ಆಪರೇಷನ್ ಕಮಲ; ಮಧ್ಯಪ್ರದೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ
ಇಂದೋರ್, ಮಾರ್ಚ್ 5; ಮಧ್ಯಪ್ರದೇಶದಲ್ಲಿ ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಧ್ಯಪ್ರದೇಶದ ಸುವಸ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಾಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಇದರಿಂದ ಕಮಲನಾಥ್ ನೇತೃತ್ವದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಶಾಸಕ ಹರ್ದೀಪ್ ಸಿಂಗ್ ದಾಂಗ್ ಹಾಗೂ ಇತರ ಮೂವರು ಕಾಂಗ್ರೆಸ್ ಶಾಸಕರು ಶಾಸಕರಾದ ಸುರೇಂದ್ರ ಸಿಂಗ್ ಶೆರಾ, ರಘುರಾಜ್ ಕನ್ಸಾನ್ ಹಾಗೂ ಬಿಸಾಹುಲ್ ಲಾಲ್ ಸಿಂಗ್ ಬಿಜೆಪಿ ಆಶ್ರಯದಲ್ಲಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಇದ್ದಾರೆ ಎಂಬ ವರದಿಗಳು ಬಂದಿವೆ. ಇನ್ನೂ ಮೂವರು ರಾಜೀನಾಮೆ ಕೊಡಬಹುದು ಎನ್ನಲಾಗಿದೆ. ಇದರಿಂದ ಕಮಲನಾಥ್ ಸರ್ಕಾರ ಉರುಳುತ್ತಾ ಎನ್ನುವ ಊಹಾಪೋಹಗಳು ಎದ್ದಿವೆ
ಆಪರೇಷನ್ ಕಮಲ; ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ!
ಮದ್ಯಪ್ರದೇಶದಲ್ಲಿ ಕಾಂಗ್ರೆಸ್ ಇತರ ಪಕ್ಷೇತರ ಶಾಸಕರನ್ನು ನಂಬಿ ಸರ್ಕಾರ ರಚಿಸಿದೆ. 230 ಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 109, ಕಾಂಗ್ರೆಸ್ 114 ಹಾಗೂ ಇತರರು 7 ಜನ ಸ್ಥಾನ ಪಡೆದಿದ್ದರು. ಬಹುಮತಕ್ಕೆ 116 ಸ್ಥಾನಗಳ ಅಗತ್ಯತೆ ಇದೆ.
ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡಿ ಹೋಗಿತ್ತು ಎಂದು ಆರೋಪಿಸಲಾಗಿತ್ತು. ಇದರಿಂದ ಕಮಲನಾಥ್ ಸಂಕಷ್ಟದಲ್ಲಿ ಸಿಲುಕಿದ್ದಾರೆ.