ಮಧ್ಯಪ್ರದೇಶದಲ್ಲಿ ಶುರುವಾಯಿತು ಕಾಂಗ್ರೆಸ್ಸಿಗೆ ರಾಜಕೀಯ ತಳಮಳದ ಸುದ್ದಿ
ದೇಶದ ಹೃದಯ ಭಾಗದಲ್ಲಿರುವ, ಹಿಂದಿ ಬೆಲ್ಟಿನ ಪ್ರಮುಖ ರಾಜ್ಯ ಮಧ್ಯಪ್ರದೇಶದಲ್ಲಿ ಸುಮಾರು ಒಂದೂವರೆ ದಶಕಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೇರಲು ಶಕ್ತವಾಗಿದೆ. ಆದರೆ, ಕಮಲ್ ನಾಥ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಒಂದೇ ತಿಂಗಳಲ್ಲಿ 'ಕುದುರೆ ವ್ಯಾಪಾರದ' ಗುಸುಗುಸು ಸುದ್ದಿಗಳು ಹರಿದಾಡಲಾರಂಭಿಸಿದೆ.
ಅಸಲಿಗೆ, ಆಪರೇಷನ್ ಕಮಲ ನಡೆಸಲು ಬಿಜೆಪಿಗೆ ಕರ್ನಾಟಕಕ್ಕಿಂತ ಮಧ್ಯಪ್ರದೇಶದಲ್ಲಿ ಸುಲಭ. ಯಾಕೆಂದರೆ, ಕಾಂಗ್ರೆಸ್ಸಿಗೆ ಮಧ್ಯಪ್ರದೇಶದಲ್ಲಿ ಸಿಕ್ಕಿದ್ದು ಅಭೂತಪೂರ್ವ ಗೆಲುವೇನಲ್ಲ. ಸ್ವಲ್ಪ ಯಾಮಾರಿದರೂ ಸರಕಾರ ಪಲ್ಟಿ ಹೊಡೆಯುವ ಸಾಧ್ಯತೆಯಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು, ಬಿಎಸ್ಪಿ ಮತ್ತು ಪಕ್ಷೇತರರನ್ನು ಸೆಳೆದು ಮತ್ತೆ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎನ್ನುವ ಸುದ್ದಿ ಕೆಲವು ದಿನದಿಂದ ಹರಿದಾಡುತ್ತಿದೆ. ಅದನ್ನು ಬುಲ್ಶಿಟ್ ಅಂದಿದ್ದರು ಸಿಎಂ ಕಮಲ್ ನಾಥ್. ಈಗ ಅವರಿಗೆ ಬೆಂಬಲ ನೀಡಿರುವ ಬಿಎಸ್ಪಿ ಕೂಡಾ ನಿಮ್ಮ ಶಾಸಕರ ಬಗ್ಗೆ ಎಚ್ಚರದಿಂದ ಇರಿ ಎಂದು ಮುಖ್ಯಮಂತ್ರಿಗಳಿಗೆ ಕಿವಿಮಾತನ್ನು ಹೇಳಿದೆ.
ಮಧ್ಯಪ್ರದೇಶ: ಕಾಂಗ್ರೆಸ್ಸಿಗೆ ಶುರುವಾಯ್ತು ಆಪರೇಷನ್ ಕಮಲ ಭೀತಿ
ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ, ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ನಲ್ಲಿ ಮಂಚೂಣಿಯಲ್ಲಿದ್ದ ಗುಣಾ ಕ್ಷೇತ್ರದ ಸಂಸದರೂ ಆಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಒಂದು ದಿನದ ಹಿಂದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿದ್ದು.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್
ಒಂದು ವಾರದ ಹಿಂದೆ ಬಿಜೆಪಿ ತನ್ನ ಶಾಸಕರನ್ನು ಸೆಳೆಯುತ್ತಿದೆ ಎನ್ನುವ ಸುದ್ದಿಯನ್ನು ನಿರಾಕರಿಸಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಈಗ ಆ ಸುದ್ದಿಯನ್ನು ಒಪ್ಪಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕನಿಷ್ಠ ಐದು ಜನ ನಮ್ಮ ಶಾಸಕರ ಜೊತೆ ಬಿಜೆಪಿಯ ಮುಖಂಡರು ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಅಲ್ಲಿಗೆ, ಕರ್ನಾಟಕದ ರೀತಿಯಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಅಲ್ಲೂ ಮುಂದಾಗಿದೆ.
ಕಾಂಗ್ರೆಸ್ ಆಸೆಗೆ ತಣ್ಣೀರು ಎರಚಿದ ನಟಿ ಕರೀನಾ ಕಪೂರ್
ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ನಾನು ಗಮನಿಸಿದ್ದೇನೆ
ಇದೇ ವೇಳೆ, ಬಿಜೆಪಿಯಲ್ಲಿ ಭವಿಷ್ಯ ಕಾಣದ 5-6 ಆ ಪಕ್ಷದ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿರುವ ಕಮಲ್ ನಾಥ್, ಸದ್ಯಕ್ಕೆ ಅವರ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ. ಬಿಜೆಪಿ ಸಂಪರ್ಕದಲ್ಲಿರುವ ಐದು ಜನ ನಮ್ಮ ಶಾಸಕರ ನಡುವಳಿಕೆಯನ್ನು ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ನಾನು ಗಮನಿಸಿದ್ದೇನೆ. ನಮ್ಮ ಪಕ್ಷದ ಇತರ ಶಾಸಕರುಗಳ ಜೊತೆ ಅವರುಗಳು ಸೇರುತ್ತಿರಲಿಲ್ಲ ಎಂದು ಕಮಲ್ ನಾಥ್ ಹೇಳಿದ್ದಾರೆ.
ಕಾಂಗ್ರೆಸ್-ಬಿಎಸ್ಪಿ-ಪಕ್ಷೇತರ ಶಾಸಕರ ಸಭೆ
ಇದರ ಜೊತೆಗೆ, ಬಿಎಸ್ಪಿಯ ಇಬ್ಬರು ಶಾಸಕರ ಜೊತೆ ಬಿಜೆಪಿ ಸಂಪರ್ಕದಲ್ಲಿದೆ. ಕಮಲ್ ನಾಥ್ ಕರೆದಿದ್ದ ಕಾಂಗ್ರೆಸ್-ಬಿಎಸ್ಪಿ-ಪಕ್ಷೇತರ ಶಾಸಕರ ಸಭೆಗೆ ಬಿಎಸ್ಪಿಯ ಇಬ್ಬರು ಗೈರಾಗಿದ್ದರು. ಸಂಜೀವ್ ಖುಷ್ವಾ ಮತ್ತು ರಾಂಭಾಯಿ ಸಭೆಯಿಂದ ದೂರವುಳಿದಿದ್ದರು. ಮಧ್ಯಪ್ರದೇಶದಲ್ಲಿ ಬಿಜೆಪಿ ಸುಮ್ಮನೆ ಕೂತಿಲ್ಲ, ಅಧಿಕಾರಕ್ಕೇರಲು ಹಿಬಾಗಿಲಿನಿಂದ ಪ್ರಯತ್ನಿಸುತ್ತಿದೆ, ಕಮಲ್ ನಾಥ್ ತಮ್ಮ ಶಾಸಕರ ಮೇಲೆ ಕಣ್ಣಿಟ್ಟಿರಲಿ ಎಂದು ಮಂಗಳವಾರ (ಜ 22) ಬಿಎಸ್ಪಿಯ ಮುಖಂಡರೊಬ್ಬರು ಮತ್ತೆ ಮಧ್ಯಪ್ರದೇಶದ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಜ್ಯೋತಿರಾಧಿತ್ಯ ಸಿಂದಿಯಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನಡುವೆ ಸಭೆ
ಇವೆಲ್ಲದರ ನಡುವೆ ಸೋಮವಾರ ತಡರಾತ್ರಿ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನಡುವೆ ಸಭೆ ನಡೆದಿದೆ. ಶಿವರಾಜ್ ಮನೆಯಲ್ಲಿ ನಡೆದ ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ ಇಬ್ಬರು ನಾಯಕರು ಬಿಟ್ಟರೆ ಇನ್ಯಾರಿಗೂ ಪ್ರವೇಶವಿರಲಿಲ್ಲ. ಸುಮಾರು ನಲವತ್ತು ನಿಮಿಷ ನಡೆದ ಸಭೆ, ಮಧ್ಯಪ್ರದೇಶದಲ್ಲಿ ಭಾರೀ ಊಹಾಪೋಹಕ್ಕೆ ಅನುವು ಮಾಡಿಕೊಟ್ಟಿದೆ.
ಕಾಂಗ್ರೆಸ್ 114, ಬಿಜೆಪಿ 109 ಸ್ಥಾನವನ್ನು ಗೆದ್ದಿತ್ತು
230ಸ್ಥಾನದ ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 114, ಬಿಜೆಪಿ 109 ಸ್ಥಾನವನ್ನು ಗೆದ್ದಿತ್ತು. ನಾಲ್ಕು ಜನ ಪಕ್ಷೇತರರು, ಇಬ್ಬರು ಬಹುಜನ ಸಮಾಜಪಕ್ಷದ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ರಚಿಸಿತ್ತು. ಸಿಂದಿಯಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಸುದ್ದಿಯ ನಡುವೆ, ಇಬ್ಬರು ನಾಯಕರ ನಡುವಿನ ಸಭೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ನನ್ನ ಮತ್ತು ಕಮಲ್ ನಾಥ್ ಅವರ ಬಾಂಧವ್ಯ ತುಂಬಾ ಚೆನ್ನಾಗಿದೆ ಎಂದು ಸಿಂದಿಯಾ ಹೇಳಿಕೆಯನ್ನೇನೋ ನೀಡಿದ್ದಾರೆ.