಳಿಸಬಾರದು. ಸೋಮವಾರ ಪ್ರಕ್ರಿಯೆ ನಡೆಯಬೇಕು ಎನ್ನುವ ಸ್ಪಷ್ಟ ಸೂಚನೆ ರಾಜ್ಯಪಾಲರಿಂದ ಬಂದಿದೆ.
ಮಧ್ಯಪ್ರದೇಶ : ರಾಜೀನಾಮೆ ನೀಡಿದ 22 ಶಾಸಕರಿಗೆ ಸ್ಪೀಕರ್ ನೋಟಿಸ್
ಈ ನಡುವೆ, ಮುಖ್ಯಮಂತ್ರಿ ಕಮಲ್ ನಾಥ್, ಕೇಂದ್ರ ಗೃಹಸಚಿವ ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ. ಕರ್ನಾಟಕದಲ್ಲಿರುವ 22 ಅತೃಪ್ತ ಶಾಸಕರ ರಕ್ಷಣೆಗೆ ಅಲ್ಲಿನ ಮುಖ್ಯಮಂತ್ರಿಗಳಿಗೆ ಸೂಚನೆಯನ್ನು ನೀಡಬೇಕೆಂದು ಕಮಲ್ ನಾಥ್, ಪತ್ರದಲ್ಲಿ ಬರೆದಿದ್ದಾರೆ.
22 ಅತೃಪ್ತರಲ್ಲಿ 19 ಶಾಸಕರು ಬೆಂಗಳೂರಿನಲ್ಲಿದ್ದು, ಈ ಎಲ್ಲಾ ಶಾಸಕರು ಸಿಆರ್ ಪಿಎಫ್ ರಕ್ಷಣೆಯನ್ನು ಕೋರುತ್ತಿದ್ದಾರೆ ಎಂದು ಕಮಲ್ ನಾಥ್ ಪತ್ರದ ಮುಖೇನ ಮನವಿ ಮಾಡಿದ್ದಾರೆ. ಈ ಎಲ್ಲಾ ಶಾಸಕರು ರಕ್ಷಣೆಗಾಗಿ ರಾಜ್ಯಪಾಲರಲ್ಲಿ ನೇರವಾಗಿ ಮನವಿ ಮಾಡಿದ್ದರು.
ಇ-ಮೇಲ್ ಮೂಲಕ ರಾಜ್ಯಪಾಲರಲ್ಲಿ ಮನವಿ ಮಾಡಿರುವ ಈ ಶಾಸಕರು, "ವಿಶ್ವಾಸಮತ ಗೊತ್ತುವಳಿಯ ವೇಳೆ ಭದ್ರತೆಯ ಕಾರಣಕ್ಕಾಗಿ ನಮಗೆ ಭೋಪಾಲ್ ಗೆ ಬರಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. "ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ, ಅವರ ರಕ್ಷಣೆ ನೋಡಿಕೊಳ್ಳುವುದು ನನ್ನ ಜಬಾಬ್ದಾರಿ. ಹಾಗಾಗಿ ಅಮಿತ್ ಶಾಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗಿದೆ" ಎಂದು ಕಮಲ್ ನಾಥ್ ಹೇಳಿದ್ದಾರೆ.
ಮಾ. 16ಕ್ಕೆ ಬಹುಮತ ಸಾಬೀತು ಮಾಡಲು ಕಲಮನಾಥ್ಗೆ ಸೂಚನೆ
"ಶಾಸಕರು ರಾಜೀನಾಮೆ ಪತ್ರವನ್ನು ಪ್ರತ್ಯೇಕವಾಗಿ ನನಗೂ ಸಹ ಕಳಿಸಿದ್ದಾರೆ. ಮಾರ್ಚ್ 10ರಂದು ಶಾಸಕರ ರಾಜೀನಾಮೆ ಪತ್ರ ತಲುಪಿದೆ. ಸಂವಿಧಾನದ 174 ಮತ್ತು 175 (2) ನಿಯಮಗಳ ಅನ್ವಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಸೂಚಿಸುತ್ತಿದ್ದೇನೆ" ಎಂದು ರಾಜ್ಯಪಾಲರು ಹೇಳಿದ್ದಾರೆ. (ಚಿತ್ರ: ಪಿಟಿಐ)